ವಾಹನದ ಮೇಲೆ ಮುರಿದು ಬಿದ್ದ ವಿದ್ಯುತ್ ಕಂಬ, ಪ್ರಾಣಾಪಾಯದಿಂದ ಪಾರಾದ ಕಾರ್ಮಿಕರು

ಕಾರವಾರ(ಉತ್ತರ ಕನ್ನಡ): ಮುಂಡಗೋಡ ತಾಲೂಕಿನ ಬೆಡಸಗಾಂವ್​ ಗ್ರಾಮದಲ್ಲಿ ದೊಡ್ಡ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. 10ಕ್ಕೂ ಹೆಚ್ಚು ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವಾಹನದ ಮೇಲೆ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ರಾಮಾಪುರದಿಂದ ಹುಲೆಕಲ್‌ಗೆ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರಿದ್ದ ವಾಹನ ಸಂಚರಿಸುವಾಗ, ಮರ ಮುರಿದು ವಿದ್ಯುತ್​ ತಂತಿಗಳ ಮೇಲೆ ಬಿದ್ದಿದೆ. ಪರಿಣಾಮ ವಿದ್ಯುತ್​ ಕಂಬವು ಮುರಿದು ವಾಹನದ ಮೇಲೆ ಬಿದ್ದಿದೆ. ಇದಕ್ಕೂ ಮುನ್ನ ಮುಂಜಾಗೃತವಾಗಿ ಬೆಡಸಗಾಂವ್​ ಗ್ರಾಮದ ವಿಜಯ ಶಾಂತು ನಾಯ್ಕ ಅವರು ಮರ ಮುರಿದು ಬೀಳುವ ಮುನ್ಸೂಚನೆಯಿಂದ, ಮುಂಚಿತವಾಗಿ ವಿದ್ಯುತ್​ ಸಂಪರ್ಕವನ್ನು ಕಡಿತಗೊಳಿಸಿದ್ದರು. ಹೀಗಾಗಿ, ವಿದ್ಯುತ್​​​​ ಕಂಬ ವಾಹನದ ಮೇಲೆ ಬಿದ್ದರೂ ವಿದ್ಯುತ್​​​ ಪ್ರವಹಿಸದ ಕಾರಣ, ಕಾರ್ಮಿಕರೆಲ್ಲರೂ ಸುರಕ್ಷಿತವಾಗಿ ಪಾರಾಗಿದ್ದಾರೆ.