ಸಿಂಧೂ ಜಲ ಒಪ್ಪಂದದ ರದ್ದತಿ ಮರುಪರಿಶೀಲಿಸಿ; ಮೊದಲ ಬಾರಿ ಭಾರತಕ್ಕೆ ಪಾಕ್ ಮನವಿ

ಸಿಂಧೂ ಜಲ ಒಪ್ಪಂದದ ಅಡಿಯಲ್ಲಿ ತನ್ನ ಪ್ರದೇಶಕ್ಕೆ ನದಿಗಳ ಹರಿವನ್ನು ಪುನರಾರಂಭಿಸುವಂತೆ ಪಾಕಿಸ್ತಾನದ ಜಲಸಂಪನ್ಮೂಲ ಸಚಿವಾಲಯ ನವದೆಹಲಿಗೆ ಪತ್ರ ಬರೆದಿದೆ ಎಂದು ವರದಿಯಾಗಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ 1960ರ ಸಿಂಧೂ ಜಲ ಒಪ್ಪಂದವನ್ನು ತಕ್ಷಣ ಜಾರಿಗೆ ಬರುವಂತೆ ಸ್ಥಗಿತಗೊಳಿಸುವುದಾಗಿ ಭಾರತ ಪಾಕಿಸ್ತಾನಕ್ಕೆ ತಿಳಿಸಿದ ಕೆಲವು ದಿನಗಳ ನಂತರ ಪಾಕಿಸ್ತಾನ ಮೊದಲ ಬಾರಿಗೆ ಈ ಒಪ್ಪಂದದ ಬಗ್ಗೆ ಭಾರತದ ಜೊತೆ ಚರ್ಚಿಸಲು ತನ್ನ ಇಚ್ಛೆಯನ್ನು ವ್ಯಕ್ತಪಡಿಸಿದೆ.

ನವದೆಹಲಿ, ಮೇ 15: ಮೊದಲ ಬಾರಿಗೆ ಭಾರತದೊಂದಿಗೆ ಚರ್ಚೆಯ ಮೂಲಕ ಪ್ರಸ್ತಾಪ ತಂದಿರುವ ಪಾಕಿಸ್ತಾನ ಸಿಂಧೂ ಜಲ ಒಪ್ಪಂದದ ಅಮಾನತನ್ನು ಮರುಪರಿಶೀಲಿಸಿ ಎಂದು ಭಾರತಕ್ಕೆ ಮನವಿ ಸಲ್ಲಿಸಿದೆ. ಪಹಲ್ಗಾಮ್ ದಾಳಿಯ ನಂತರ ಭಾರತ ಪಾಕಿಸ್ತಾನದೊಂದಿಗಿನ ಸಿಂಧೂ ಜಲ ಒಪ್ಪಂದವನ್ನು ರದ್ದುಗೊಳಿಸಿತ್ತು. ಇದರಿಂದ ಪಾಕಿಸ್ತಾನದಲ್ಲಿ ನೀರಿನ ಬಿಕ್ಕಟ್ಟು ತಲೆದೋರಿದೆ. ಕದನವಿರಾಮ ಘೋಷಣೆಯಾದರೂ ಪಾಕಿಸ್ತಾನ ಭಯೋತ್ಪಾದನೆಗೆ ನೀಡುವ ಬೆಂಬಲವನ್ನು ಪೂರ್ತಿಯಾಗಿ ನಿಲ್ಲಿಸುವವರೆಗೂ ಸಿಂಧೂ ಜಲ ಒಪ್ಪಂದ ರದ್ದಾಗಿರುತ್ತದೆ ಎಂದು ಭಾರತ ಖಚಿತಪಡಿಸಿದ್ದಕ್ಕೆ ಮೊದಲು ಪಾಕಿಸ್ತಾನ ಅಹಂಕಾರದ ಮಾತುಗಳನ್ನಾಡಿತ್ತು. ಭಾರತ ಸಿಂಧೂ ಜಲ ಒಪ್ಪಂದ ಅಮಾನತನ್ನು ಕೈಬಿಡದಿದ್ದರೆ ಕದನವಿರಾಮಕ್ಕೆ ಯಾವುದೇ ಅರ್ಥವಿರುವುದಿಲ್ಲ, ನಮಗೆ ನೀರು ಬಿಡದಿದ್ದರೆ ಅದನ್ನು ಹೇಗೆ ಪಡೆಯಬೇಕೆಂಬುದು ನಮಗೆ ಗೊತ್ತಿದೆ ಎಂದು ಪಾಕ್ ಹೇಳಿಕೆ ನೀಡಿತ್ತು. ಅದಕ್ಕೂ ಭಾರತ ಜಗ್ಗದಿದ್ದಾಗ ಇದೀಗ ಮಾತುಕತೆಯ ಮೂಲಕ ಭಾರತದ ಮನವೊಲಿಸಲು ಮುಂದಾಗಿದೆ. ಈ ವಿಚಾರದ ಬಗ್ಗೆ ಭಾರತದ ಜೊತೆ ಚರ್ಚಿಸಲು ಪಾಕಿಸ್ತಾನ ಸಿದ್ಧ ಎಂದು ಹೇಳಿದೆ.

ಪಾಕಿಸ್ತಾನದ ಜಲಸಂಪನ್ಮೂಲ ಕಾರ್ಯದರ್ಶಿ ಸೈಯದ್ ಅಲಿ ಮುರ್ತಾಜಾ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವ ಕೇಂದ್ರ ಸಚಿವ ಸಂಪುಟದ ನಿರ್ಧಾರದ ಬಗ್ಗೆ ಭಾರತವು ಔಪಚಾರಿಕವಾಗಿ ತಿಳಿಸಿದ್ದಕ್ಕೆ ಪ್ರತಿಕ್ರಿಯಿಸಿದ್ದಾರೆ. ಅವರು ತಮ್ಮ ಸರ್ಕಾರದ ಪರವಾಗಿ ಭಾರತ ಆಕ್ಷೇಪಿಸುವ ನಿರ್ದಿಷ್ಟ ಷರತ್ತುಗಳನ್ನು ಚರ್ಚಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿ ಪಾಕಿಸ್ತಾನ ಭಾರತಕ್ಕೆ ಪತ್ರ ಬರೆದಿದೆ ಎಂದು ವರದಿಯಾಗಿದೆ. ಸಿಂಧೂ ಜಲ ಒಪ್ಪಂದದಡಿಯಲ್ಲಿ ತನ್ನ ಪ್ರದೇಶಕ್ಕೆ ನದಿಗಳ ಹರಿವನ್ನು ಪುನರಾರಂಭಿಸುವಂತೆ ಪಾಕಿಸ್ತಾನದ ಜಲಸಂಪನ್ಮೂಲ ಸಚಿವಾಲಯ ನವದೆಹಲಿಗೆ ಪತ್ರ ಬರೆದಿದೆ.

ಸಿಂಧೂ ಜಲ ಒಪ್ಪಂದವು 6 ದಶಕಗಳಿಗೂ ಹೆಚ್ಚು ಕಾಲ ಉಳಿದುಕೊಂಡಿರುವ ಪ್ರಮುಖ ನೀರು ಹಂಚಿಕೆ ಒಪ್ಪಂದವಾಗಿದೆ. ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಮತ್ತೊಂದು ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ದಾಳಿಯ ನಂತರ ಭಾರತ 1960ರ ಒಪ್ಪಂದವನ್ನು ಸ್ಥಗಿತಗೊಳಿಸಿತ್ತು. ಆ ದಾಳಿಯಲ್ಲಿ 26 ನಾಗರಿಕರು ಸಾವನ್ನಪ್ಪಿದರು, ಅವರಲ್ಲಿ ಹೆಚ್ಚಿನವರು ಪ್ರವಾಸಿಗರಾಗಿದ್ದರು. ಅದಾದ ಬಳಿಕ ಭಾರತವು ತನ್ನ ರಾಷ್ಟ್ರೀಯ ಭದ್ರತಾ ವಿಶೇಷಾಧಿಕಾರವನ್ನು ಬಳಸಿಕೊಂಡು ಇಸ್ಲಾಮಾಬಾದ್ ಭಯೋತ್ಪಾದನೆಗೆ ತನ್ನ ಬೆಂಬಲವನ್ನು ಕೊನೆಗೊಳಿಸುವವರೆಗೆ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿತ್ತು. ಈ ಕ್ರಮವನ್ನು ಭದ್ರತಾ ಸಂಪುಟ ಸಮಿತಿ ಸಿಸಿಎಸ್‌ ಅನುಮೋದಿಸಿತ್ತು. ಇದು ಕಾರ್ಯತಂತ್ರದ ವ್ಯವಹಾರಗಳ ಮೇಲಿನ ನಿರ್ಧಾರ ತೆಗೆದುಕೊಳ್ಳುವ ಅತ್ಯುನ್ನತ ಸಂಸ್ಥೆಯಾಗಿದೆ. ಭಾರತ ವಿಶ್ವಬ್ಯಾಂಕ್ ಮಧ್ಯಸ್ಥಿಕೆಯ ಒಪ್ಪಂದವೊಂದಕ್ಕೆ ವಿರಾಮ ಹಾಕಿದ್ದು ಇದೇ ಮೊದಲು.

ಆಪರೇಷನ್ ಸಿಂಧೂರ್ ನಂತರದ ತಮ್ಮ ಮೊದಲ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸರ್ಕಾರದ ರಾಜಿಯಿಲ್ಲದ ನಿಲುವನ್ನು ಒತ್ತಿ ಹೇಳಿದರು. “ನೀರು ಮತ್ತು ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ” ಎಂದು ಅವರು ಘೋಷಿಸಿದರು. “ಭಯೋತ್ಪಾದನೆ ಮತ್ತು ಮಾತುಕತೆಗಳು ಒಂದೇ ಸಮಯದಲ್ಲಿ ನಡೆಯಲು ಸಾಧ್ಯವಿಲ್ಲ. ಭಯೋತ್ಪಾದನೆ ಮತ್ತು ವ್ಯಾಪಾರ ಏಕಕಾಲದಲ್ಲಿ ನಡೆಯಲು ಸಾಧ್ಯವಿಲ್ಲ” ಎನ್ನುವ ಮೂಲಕ ಸಿಂಧೂ ಜಲ ಒಪ್ಪಂದ ರದ್ದತಿಯನ್ನು ಹಿಂಪಡೆಯುವುದಿಲ್ಲ ಎಂದು ಘೋಷಿಸಿದ್ದರು.

ಇದೀಗ ಭಾರತದ ವಿದೇಶಾಂಗ ಸಚಿವಾಲಯಕ್ಕೆ ಕಳುಹಿಸಲಾದ ಪತ್ರದಲ್ಲಿ ಪಾಕಿಸ್ತಾನ ಸಚಿವಾಲಯವು ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವುದರಿಂದ ಪಾಕ್ ದೇಶದೊಳಗೆ ಬಿಕ್ಕಟ್ಟು ಉಂಟಾಗುತ್ತದೆ ಎಂದು ಹೇಳಿದೆ.

1960ರ ಒಪ್ಪಂದದ ಪ್ರಕಾರ, ಭಾರತದಲ್ಲಿ ನೆಲೆಗೊಂಡಿರುವ ಸಿಂಧೂ ನದಿ ವ್ಯವಸ್ಥೆಯಿಂದ ಸಾಗಿಸಲ್ಪಡುವ ಒಟ್ಟು ನೀರಿನಲ್ಲಿ ಭಾರತವು ಸುಮಾರು ಶೇ. 30ರಷ್ಟನ್ನು ಪಡೆಯಿತು. ಉಳಿದ ಶೇ. 70ರಷ್ಟನ್ನು ಪಾಕಿಸ್ತಾನ ಪಡೆಯಿತು. ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವುದರೊಂದಿಗೆ, ಸ್ಥಗಿತಗೊಂಡಿರುವ ಜಲವಿದ್ಯುತ್ ಯೋಜನೆಗಳನ್ನು ಪೂರ್ಣಗೊಳಿಸುವತ್ತ ನರೇಂದ್ರ ಮೋದಿ ಸರ್ಕಾರವು ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ.