
ದಾವಣಗೆರೆ: ಇಂದಿರಾ ಕ್ಯಾಂಟೀನ್ ಬಡವರ ಹಸಿವು ನೀಗಿಸುವ ತಾಣವಾಗಿದೆ. 2013ರಲ್ಲಿ ಸಿಎಂ ಸಿದ್ದರಾಮಯ್ಯ ಅವರು ಬಡವರಿಗಾಗಿ ಆರಂಭಿಸಿದ ಯೋಜನೆ ಇದಾಗಿದೆ. ಇಲ್ಲಿ ತನಕ ಕ್ಯಾಂಟಿನ್ ಮೆನ್ಯೂ ಅಲ್ಲಿ ಅನ್ನ ಸಾಂಬಾರ್, ಚಪಾತಿ, ತಿಂಡಿ ಕೇವಲ 10 ರೂಪಾಯಿಗೆ ಕೊಡಲಾಗುತ್ತಿತ್ತು. ಇದೀಗ ಸರ್ಕಾರ ಜನರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದೆ. ಊಟದ ಮೆನ್ಯೂ ಅಲ್ಲಿ ಮೊಟ್ಟೆ ಕೊಡಲು ನಿರ್ಧರಿಸಿದೆ. ಈ ಬಗ್ಗೆ ಸ್ವತಃ ಪೌರಾಡಳಿತ ಸಚಿವ ರಹೀಂ ಖಾನ್ ಸುಳಿವು ನೀಡಿದ್ದಾರೆ.
ಮಾಧ್ಯಮಕ್ಕೆ ಸಚಿವ ರಹೀಂ ಖಾನ್ ಪ್ರತಿಕ್ರಿಯಿಸಿ “ಮೊಟ್ಟೆ ಕೊಡಬೇಕೆಂದು ನಿರ್ಧರಿಸಲಾಗಿದೆ. ಊಟದ ಜತೆ ಜನರಿಗೆ ಪ್ರೋಟೀನ್ ನೀಡುವ ಉದ್ದೇಶದಿಂದ ನಮ್ಮ ಸರ್ಕಾರದ ವತಿಯಿಂದ ಮೊಟ್ಟೆ ಕೊಡಬೇಕೆಂದುಕೊಂಡಿದ್ದೇವೆ” ಎಂದರು.
ಜನಸಾಮಾನ್ಯರ ಬಿಲ್ಗೆ ಮನವಿ: ಕೇಂದ್ರ ಸರ್ಕಾರ ವಿವಾದಿತ ಬಿಲ್(ಮಸೂದೆ)ಗಳನ್ನು ತರುವ ಬದಲು ಜನಸಾಮಾನ್ಯರಿಗೆ ಉಪಯೋಗವಾಗುವಂತಹ ಬಿಲ್ ತರಲಿ. ಅಲ್ಲದೆ ಸಿಗರೇಟ್, ಕುಡಿತ, ಗುಟ್ಕಾ ಚಟದಿಂದ ಜನತೆ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ವಿವಾಹಿತ ಮಹಿಳೆಯರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಸಿಗರೇಟ್, ಕುಡಿತ, ಗುಟ್ಕಾ ವಿರುದ್ಧ ಬಿಲ್ ತಂದು ಜನರಿಗೆ ಆಸರೆ ಆಗಿ” ಎಂದು ಮನವಿ ಮಾಡಿದರು.
ಮುಂದುವರೆದು, “ಇಂದಿರಾ ಕ್ಯಾಂಟೀನ್ ಯೋಜನೆ ಸಿದ್ದರಾಮಯ್ಯ ಅವರ ಕನಸಿನ ಯೋಜನೆ. ಅವರು 2013ರಲ್ಲಿ ಸಿಎಂ ಆಗಿದ್ದಾಗ 196 ಕ್ಯಾಂಟೀನ್ ಗಳನ್ನು ತೆರೆದರು. ನಮ್ಮ ಸರ್ಕಾರ ಇರುವ ತನಕ ಈ ಇಂದಿರಾ ಕ್ಯಾಂಟೀನ್ಗಳು ಚೆನ್ನಾಗಿ ನಡೆದವು. ತದನಂತರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಬಳಿಕ ಸಮಸ್ಯೆಗೆ ಸಿಲುಕಿದವು. ನಂತರ ಸಿಎಂ ಆಗಿ ಸಿದ್ದರಾಮಯ್ಯ ಅವರು ನೇಮಕ ಆದ ಬಳಿಕ ಮುಚ್ಚಿದ ಕ್ಯಾಂಟೀನ್ಗಳನ್ನು ತೆರೆಸಿದರು. ಇದೀಗ ಮತ್ತೆ 186 ನೂತನ ಇಂದಿರಾ ಕ್ಯಾಂಟೀನ್ಗಳನ್ನು ತೆರೆದಿದ್ದೇವೆ” ಎಂದು ರಹೀಂ ಖಾನ್ ತಿಳಿಸಿದರು.
ದಾವಣಗೆರೆಯಲ್ಲಿರುವ ಕ್ಯಾಂಟೀನ್ಗಳೆಷ್ಟು: ದಾವಣಗೆರೆ ನಗರದಲ್ಲಿನ ಎಂಟು ಇಂದಿರಾ ಕ್ಯಾಂಟೀನ್, ಚನ್ನಗಿರಿಯ 1, ಮಲೇಬೆನ್ನೂರು 1, ಹರಿಹರದ 1 ಕ್ಯಾಂಟೀನ್ ಸೇರಿ ಒಟ್ಟು 11 ಇವೆ. ಈ ಬಗ್ಗೆ ಪಾಲಿಕೆ ಆಯುಕ್ತೆ ರೇಣುಕಾ ಅವರು ದೂರವಾಣಿಯಲ್ಲಿ ಮಾತನಾಡಿ, “ನಗರದಲ್ಲಿ ಒಟ್ಟು 8 ಕ್ಯಾಂಟೀನ್ಗಳಿವೆ. ಅವುಗಳನ್ನು ನಿರ್ವಹಣೆ ಮಾಡಲಾಗುತ್ತಿದೆ. ಬೆಳಗ್ಗೆ ರೈಸ್ ಬಾತ್, ಇಡ್ಲಿ, ಚಿತ್ರಾನ್ನ ಹೀಗೆ ಬೇರೆ ತಿಂಡಿಗಳನ್ನು ಕೊಡುತ್ತಿವೆ. ಮಧ್ಯಾಹ್ನ ಚಪಾತಿ ಊಟ ಕೊಡಲಾಗುತ್ತದೆ. ಇದನ್ನು ಪಾಲಿಕೆ ನಿರ್ವಹಣೆ ಮಾಡುತ್ತಿದೆ. ದಿನನಿತ್ಯ ಒಬ್ಬರು ಅಧಿಕಾರಿ ಪ್ರತಿಯೊಂದು ಕ್ಯಾಂಟೀನ್ಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ” ಎಂದು ಮಾಹಿತಿ ನೀಡಿದ್ದಾರೆ.
