
ಚೆನ್ನೈ(ತಮಿಳುನಾಡು): ದೇಶದಲ್ಲಿ ಸಂಚಲನ ಸೃಷ್ಟಿಸಿದ್ದ ಅಣ್ಣಾ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ಜ್ಞಾನಶೇಖರನ್ಗೆ 30 ವರ್ಷಗಳ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, ಕಾಲಿವುಡ್ ನಟ ಕಮಲ್ ಹಾಸನ್ ತೀರ್ಪನ್ನು ಸ್ವಾಗತಿಸಿದ್ದಾರೆ. ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಶೇರ್ ಮಾಡಿ ತೀರ್ಪಿಗೆ ತಮ್ಮ ಬೆಂಬಲ ಸೂಚಿಸಿದ್ದಾರೆ.
ನಟ ಕಮಲ್ ಹಾಸನ್ ಟ್ವೀಟ್: “ಅಣ್ಣಾ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಪೆರೋಲ್ ಇಲ್ಲದೇ 30 ವರ್ಷಗಳ ಜೀವಾವಧಿ ಶಿಕ್ಷೆ ವಿಧಿಸಿದ ಮಹಿಳಾ ವಿಶೇಷ ನ್ಯಾಯಾಲಯದ ತೀರ್ಪನ್ನು ನಾನು ಪೂರ್ಣ ಹೃದಯದಿಂದ ಸ್ವಾಗತಿಸುತ್ತೇನೆ. ಮಹಿಳೆಯರ ವಿರುದ್ಧದ ಯಾವುದೇ ಕೃತ್ಯವನ್ನು ಎಂದಿಗೂ ಸಹಿಸಲು ಅಥವಾ ಕ್ಷಮಿಸಲು ಸಾಧ್ಯವಿಲ್ಲ. ಈ ತೀರ್ಪು ಅಂತಹ ಅಪರಾಧಗಳಿಗೆ ಭಯಾನಕ ಶಿಕ್ಷೆಯಿದೆ ಎಂಬ ಭರವಸೆಯನ್ನು ದೃಢಪಡಿಸಿದೆ” ಎಂದು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಏನಿದು ಪ್ರಕರಣ? ಕಳೆದ ವರ್ಷ ಡಿಸೆಂಬರ್ನಲ್ಲಿ ಅಣ್ಣಾ ವಿಶ್ವವಿದ್ಯಾಲಯದ ಆವರಣದಲ್ಲಿ ವಿದ್ಯಾರ್ಥಿನಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪ ಹೊತ್ತು ಜ್ಞಾನಶೇಖರನ್ ಅರೆಸ್ಟ್ ಆಗಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ, ಚೆನ್ನೈ ಮಹಿಳಾ ನ್ಯಾಯಾಲಯವು ಅಪರಾಧಿಗೆ ಕನಿಷ್ಠ 30 ವರ್ಷಗಳ ಅವಧಿಗೆ ಜೀವಾವಧಿ ಶಿಕ್ಷೆ ಮತ್ತು 90,000 ರೂಪಾಯಿ ದಂಡ ವಿಧಿಸಿದೆ. ಮೇ 28ರಂದು ಜ್ಞಾನಶೇಖರನ್ನನ್ನು ತಪ್ಪಿತಸ್ಥನೆಂದು ಘೋಷಿಸಿದ ಮಹಿಳಾ ನ್ಯಾಯಾಲಯದ ನ್ಯಾಯಾಧೀಶೆ ಎಂ. ರಾಜಲಕ್ಷ್ಮಿ, ಪ್ರಾಸಿಕ್ಯೂಷನ್ ಆರೋಪಿ ವಿರುದ್ಧ ಸಾಬೀತುಪಡಿಸಿದ 11 ಆರೋಪಗಳಿಗೂ ಶಿಕ್ಷೆ ವಿಧಿಸಿದರು.
5 ತಿಂಗಳಲ್ಲಿ ಹೊರಬಿದ್ದ ತೀರ್ಪು: 2024ರ ಡಿಸೆಂಬರ್ 23ರಂದು ಅಣ್ಣಾ ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ 19ರ ಹರೆಯದ ವಿದ್ಯಾರ್ಥಿನಿ (ದ್ವಿತೀಯ ವರ್ಷದ ವಿದ್ಯಾರ್ಥಿನಿ) ಮೇಲೆ ಅತ್ಯಾಚಾರ ನಡೆದಿತ್ತು. ರಾಜ್ಯಾದ್ಯಂತ ಸದ್ದು ಮಾಡಿದ್ದ ಪ್ರಕರಣದ ತೀರ್ಪು 5 ತಿಂಗಳಲ್ಲಿ ಹೊರಬಿದ್ದಿದೆ.
‘ಈ ಪ್ರಕರಣಕ್ಕೆ ಅತ್ಯುನ್ನತ ಶಿಕ್ಷೆ ಎಂದರೆ ಅದು ಜೀವಾವಧಿ ಶಿಕ್ಷೆ’: “ಜ್ಞಾನಶೇಖರನ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಂದು ನಮಗೆ ತೀರ್ಪು ಸಿಕ್ಕಿದೆ. 30 ವರ್ಷಗಳ ಶಿಕ್ಷೆ ವಿಧಿಸಲಾಗಿದೆ. ಪ್ರಕರಣದ ವಿಚಾರಣೆಯನ್ನು ಎಸ್ಐಟಿ ನಡೆಸಿತು. ಅವರು ಮಹಿಳಾ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿದರು. ಏಪ್ರಿಲ್ 30ರಂದು ಮೊದಲ ಬಾರಿಗೆ ಸಂತ್ರಸ್ತೆ ಎದುರು ಬಂದರು. ನ್ಯಾಯಾಲಯಕ್ಕೆ ಎಲ್ಲಾ ಸಾಕ್ಷಿಗಳನ್ನು ಒದಗಿಸಲಾಯಿತು. ಇಂದು ಈ ತೀರ್ಪು ಬಂದಿದೆ. ಈ ಪ್ರಕರಣಕ್ಕೆ ಅತ್ಯುನ್ನತ ಶಿಕ್ಷೆ ಎಂದರೆ ಅದು ಜೀವಾವಧಿ ಶಿಕ್ಷೆ. ಆ ಶಿಕ್ಷೆಯನ್ನು ಒದಗಿಸಲಾಗಿದೆ” ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಮೇರಿ ಜಯಂತಿ ತಿಳಿಸಿದರು.
ಇದಕ್ಕೂ ಮುನ್ನ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು, ಪ್ರಕರಣದಲ್ಲಿ ತ್ವರಿತ ತೀರ್ಪು ನೀಡಿದ್ದಕ್ಕಾಗಿ ರಾಜ್ಯ ಪೊಲೀಸರು, ತನಿಖಾ ಅಧಿಕಾರಿಗಳು ಮತ್ತು ಸರ್ಕಾರಿ ವಕೀಲರನ್ನು ಶ್ಲಾಘಿಸಿದರು. ಎಕ್ಸ್ ಪೋಸ್ಟ್ನಲ್ಲಿ, ರಾಜ್ಯದ ಪೊಲೀಸರು ಪ್ರಕರಣವನ್ನು ತ್ವರಿತವಾಗಿ ವಿಚಾರಣೆ ನಡೆಸಿದ್ದಾರೆ ಮತ್ತು ಕೇವಲ 5 ತಿಂಗಳಲ್ಲಿ ನ್ಯಾಯ ದೊರಕಿದೆ ಎಂದು ಹೇಳಿದ್ದಾರೆ. ಅಪರಾಧವನ್ನು ತಡೆಗಟ್ಟಲು ಮತ್ತು ಯಾವುದೇ ಘಟನೆ ಸಂಭವಿಸಿದಲ್ಲಿ, ಅಪರಾಧಿಗಳು ತಪ್ಪಿಸಿಕೊಳ್ಳಬಾರದು ಎಂದು ಪೊಲೀಸರಿಗೆ ಸೂಚಿಸಿರುವುದಾಗಿ ಸಿಎಂ ಸ್ಟಾಲಿನ್ ಹೇಳಿದರು. ತ್ವರಿತ ತನಿಖೆ ನಡೆಸಿ ಅಪರಾಧಿಗಳನ್ನು ಶಿಕ್ಷೆಗೆ ಒಳಪಡಿಸಬೇಕು ಎಂದು ಹೇಳಿದರು. ಘಟನೆಯ ಕುರಿತು ಆಡಳಿತಾರೂಢ ಡಿಎಂಕೆ ವಿರುದ್ಧ ಆರೋಪಗಳನ್ನು ಮಾಡಿದ್ದ ವಿರೋಧ ಪಕ್ಷಗಳನ್ನು ಸಹ ಸಿಎಂ ಟೀಕಿಸಿದರು. “ಚೀಪ್ ಪಾಲಿಟಿಕ್ಸ್” ಮಾಡಲು ಪ್ರಯತ್ನಗಳು ನಡೆದಿವೆ ಎಂದು ಆರೋಪಿಸಿದರು. ಹರಡುತ್ತಿರುವ “ಅಪಪ್ರಚಾರ”ವನ್ನು ಸರ್ಕಾರ ಛಿದ್ರಗೊಳಿಸಿದೆ ಎಂದು ಸಹ ಹೇಳಿದರು. “ನಾವು ಯಾವಾಗಲೂ ನ್ಯಾಯ ಮತ್ತು ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸುತ್ತೇವೆ” ಎಂಬುದನ್ನು ಒತ್ತಿ ಹೇಳಿದರು.

