ಭಾರದ ಮನಸ್ಸಿನಲ್ಲಿ ಬೆಂಗಳೂರು ತೊರೆದ ‘ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ ‘

ಆರ್​ಸಿಬಿ ತಂಡದ ವಿಜಯೋತ್ಸವದ ನಂತರ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರು ಬೆಂಗಳೂರಿನಿಂದ ನಿರ್ಗಮಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಅವರು ಕಾಣಿಸಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಜಯೋತ್ಸವ ಮೆರವಣಿಗೆಯಲ್ಲಿ ನಡೆದ ದುರಂತದ ಬಗ್ಗೆ ಕೊಹ್ಲಿ ಅವರು ತಮ್ಮ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.

17 ವರ್ಷಗಳ ನಂತರ ಐಪಿಎಲ್  ಟ್ರೋಫಿ ಗೆದ್ದಿದ್ದ ಆರ್​​ಸಿಬಿ ತಂಡದ ಸಂಭ್ರಮ 17 ಗಂಟೆಗಳೂ ಇರಲಿಲ್ಲ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಅದೊಂದು ದುರಂತ ಇಡೀ ಆರ್​ಸಿಬಿ ತಂಡವನ್ನು ಹಾಗೂ ಅದರ ಅಭಿಮಾನಿಗಳನ್ನು ನೋವಿನ ಸಾಗರದಲ್ಲಿ ಮುಳುಗಿಸಿದೆ. ಇತ್ತ ನಾವು ಟ್ರೋಫಿಯೊಂದಿಗೆ ಬರುವುದನ್ನು ಅಭಿಮಾನಿಗಳು ನೋಡಿ ಕಣ್ತುಂಬಿಕೊಳ್ಳಲಿ ಎಂದು ಆಸೆ ಪಟ್ಟಿದ ಇಡೀ ಆರ್​ಸಿಬಿ ತಂಡಕ್ಕೆ 11 ಅಭಿಮಾನಿಗಳ ಸಾವಿನ ಆಘಾತ ಸ್ವಾಗತ ನೀಡಿತು. ಹೀಗಾಗಿ ತಂಡದ ಆಟಗಾರರು ಒಲ್ಲದ ಮನಸಿನಲ್ಲೇ 15 ನಿಮಿಷಗಳ ಕಾರ್ಯಕ್ರಮ ನೀಡಿ ಕ್ರೀಡಾಂಗಣದಿಂದ ಹೊರನಡೆದಿದ್ದರು. ಇದೀಗ ಕರ್ನಾಟಕದ ದತ್ತು ಪುತ್ರ ವಿರಾಟ್ ಕೊಹ್ಲಿ ಕೂಡ ತಂಡದ ಕೆಲಸಗಳನ್ನೆಲ್ಲ ಮುಗಿಸಿ, ಬೆಂಗಳೂರು ತೊರೆದಿದ್ದಾರೆ.

ಮುಂಬೈಗೆ ಹಾರಿದ ವಿರುಷ್ಕಾ ಜೋಡಿ

ಆರ್​ಸಿಬಿ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ವಿರಾಟ್ ಕೊಹ್ಲಿ ಹಾಗೂ ಅವರ ಮಡದಿ ಅನುಷ್ಕಾ ಶರ್ಮಾ ಭಾರದ ಮನಸಿನೊಂದಿಗೆ ಬೆಂಗಳೂರು ತೊರೆದಿದ್ದು, ಇವರಿಬ್ಬರು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಜಯೋತ್ಸವದ ಮೆರವಣಿಗೆಯ ಸಮಯದಲ್ಲಿ ನಡೆದ ದುರಂತದ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸಂತಾಪ ಸೂಚಿಸಿದ್ದ ಕೊಹ್ಲಿ, ‘ನನಗೆ ಹೇಳಲು ಪದಗಳಿಲ್ಲ. ಈ ಘಟನೆ ಬೇಸರ ತರಿಸಿದೆ ಎಂದು ಬರೆದುಕೊಂಡಿದ್ದಾರೆ.

ಐಪಿಎಲ್​ನಲ್ಲಿ ಕೊಹ್ಲಿ ಪ್ರದರ್ಶನ

ವಿರಾಟ್ ಕೊಹ್ಲಿ ಐಪಿಎಲ್ 2025 ರಲ್ಲಿ ಅದ್ಭುತ ಪ್ರದರ್ಶನ ನೀಡಿ ಅಭಿಮಾನಿಗಳ ಹೃದಯ ಗೆದ್ದರು. ಈ ಸೀಸನ್‌ನಲ್ಲಿ ಆಡಿದ 15 ಪಂದ್ಯಗಳಲ್ಲಿ ಕೊಹ್ಲಿ 54.75 ರ ಸರಾಸರಿಯಲ್ಲಿ 657 ರನ್ ಬಾರಿಸಿ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಮೂರನೇ ಸ್ಥಾನದಲ್ಲಿದ್ದರು. ಇದರಲ್ಲಿ 8 ಅರ್ಧಶತಕಗಳು ಸೇರಿದ್ದವು.

ಐಪಿಎಲ್ 2025 ರ ಫೈನಲ್‌ನಲ್ಲಿಯೂ ಸಹ, ವಿರಾಟ್ ಕೊಹ್ಲಿ ಆರ್‌ಸಿಬಿ ಪರ 43 ರನ್‌ಗಳ ಅಮೂಲ್ಯ ಇನ್ನಿಂಗ್ಸ್ ಆಡಿದರು, ಇದರಿಂದಾಗಿ ಮೊದಲು ಬ್ಯಾಟ್ ಮಾಡಿದ ಅವರ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 190 ರನ್ ಗಳಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಪಂಜಾಬ್ ಕಿಂಗ್ಸ್ ತಂಡವು ಕೇವಲ 184 ರನ್‌ಗಳನ್ನು ಗಳಿಸಲು ಸಾಧ್ಯವಾಗಿ 6 ರನ್‌ಗಳಿಂದ ಪಂದ್ಯವನ್ನು ಸೋತಿತು. ವಿರಾಟ್ ಕೊಹ್ಲಿ ಇತ್ತೀಚೆಗಷ್ಟೇ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರು. ಇದಕ್ಕೂ ಮೊದಲು ಅವರು ಟಿ20 ಸ್ವರೂಪಕ್ಕೂ ವಿದಾಯ ಹೇಳಿದ್ದರು. ಈಗ ಅವರು ಟೀಂ ಇಂಡಿಯಾ ಪರ ಏಕದಿನ ಕ್ರಿಕೆಟ್‌ನಲ್ಲಿ ಆಡುವುದನ್ನು ಕಾಣಬಹುದು.