ಇಸ್ರೇಲ್​ನಲ್ಲಿ ಸಿಲುಕಿದ ಕನ್ನಡಿಗರು ಬಂಕರ್​ನಲ್ಲಿ ಸೇಫ್, ಕನ್ನಡ ಹಾಡು ಹಾಡುತ್ತ ಟೈಮ್ ಪಾಸ್

ಬೆಂಗಳೂರು, ಜೂನ್​ 18: ಇಸ್ರೇಲ್ ಹಾಗೂ ಇರಾನ್​ ನಡುವೆ ತೀವ್ರ ಯುದ್ಧ ನಡೆಯುತ್ತಿದೆ. ಎರಡು ದೇಶಗಳ ನಡುವೆ ಮಿಸೈಲ್​ ಡ್ರೋನ್​ ವಾರ್​ ನಡೆಯುತ್ತಿದ್ದು, ಜನಸಾಮಾನ್ಯರು ದಾಳಿಗೆ ತುತ್ತಾಗಿದ್ದಾರೆ. ಇಂತಹ ಆತಂಕದ ಪರಿಸ್ಥಿತಿಯ ನಡುವೆ ಇಸ್ರೇಲ್​ನ ಟೆಲ್ ಅವೀವ್​​ನಲ್ಲಿ 18 ಮಂದಿ ಕನ್ನಡಿಗರು ಸಿಲುಕಿಕೊಂಡಿದ್ದಾರೆ. ಇವರು ಅಧ್ಯಯನಕ್ಕೆಂದು ಇಸ್ರೇಲ್​​ಗೆ ತೆರಳಿದ್ದರು ಎಂದು ತಿಳಿದುಬಂದಿದೆ. ಯುದ್ಧದ ಸೈರನ್ ಮೊಳಗಿದ ಕೂಡಲೇ ಕನ್ನಡಿಗರು ಬಂಕರ್​ ಪ್ರವೇಶಿಸುತ್ತಿದ್ದು, ಮೂರನೇ ಮಹಡಿಯಲ್ಲಿ ಆಶ್ರಯ ಪಡೆದಿದ್ದಾರೆ. ಸದ್ಯಕ್ಕೆ ಯಾವುದೇ ಅಪಾಯವಿಲ್ಲ ಸುರಕ್ಷಿತವಾಗಿದ್ದೇವೆಂದು ಕನ್ನಡಿಗರು ಮಾಹಿತಿ ನೀಡಿದ್ದಾರೆ.

ಇಸ್ರೇಲ್​ನ ರನಾನದಲ್ಲಿ ಮಂಗಳೂರಿನ ವ್ಯಕ್ತಿ ವಾಸ

ಮಂಗಳೂರಿನ ಮೂಡಬಿದಿರೆ ನಿವಾಸಿ ಅಮಿತ್ ಕೋಟ್ಯಾನ್‌ ಇಸ್ರೇಲ್​ನಲ್ಲಿರುವ ರನಾನ ಎಂಬ ಪ್ರದೇಶದಲ್ಲಿ ವಾಸವಾಗಿದ್ದಾರೆ. ಇವರು ಕ್ಷಿಪಣಿ ದಾಳಿಯನ್ನು ಮೊಬೈಲ್​ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. “ಕಳೆದ ಒಂದು ವರ್ಷದಿಂದ ಇಸ್ರೇಲ್​ನಲ್ಲಿ ವಾಸವಾಗಿದ್ದೇನೆ. ದಾಳಿಯಾಗುವ ಹತ್ತು ನಿಮಿಷದ ಮೊದಲು ಸೈರನ್ ಮೊಳಗುತ್ತದೆ. ವಾಟ್ಸಪ್​ಗೆ ಮೆಸೇಜ್ ಬರುತ್ತದೆ. ಬಂಕರ್ ಒಳಗೆ ಹೋಗಲು ಸೂಚನೆ ಸಿಗುತ್ತದೆ. ಬಂಕರ್ ಒಳಗೆ ಹೋಗಲು ಹತ್ತು ನಿಮಿಷ ಕಾಲಾವಕಾಶ ಇರುತ್ತದೆ‌. ಬಂಕರ್ ಹೊರಗೆ ಬರಲು ಕೂಡ ಮೆಸೇಜ್ ಬರುತ್ತದೆ. ಸದ್ಯ ನಮ್ಮ ಪ್ರದೇಶದಲ್ಲಿ ಅಷ್ಟಾಗಿ ದಾಳಿಗಳು ಆಗುತ್ತಿಲ್ಲ. ನಾವೆಲ್ಲ ಸುರಕ್ಷಿತವಾಗಿದ್ದೇವೆ. ಇಸ್ರೇಲ್ ಸೇನೆಯ ಮೇಲೆ ನಂಬಿಕೆ ಇದೆ‌” ಎಂದು ಅಮಿತ್​ ವಿಡಿಯೋ ಮಾಡಿ ಸಂಬಂಧಿಕರಿಗೆ ಕಳುಹಿಸಿದ್ದಾರೆ.

ಬಂಕರ್​ನಲ್ಲಿ ಮೊಳಗಿದ ಕನ್ನಡ ಹಾಡು

ಕರ್ನಾಟಕದ ಬಿಪ್ಯಾಕ್ ನಿಯೋಗ ಟೆಲ್ ಅವಿವ್ ನಗರದಲ್ಲಿ ಸಿಲುಕಿದೆ. ಸೈರನ್ ಆಗುತ್ತಿದ್ದಂತೆ ಬಿಪ್ಯಾಕ್ ನಿಯೋಗ ಬಂಕರ್​ಗೆ ತೆರಳುತ್ತಿದೆ. ಬಿಪ್ಯಾಕ್ ನಿಯೋಗದ ಸದಸ್ಯರು ಬಂಕರ್​ನಲ್ಲಿ ಇರುವಾಗ ಕನ್ನಡ ಹಾಡು ಹಾಡಿ ಇತರರನ್ನು ರಂಜಿಸಿದ್ದಾರೆ. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಿವಾಸಿ, ಕಾಂಗ್ರೆಸ್ ವಕ್ತಾರ ಸುಧೀಂದ್ರ ಹಾಗೂ ಸಹಪಾಠಿಗಳು ಡಾ. ರಾಜಕುಮಾರ್ ಅವರ ಹಾಡು ಹಾಡಿ ರಂಜಿಸಿದ್ದಾರೆ. ಅಲ್ಲದೇ, ಇಸ್ರೇಲಿಗರಿಂದಲೂ ಕನ್ನಡ ಹಾಡು ಹೇಳಿಸಿದ್ದಾರೆ.

ಇರಾನ್​ನಲ್ಲಿನ ಭಾರತೀಯರ ರಕ್ಷಣೆ

ಇರಾನ್​ನಲ್ಲಿ ವಾಸವಾಗಿದ್ದ 110 ಭಾರತೀಯರನ್ನು ರಕ್ಷಣೆ ಮಾಡಲಾಗಿದೆ. ಇವರೆಲ್ಲರೂ ಗುರುವಾರ (ಜೂ.19) ಬೆಳಗಿನ ಜಾವ ದೆಹಲಿಗೆ ಆಗಮಿಸಲಿದ್ದಾರೆ. ಅರ್ಮೇನಿಯಾದ ಯೆರೆವಾನ್‌ದಿಂದ ದೆಹಲಿಗೆ ಪ್ರಯಾಣ ಬೆಳಸಲಿದ್ದಾರೆ. ಮೊದಲ ಹಂತದಲ್ಲಿ ಬಿಹಾರ, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ, ದೆಹಲಿ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದ 110 ಜನರು ತಡರಾತ್ರಿ 2 ಗಂಟೆಗೆ ದೆಹಲಿ ತಲುಪುವ ನಿರೀಕ್ಷೆ ಇದೆ.