ನಿವೃತ್ತ ಡಿಜಿ ಐಜಿಪಿ ಓಂ ಪ್ರಕಾಶ್ ಮಗಳು ಕೃತಿ ಕಿರಿಕ್​; ನಂದಿನಿ ಬೂತ್​​ನಲ್ಲಿದ್ದ ಬಾಟಲ್​ ಹೊಡೆದು ರಂಪಾಟ!

ಬೆಂಗಳೂರು: ಇತ್ತೀಚೆಗೆ ನಿವೃತ್ತ ಡಿಜಿ, ಐಜಿಪಿ ಓಂಪ್ರಕಾಶ್ಅವರ ಪತ್ನಿಯಿಂದಲೇ ಕೊಲೆಯಾಗಿದ್ದರು. ಪತ್ನಿ ಜೈಲಿನಲ್ಲಿದ್ದಾರೆ. ಇದೀಗ ಅವರ ಪುತ್ರಿ , ಮಾನಸಿಕ ಅಸ್ವಸ್ಥೆಯಾಗಿರುವ ಕೃತಿ ಎಂಬಾಕೆ ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ಠಾಣಾ ವ್ಯಾಪ್ತಿಯಲ್ಲಿರುವ ಮನೆ ಸಮೀಪದ ನಂದಿನಿ ಬೂತ್‌ನಲ್ಲಿ ರಂಪಾಟ ಎಸಗಿ ಸುದ್ದಿಯಾಗಿದ್ದಾರೆ. ಬೂತ್‌ಗೆ ಬಂದು ಕೂಗಾಡಿ, ಅಲ್ಲಿದ್ದ ಬಾಟಲಿಗಳನ್ನು ಒಡೆದುಹಾಕಿ ಗಲಾಟೆ ಎಬ್ಬಿಸಿದ್ದಾರೆ.

ಜೂನ್ 30ಕ್ಕೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೃತಿ ವರ್ತನೆಗೆ ಬೇಸತ್ತ ಬೂತ್‌ ಮಾಲಿಕ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಕೃತಿಯನ್ನು ಕರೆದೊಯ್ದಿದ್ದಾರೆ. ದೂರು ನೀಡಿದರೂ ಪೊಲೀಸರು ಯಾವುದೇ ದೂರು ಸ್ವೀಕರಿಸಿಲ್ಲ ಎಂದು ನಂದಿನಿ ಬೂತ್ ಅಂಗಡಿ ಮಾಲೀಕ ತಿಳಿಸಿದ್ದಾರೆ.

ಓಂಪ್ರಕಾಶ್‌ ಪತ್ನಿ ಹಾಗೂ ಪುತ್ರಿ ಇಬ್ಬರೂ ಮಾನಸಿಕವಾಗಿ ಅಸ್ಥಿರರಾಗಿರುವುದು ಕಂಡುಬಂದಿದೆ. ಪತ್ನಿ ಈಗಾಗಲೇ ಓಂಪ್ರಕಾಶ್‌ ಕೊಲೆ ಆರೋಪಿಯಾಗಿದ್ದು ಜೈಲುಪಾಲಾಗಿದ್ದಾರೆ. ಕೃತಿಯ ಅತಿಯಾದ ವರ್ತನೆಯಿಂದ ಬೇಸತ್ತು ಬಂಧುಬಳಗದವರು, ಸ್ನೇಹಿತರು ಆಕೆಯಿಂದ ದೂರವಾಗಿದ್ದಾರೆ. ಮನೆಯ ಸುತ್ತಮುತ್ತಲಿನವರು ಹಾಗೂ ಅಂಗಡಿಯವರು ಕೂಡ ಈಕೆಯ ವರ್ತನೆಯಿಂದ ರೋಸಿಹೋಗಿದ್ದು, ಅಂತರ ಕಾಪಾಡಿಕೊಂಡಿದ್ದಾರೆ. ಮಾನಸಿಕ ಖಿನ್ನತೆಗೆ ಒಳಗಾಗಿರುವ ಕೃತಿಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಬೇಕಿದೆ ಎಂದು ಅಕ್ಕಪಕ್ಕದವರು ಆಗ್ರಹಿಸಿದ್ದಾರೆ.