ಮಿಲಿಟರಿ ಬೇಸ್​​ಗಳಿಗೆ ಹಾನಿಯಾಗಿಲ್ಲ: ಯಾವುದೇ ಪರಿಸ್ಥಿತಿ ಎದುರಿಸಲು ಸರ್ವಸನ್ನದ್ಧ ಎಂದ ಭಾರತೀಯ ಸೇನೆ

ನವದೆಹಲಿ, ಮೇ 12: ನಮ್ಮ ಎಲ್ಲಾ ಸೈನಿಕ ನೆಲೆಗಳು ಹಾಗೂ ಉಪಕರಣಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿವೆ, ಯಾವುದೇ ಪರಿಸ್ಥಿತಿ ಎದುರಿಸಲು ಸೇನೆ ಸನ್ನದ್ಧವಾಗಿದೆ ಎಂದು ಡಿಜಿಎಂಒ ರಾಜೀವ್ ಘಾಯ್ತಿ ಳಿಸಿದ್ದಾರೆ. ಇಂದು ಮೂರು ಸೇನೆಯ ಸೇನಾಧಿಕಾರಿಗಳು ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ.

ಪಾಕಿಸ್ತಾನ ನಮ್ಮ ವಾಯುನೆಲೆಗಳ ಮೇಲೆ ಪದೇ ಪದೇ ದಾಳಿ ಮಾಡಿದಾಗಲೆಲ್ಲಾ, ನಮ್ಮ ಬಲಿಷ್ಠ ವಾಯು ರಕ್ಷಣಾ ಗ್ರಿಡ್ ಮುಂದೆ ಅವರು ವಿಫಲರಾದರು ಎಂದು ಡಿಜಿಎಂಒ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಹೇಳಿದರು. ನಮ್ಮ ವಾಯು ರಕ್ಷಣೆ ಎಷ್ಟು ಬಲಿಷ್ಠವಾಗಿತ್ತೆಂದರೆ ಪಾಕಿಸ್ತಾನಕ್ಕೆ ಯಾವುದೇ ಅವಕಾಶವಿರಲಿಲ್ಲ. ನಿನ್ನೆ ನೀವು ಪಾಕಿಸ್ತಾನಿ ವಾಯುನೆಲೆಯ ದುಃಸ್ಥಿತಿಯನ್ನು ನೋಡಿದ್ದೀರಿ.

ಸತತ ಎರಡನೇ ದಿನವೂ ಸೇನೆ ಸುದ್ದಿಗೋಷ್ಠಿ ನಡೆಸಿದ್ದೇಕೆ? ಮೂರು ಸೇನೆಗಳು ಜಂಟಿಯಾಗಿ ಎರಡನೇ ದಿನವೂ ಸುದ್ದಿಗೋಷ್ಠಿ ನಡೆಸಿದೆ. ಭಾರತದ ಸೇನಾ ನೆಲೆಗಳನ್ನು ನಾಶಪಡಿಸಿದ್ದೇವೆ, ಅವರಿಗೆ ನಮ್ಮೊಂದಿಗೆ ಹೋರಾಡಲಾಗುವುದು, ಯುದ್ಧದಲ್ಲಿ ನಾವು ಗೆದ್ದಿದ್ದೇವೆ ಎಂದು ಪಾಕಿಸ್ತಾನ ಸುದ್ದಿಗೋಷ್ಠಿ ನಡೆಸಿದ ಕಾರಣ, ನಾವು ಸತ್ಯವನ್ನು ತಿಳಿಸಲು ಮತ್ತೆ ಬರಬೇಕಾಯಿತು ಎಂದು ಸೇನೆ ಹೇಳಿದೆ.

ನಮ್ಮ ಎಲ್ಲಾ ವಾಯುನೆಲೆಗಳು ಉತ್ತಮ ಸ್ಥಿತಿಯಲ್ಲಿವೆ. ನಾನು ನಮ್ಮ ಗಡಿ ಭದ್ರತಾ ಪಡೆಯನ್ನೂ ಹೊಗಳಲು ಬಯಸುತ್ತೇನೆ. ಅವರು ನಮ್ಮನ್ನು ತುಂಬಾ ಧೈರ್ಯದಿಂದ ಬೆಂಬಲಿಸಿದರು. ಅವರ ಪ್ರತಿ ಎಚ್ಚರಿಕೆ ವ್ಯವಸ್ಥೆಗಳು ನಮ್ಮ ವಾಯು ರಕ್ಷಣಾ ವ್ಯವಸ್ಥೆಯ ಭಾಗವಾಗಿದ್ದವು, ಇದು ಪಾಕಿಸ್ತಾನದ ದುಷ್ಟ ಉದ್ದೇಶಗಳನ್ನು ನಾಶಮಾಡಿತು.

ಏರ್ ಮಾರ್ಷಲ್ ಎ.ಕೆ. ಭಾರ್ತಿ ಮಾತನಾಡಿ, ನಮ್ಮ ಹಳೆಯ ಆಯುಧಗಳು ಯುದ್ಧದಲ್ಲಿ ಅದ್ಭುತಗಳನ್ನು ಮಾಡಿವೆ. ಪಾಕಿಸ್ತಾನದ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದವು. ಆಕಾಶ್ ವ್ಯವಸ್ಥೆಯನ್ನು ಬಳಸಿಕೊಂಡು, ಪಾಕಿಸ್ತಾನ ಕಳುಹಿಸಿದ್ದ ಡ್ರೋನ್‌ಗಳನ್ನು ನಾವು ನಾಶಪಡಿಸಿದ್ದೇವೆ. ಪಾಕಿಸ್ತಾನದ ಪಿಎಲ್-15 ಕ್ಷಿಪಣಿ ಮತ್ತು ಚೀನಾದ ಡ್ರೋನ್‌ಗಳನ್ನು ನಾವು ಯಶಸ್ವಿಯಾಗಿ ಗುರಿಯಾಗಿಸಿಕೊಂಡಿದ್ದೇವೆ ಎಂದು ಏರ್ ಮಾರ್ಷಲ್ ಎ.ಕೆ. ಭಾರ್ತಿ ಹೇಳಿದರು. ಪಾಕಿಸ್ತಾನಿ ಡ್ರೋನ್‌ಗಳನ್ನು ಲೇಸರ್ ಬಂದೂಕುಗಳಿಂದ ಗುರಿಯಾಗಿಸಲಾಗಿತ್ತು ಎಂದು ಹೇಳಿದ್ದಾರೆ.

ಪಾಕಿಸ್ತಾನದ ಸೇನೆ ಭಯೋತ್ಪಾದಕರ ಜೊತೆ ನಿಂತಿತ್ತು ನಮ್ಮ ಹೋರಾಟ ಭಯೋತ್ಪಾದನೆ ಮತ್ತು ಭಯೋತ್ಪಾದಕರ ವಿರುದ್ಧವೇ ಹೊರತು ಪಾಕಿಸ್ತಾನಿ ಸೈನ್ಯದ ವಿರುದ್ಧವಾಗಿರಲಿಲ್ಲ. ಆದರೆ ಪಾಕಿಸ್ತಾನಿ ಸೈನ್ಯವು ಭಯೋತ್ಪಾದಕರ ಜೊತೆ ನಿಲ್ಲುವುದು ಸೂಕ್ತವೆಂದು ಭಾವಿಸಿ ಅವರ ಹೋರಾಟವನ್ನು ತನ್ನದೇ ಆದ ಹೋರಾಟವನ್ನಾಗಿ ಮಾಡಿಕೊಂಡಿತು. ಅಂತಹ ಪರಿಸ್ಥಿತಿಯಲ್ಲಿ, ಅವರು ಅನುಭವಿಸುವ ಯಾವುದೇ ನಷ್ಟಕ್ಕೆ ಅವರೇ ಜವಾಬ್ದಾರರಾಗಿರುತ್ತಾರೆ.