ಆಪರೇಷನ್ ಸಿಂಧೂರ್​ ಕಾರ್ಯಾಚರಣೆಗೆ ಕ್ರಿಕೆಟಿಗರಿಂದ ಬಹುಪರಾಕ್

ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಹತರಾಗಿದ್ದರು. ಇದಕ್ಕೆ ಪ್ರತಿಯಾಗಿ ಇದೀಗ ಭಾರತೀಯ ಸೇನೆ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಶುರು ಮಾಡಿದ್ದು, ಈ ಮೂಲಕ ಪಾಕಿಸ್ತಾನದ 9 ಸ್ಥಳಗಳಲ್ಲಿ ದಾಳಿ ನಡೆಸಿ ಹಲವು ಉಗ್ರರನ್ನು ಹತ್ಯೆಗೈದಿದ್ದಾರೆ.

ಪಹಲ್ಗಾಮ್ ನಡೆದ ಉಗ್ರರ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಆಪರೇಷನ್ ಸಿಂಧೂರ್ ಮೂಲಕ ಪಾಕ್ ಉಗ್ರರ ಹುಟ್ಟಡಗಿಸಿದ್ದಾರೆ. ಮೇ 7 ರ ನಸುಕಿನಲ್ಲಿ ಪಾಕಿಸ್ತಾನದಲ್ಲಿನ ಭಯೋತ್ಪಾದಕರ ಅಡುಗುತಾಣಗಳ ಮೇಲೆ ಭಾರತೀಯ ಸೈನಿಕರು ದಾಳಿ ನಡೆಸಿದ್ದು, ಈ ಮೂಲಕ ಪಹಲ್ಗಾಮ್ ದಾಳಿಯ ಸೇಡು ತೀರಿಸಿಕೊಂಡಿದ್ದಾರೆ. ಈ ಪ್ರತೀಕಾರದ ಬೆನ್ನಲ್ಲೇ ಭಾರತೀಯ ಸೈನಿಕರ ಕಾರ್ಯಾಚರಣೆಗೆ ಟೀಮ್ ಇಂಡಿಯಾ ಅನೇಕ ಆಟಗಾರರು ಮೆಚ್ಚುಗೆಗಳನ್ನು ಸೂಚಿಸಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಭಾರತೀಯ ಸೈನಿಕರ ಪ್ರತಿದಾಳಿ ಬೆನ್ನಲ್ಲೇ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್, ಆಪರೇಷನ್ ಸಿಂಧೂರ್ ಪೋಸ್ಟರ್ ಹಂಚಿಕೊಂಡು ಜೈ ಹಿಂದ್ ಎಂದು ಎಕ್ಸ್​​ನಲ್ಲಿ ಬರೆದುಕೊಂಡಿದ್ದಾರೆ.

ಟೀಮ್ ಇಂಡಿಯಾದ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಕೂಡ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಆಪರೇಷನ್ ಸಿಂಧೂರ್ ಪೋಸ್ಟ್ ಹಂಚಿಕೊಂಡಿದ್ದು, ಸೈನಿಕರ ಕಾರ್ಯಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಭಾರತ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಕೂಡ ಭಾರತೀಯ ಆರ್ಮಿಯ ಕಾರ್ಯಕ್ಕೆ ಬೆಂಬಲ ಸೂಚಿಸಿ, ಆಪರೇಷನ್ ಸಿಂಧೂರ್ ಪೋಸ್ಟರ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಟೀಮ್ ಇಂಡಿಯಾದ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್, ಧರ್ಮೋ ರಕ್ಷತಿ ರಕ್ಷತಃ.. ಜೈ ಹಿಂದ್ ಕಿ ಸೇನಾ ಎಂದು ತಮ್ಮ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ರಾಜಸ್ಥಾನ್ ರಾಯಲ್ಸ್ ತಂಡದ ಯುವ ದಾಂಡಿಗ ವೈಭವ್ ಸೂರ್ಯವಂಶಿ, ನಮ್ಮ ಪಡೆಗಳ ಸುರಕ್ಷತೆ ಮತ್ತು ಯಶಸ್ಸನ್ನು ಹಾರೈಸುತ್ತೇನೆ. ಒಂದೇ ರಾಷ್ಟ್ರ… ಒಟ್ಟಾಗಿ ನಾವು ನಿಲ್ಲುತ್ತೇವೆ ಎಂದು ಆಪರೇಷನ್ ಸಿಂಧೂರ್ ಕಾರ್ಯಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಇನ್ನು ಟೀಮ್ ಇಂಡಿಯಾದ ಮಾಜಿ ವೇಗಿ ಕನ್ನಡಿಗ ವೆಂಕಟೇಶ್ ಪ್ರಸಾದ್ ಅವರು, ಭಾರತ್ ಮಾತಾಕಿ ಜೈ ಎಂದು ಆಪರೇಷನ್ ಸಿಂಧೂರ್ ಕಾರ್ಯಾಚರಣೆಗೆ ಮೆಚ್ಚುಗೆಗಳನ್ನು ಸೂಚಿಸಿದ್ದಾರೆ.

ಏಕತೆಯಲ್ಲಿ ನಿರ್ಭೀತ. ಶಕ್ತಿಯಲ್ಲಿ ಅಪರಿಮಿತ. ಭಾರತದ ರಕ್ಷಾ ಕವಚ ಇಲ್ಲಿನ ಜನರು. ಈ ಜಗತ್ತಿನಲ್ಲಿ ಭಯೋತ್ಪಾದನೆಗೆ ಅವಕಾಶವಿಲ್ಲ. ನಾವು ಒಂದೇ ತಂಡ! ಜೈ ಹಿಂದ್ ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.