ಬೆಂಗಳೂರು (ಜೂ. 14): ಭಾರತ ಕ್ರಿಕೆಟ್ ತಂಡ ಸದ್ಯ ಆಂಗ್ಲರ ನಾಡಲ್ಲಿ ಬೀಡುಬಿಟ್ಟಿದೆ. ಇಲ್ಲಿ ಟೀಮ್ ಇಂಡಿಯಾ ಐದು ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಜೂನ್ 20 ರಿಂದ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಇದಕ್ಕೂ ಮೊದಲು ಭಾರತದ ಎ ತಂಡ ಇಂಗ್ಲೆಂಡ್ ಲಯನ್ಸ್ ವಿರುದ್ಧ ಎರಡು ಪಂದ್ಯಗಳನ್ನು ಆಡಿದೆ. ಈಗ ಭಾರತ ತಂಡ ಬೆಕೆನ್ಹ್ಯಾಮ್ನಲ್ಲಿ ಇಂಟ್ರಾ-ಸ್ಕ್ವಾಡ್ ಪಂದ್ಯವನ್ನು ಆಡುತ್ತಿದೆ. ಇದರಲ್ಲಿ ಭಾರತ ಮತ್ತು ಭಾರತ ಎ ನಡುವೆ ಪಂದ್ಯ ನಡೆಯುತ್ತಿದೆ. ಟೆಸ್ಟ್ ಸರಣಿಗೆ ಮುನ್ನ ಭಾರತ ತಂಡಕ್ಕೆ ಇದು ಕೊನೆಯ ಅವಕಾಶವಾಗಿದೆ. ಹೀಗಾಗಿ ಆಟಗಾರರು ಯಾವುದೇ ಅವಕಾಶವನ್ನು ಬಿಟ್ಟುಕೊಡದೆ ಕಠಿಣ ತಾಲೀಮು ನಡೆಸುತ್ತಿದ್ದಾರೆ.

ಈ ಪಂದ್ಯದಲ್ಲಿ ಶುಕ್ರವಾರ ಭಾರತ ಟೆಸ್ಟ್ ತಂಡದ ನೂತನ ನಾಯಕ ಶುಭ್ಮನ್ ಗಿಲ್ ಸಂಯಮದ ಅರ್ಧಶತಕದೊಂದಿಗೆ ಎಲ್ಲರನ್ನೂ ಆಕರ್ಷಿಸಿದರು, ಇದರಲ್ಲಿ ಅವರು ಸುಂದರವಾದ ಶಾಟ್ ಆಯ್ಕೆ ಮತ್ತು ಅತ್ಯುತ್ತಮ ಆಟ ಪ್ರದರ್ಶಿಸುವ ಮೂಲಕ ಇನ್ನಿಂಗ್ಸ್ ಅನ್ನು ನಿಭಾಯಿಸಿದರು. ಅವರೊಂದಿಗೆ, ಹಿರಿಯ ಬ್ಯಾಟ್ಸ್ಮನ್ ಕೆಎಲ್ ರಾಹುಲ್ ಕೂಡ ಉತ್ತಮ ಲಯದಲ್ಲಿ ಕಾಣಿಸಿಕೊಂಡರು. ಅವರು ಆತ್ಮವಿಶ್ವಾಸದ ಅರ್ಧಶತಕ ಗಳಿಸಿದರು. ಬಿಸಿಸಿಐ ತನ್ನ ಸಾಮಾಜಿಕ ಮಾಧ್ಯಮ ಪುಟದಲ್ಲಿ ಈ ಮಾಹಿತಿಯನ್ನು ನೀಡಿದೆ. ಆದಾಗ್ಯೂ, ಸ್ಕೋರ್ಕಾರ್ಡ್ ಅನ್ನು ಮಂಡಳಿ ನೀಡಿಲ್ಲ.
ಸದ್ಯ ಭರ್ಜರಿ ಫಾರ್ಮ್ನಲ್ಲಿರುವ ಕೆಎಲ್ ರಾಹುಲ್ ಟೆಸ್ಟ್ ಸರಣಿಯಲ್ಲಿ ಆರಂಭಿಕರಾಗಿ ಕಣಕ್ಕಿಳಿಯುವುದು ಖಚಿತ. 2021 ರ ಪ್ರವಾಸದಲ್ಲಿ ಅವರು ಲಾರ್ಡ್ಸ್ನಲ್ಲಿ ಶತಕ ಗಳಿಸಿದ್ದರು. ಈ ಬಾರಿಯೂ ಅವರಿಂದ ಇದೇ ರೀತಿಯ ಪ್ರದರ್ಶನ ನಿರೀಕ್ಷಿಸಲಾಗಿದೆ. ಮತ್ತೊಂದೆಡೆ, ಇಂಗ್ಲೆಂಡ್ನಲ್ಲಿ ಗಿಲ್ ಅವರ ಟೆಸ್ಟ್ ಸರಣಿಯು ವಿಶೇಷವಾಗಿ ಇಲ್ಲ. ನಾಯಕತ್ವದ ಜವಾಬ್ದಾರಿಯನ್ನು ಪಡೆದ ನಂತರ, ಅವರು ತಮ್ಮ ದಾಖಲೆಯನ್ನು ಸುಧಾರಿಸಲು ಬಯಸುತ್ತಾರೆ.
ಶಾರ್ದೂಲ್ ಠಾಕೂರ್ ಬೌಲಿಂಗ್ ನಲ್ಲಿ ಮಿಂಚು
ಅದೇ ಸಮಯದಲ್ಲಿ, ಲಾರ್ಡ್ ಶಾರ್ದೂಲ್ ಠಾಕೂರ್ ಬೌಲಿಂಗ್ನಲ್ಲಿ ಪ್ರಭಾವಶಾಲಿ ಆಗಿದ್ದರು. ಶಾರ್ದೂಲ್ ಇಂಗ್ಲೆಂಡ್ನಲ್ಲಿ ಭಾರತಕ್ಕೆ ಪ್ರಮುಖ ಪಾತ್ರ ವಹಿಸಲಿದ್ದಾರೆ. ಅವರು ಬ್ಯಾಟಿಂಗ್ ಜೊತೆಗೆ ಚೆಂಡನ್ನು ಸ್ವಿಂಗ್ ಮಾಡುವ ಮೂಲಕವೂ ಕೊಡುಗೆ ನೀಡಬೇಕು. 2021 ರ ಇಂಗ್ಲೆಂಡ್ ಪ್ರವಾಸದಲ್ಲಿ, ಶಾರ್ದೂಲ್ ಓವಲ್ ಟೆಸ್ಟ್ನ ಎರಡೂ ಇನ್ನಿಂಗ್ಸ್ಗಳಲ್ಲಿ ಅರ್ಧಶತಕ ಗಳಿಸಿದರು. ಈ ಅರ್ಧಶತಕಗಳಲ್ಲಿ ಒಂದು ಕೇವಲ 32 ಎಸೆತಗಳಲ್ಲಿ ಬಂದಿತು. ಅಂದಹಾಗೆ ಅವರು 2023 ರ ನಂತರ ಟೆಸ್ಟ್ ತಂಡಕ್ಕೆ ಮರಳುತ್ತಿದ್ದಾರೆ. ಇಂಟ್ರಾ ಸ್ಕ್ವಾಡ್ ಮ್ಯಾಚ್ನಲ್ಲಿ ಶಾರ್ದೂಲ್ನಿಂದ ಭರ್ಜರಿ ಪ್ರದರ್ಶನ ಬಂದಿದೆ ಎಂದು ಬಿಸಿಸಿಐ ಹೇಳಿದೆ.
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರವಿಚಂದ್ರನ್ ಅಶ್ವಿನ್ ನಿವೃತ್ತಿ ನಂತರ ಭಾರತ ತಂಡ ಮೊದಲ ಬಾರಿಗೆ ಇಂಗ್ಲೆಂಡ್ ಪ್ರವಾಸ ಮಾಡುತ್ತಿದೆ. ಯುವ ಭಾರತೀಯ ತಂಡಕ್ಕೆ ಇಂಗ್ಲೆಂಡ್ ದೊಡ್ಡ ಸವಾಲಾಗಲಿದೆ. ಭಾರತ ತಂಡ ಕೊನೆಯ ಬಾರಿಗೆ ಇಂಗ್ಲೆಂಡ್ನಲ್ಲಿ ಟೆಸ್ಟ್ ಸರಣಿಯನ್ನು ಗೆದ್ದಿದ್ದು 2007 ರಲ್ಲಿ. ಅಂದಿನಿಂದ, ಭಾರತ ಇಂಗ್ಲೆಂಡ್ನಲ್ಲಿ ಯಾವುದೇ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ. ರೋಹಿತ್-ವಿರಾಟ್ ಮತ್ತು ಅಶ್ವಿನ್ರಂತಹ ದಿಗ್ಗಜ ಆಟಗಾರರಿಲ್ಲದ ಕಾರಣ ಈ ಬಾರಿ ಕೂಡ ತಂಡಕ್ಕೆ ಗೆಲುವು ಅಷ್ಟೊಂದು ಸುಲಭವಲ್ಲ. ಆದರೆ, ಅಸಾಧ್ಯವಲ್ಲ.
