ಸಿಂಗಾಪುರದ ಕಾರ್ಗೋ ಶಿಪ್ ಅಗ್ನಿಗಾಹುತಿ:​ ಇನ್ನು ಪತ್ತೆಯಾಗದ ನಾಲ್ವರು ಸಿಬ್ಬಂದಿ, 56 ಗಂಟೆ ಕಳೆದರೂ ಆರದ ಬೆಂಕಿ

ಮಂಗಳೂರು, ಜೂನ್ 11: ಸಿಂಗಾಪುರ ದೇಶದ ಹಡಗು   ಭಾರತದ ಸಮುದ್ರದಲ್ಲಿ ಬೆಂಕಿಗಾಹುತಿಯಾಗಿತ್ತು  . ನಾನಾ ದೇಶಗಳ ಸಿಬ್ಬಂದಿಗಳಿದ್ದ ಹಡಗು ಕೇರಳ ಭಾಗದ ಅರಬ್ಭೀ ಸಮುದ್ರದಲ್ಲಿ ಹೊತ್ತಿ ಉರಿದಿತ್ತು. ಗಾಯಾಳುಗಳನ್ನು ರಕ್ಷಣೆ ಮಾಡಿ ಮಂಗಳೂರಿಗೆ ಕರೆತರಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. 22 ಸಿಬ್ಬಂದಿಗಳ ಪೈಕಿ ನಾಲ್ವರು ಸಿಬ್ಬಂದಿಗಳು ಇದುವರೆಗೆ ಪತ್ತೆ ಆಗಿಲ್ಲ. ಶೋಧ ಕಾರ್ಯಾಚರಣೆ ಮುಂದುವರೆದಿದೆ. ಘಟನೆ ನಡೆದು 56 ಗಂಟೆ ಕಳೆದರೂ ಹಡಗಿನ ಬೆಂಕಿ ಆರಿಲ್ಲ.

ಯಾರೆಲ್ಲಾ ನಾಪತ್ತೆ

ತೈವಾನ್​ನ ಸೆಕೆಂಡ್ ಇಂಜಿನಿಯರ್ ಯು ಬೊ ಫಾಂಗ್, ಮ್ಯಾನ್ಮರ್​ನ ಕಾರ್ಪೆಂಟರ್ ಸಾನ್ ವಿನ್, ಇಂಡೋನೇಷ್ಯಾದ ಎಬಿ ಜಾನಲ್ ಅಹಿದಿನ್‌ ಮತ್ತು ತೈವಾನ್​ನ ಮೋಟರ್ ಮ್ಯಾನ್ ಸಿಹ್ ಚಾಯ್ ವೆನ್ ನಾಪತ್ತೆ ಆದವರು.

ಚೀನಾ ಮೂಲದ ನಂ 1 ಆಯ್ಲಿರ್ ಲೂಯನ್ಲಿ ಮತ್ತು ಇಂಡೋನೇಷ್ಯಾದ ಫಿಟ್ಟರ್ ಸೋನಿಟೂರ್ ಹೆನ್ರಿಗೆ ಗಂಭೀರ ಗಾಯಗಳಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರು ಪ್ರಾಣಾಪಾಯದಿಂದ ಪಾರು ಎಂದು ವೈದ್ಯರು ತಿಳಿಸಿದ್ದಾರೆ. ಬಾಕಿ ಸಿಬ್ಬಂದಿಗಳು ಮಂಗಳೂರಿನ ಹೊಟೇಲ್​ನಲ್ಲಿ ಉಳಿದುಕೊಂಡಿದ್ದಾರೆ.

ಕಡಲ ತೀರದಲ್ಲಿ ಕಾರ್ಗೋಶಿಪ್​ ಧಗಧಗ

22 ಜನ ಸಿಬ್ಬಂದಿ ಇದ್ದ ಎಮ್.ವಿ ವಾನ್ ಹೈ 503 ಹಡಗು ಜೂನ್ 7 ರಂದು ಶ್ರೀಲಂಕಾದಕೊಲಂಬೊದಿಂದ ಮಹಾರಾಷ್ಟ್ರದ ನವಾ ಶೇವಾಕ್ಕೆ ಹೊರಟಿತ್ತು. ಜೂನ್ 10 ರ ಮುಂಜಾನೆ ತಲುಪಬೇಕಿದ್ದ, ಹಡಗು ಜೂನ್ 8 ರ ಮಧ್ಯಾಹ್ನದ ವೇಳೆಗೆ ಕೇರಳದ ಬೇಪೂರ್ ಕಡಲ ಕಿನಾರೆಯಿಂದ 78 ನಾಟಿಕಲ್ ಮೈಲಿ ದೂರದಲ್ಲಿ ಅಗ್ನಿ ಅವಘಡಕ್ಕೆ ಸಿಲುಕಿತ್ತು.

ಹಡಗಿನ ಕಂಟೈನರ್​ನಲ್ಲಿ ಗನ್ ಪೌಡರ್, ಪೈಂಟ್ ಸೇರಿದಂತೆ ವಿವಿಧ ಮಾದರಿಯ ಗೂಡ್ಸ್​ಗಳನ್ನು ಸಾಗಾಟ ಮಾಡುಲಾಗಿತ್ತಿತ್ತು. ಅಗ್ನಿ ಅವಘಡದಿಂದ ಇಡೀ ಹಡಗು ಹೊತ್ತಿ ಉರಿದಿತ್ತು. ತಕ್ಷಣ ಇಂಡಿಯನ್ ನೇವಿ ಶಿಪ್ ಐಎನ್ಎಸ್ ಸೂರತ್​ನ ಯೋಧರಿಂದ ರಕ್ಷಣಾ ಕಾರ್ಯಾಚರಣೆ ಅರಂಭವಾಗಿತ್ತು. ನೇವಿ ಮತ್ತು ಇಂಡಿಯನ್ ಕೋಸ್ಟ್ ಗಾರ್ಡ್​ನಿಂದ ರಕ್ಷಣಾ ಕಾರ್ಯಚರಣೆ ಮಾಡಿತ್ತು.

ಈ ಹಡಗಿನಲ್ಲಿ ಚೀನಾದ 8, ಮ್ಯಾನ್ಮರ್ ನ 5, ತೈವಾನ್ ನ 6, ಇಂಡೋನೇಷ್ಯಾದ 3 ಸಿಬ್ಬಂದಿಗಳಿದ್ದರು. ಇವರಲ್ಲಿ 18 ಸಿಬ್ಬಂದಿಗಳು ರಕ್ಷಣೆ ಮಾಡಿ ಮಂಗಳೂರಿನಲ್ಲಿರುವ ಎನ್.ಎಮ್.ಪಿ.ಎ ಪೋರ್ಟ್​ಗೆ ಶಿಪ್ ಮೂಲಕ ಜೂನ್ 9 ರ ರಾತ್ರಿ 11.30 ಕ್ಕೆ ಕರೆದುಕೊಂಡು ಬರಲಾಗಿತ್ತು.

ಸದ್ಯ ಇಂಡಿಯನ್ ನೇವಿ ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದೆ. ಎಲ್ಲಾ ದೇಶಗಳ ರಾಯಬಾರಿಗಳು ಇಲ್ಲಿನ ಅಧಿಕಾರಿಗಳ ಸಂಪರ್ಕದಲ್ಲಿದ್ದಾರೆ. ಇನ್ನು ಈ ಹಡಗಿಗೆ ಅಗ್ನಿ ಅವಘಡ ಹೇಗಾಯಿತು ಎನ್ನುವುದರ ಬಗ್ಗೆ ತನಿಖೆ ಬಳಿಕ ತಿಳಿಯಲಿದೆ.