
ಕಾರವಾರ (ಉತ್ತರ ಕನ್ನಡ): ಗಂಗಾವಳಿ ನದಿಯ ಸೇತುವೆಯ ತಡೆಗೋಡೆ ಮೇಲೆ ಚಿಕ್ಕ ಮಗುವಿನೊಂದಿಗೆ ಪ್ರವಾಸಿಗರು ನಿಂತು ವೀಕ್ಷಿಸುತ್ತಿರುವುದನ್ನು ಕ್ಯಾಮರಾ ಮೂಲಕ ಗಮನಿಸಿದ ಪೊಲೀಸ್ ಸಿಬ್ಬಂದಿ ತಕ್ಷಣ ಎಚ್ಚರಿಕೆ ನೀಡಿದ್ದು, ಇದರಿಂದ ಪ್ರವಾಸಿಗರು ಎಚ್ಚೆತ್ತುಕೊಂಡ ಘಟನೆ ಗೋಕರ್ಣದಲ್ಲಿ ಭಾನುವಾರ ನಡೆದಿದೆ. ಈ ಅತ್ಯಾಧುನಿಕ ವ್ಯವಸ್ಥೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಅಂಕೋಲಾದಿಂದ ಗೋಕರ್ಣಕ್ಕೆ ತೆರಳುತ್ತಿರುವ ಪ್ರವಾಸಿಗರು ಗಂಗಾವಳಿಯ ಸೇತುವೆಯ ಮೇಲೆ ಕಾರನ್ನು ನಿಲ್ಲಿಸಿ, ಸೆಲ್ಪಿ, ಫೋಟೋ ತೆಗೆಯುವ ಸಮಯದಲ್ಲಿ ಚಿಕ್ಕ ಮಗುವನ್ನು ತಡೆಗೋಡೆಯ ಮೇಲೆ ನಿಲ್ಲಿಸಿಕೊಂಡಿದ್ದರು. ಇದನ್ನು ಕ್ಯಾಮರಾ ಮೂಲಕ ಗಮನಿಸಿದ ಗೋಕರ್ಣ ಪೊಲೀಸರು ಕ್ಯಾಮರಾ ಸ್ಪೀಕರ್ ಮೂಲಕ ಸುರಕ್ಷಿತವಾಗಿ ಮಗುವನ್ನು ಹಿಡಿದುಕೊಳ್ಳುವಂತೆ ತಿಳಿಸಿದ್ದಾರೆ.

