ನಾನಾ ಕಾರಣಗಳಿಂದ ರಜೆಗೆ ಬಂದಿದ್ದ ಕರ್ನಾಟಕದ ಯೋಧರು ದೇಶ ಸೇವೆಗೆ ವಾಪಸ್

ಕಲಬುರಗಿ, ಮೇ 11: ಭಾರತದ ಏರ್​ಸ್ಟ್ರೈಕ್ ನೋಡಿ ಪಾಕಿಸ್ತಾನ   ಪತರಗುಟ್ಟಿದೆ. ಭಾರತ ಎದುರು ಹಾಕಿಕೊಂಡರೆ ನಮಗೆ ಉಳಿಗಾಲವಿಲ್ಲ ಅನ್ನೋದನ್ನ ಅರಿತ ಪಾಕಿಸ್ತಾನ, ಕೊನೆಗೂ ಭಾರತದ ಮುಂದೆ ಮಂಡಿಯೂರಿದೆ. ಕದನ ವಿರಾಮ ಘೋಷಣೆ ಮಾಡಲಾಗಿದೆ. ಆದರೆ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ದದ ಕಾರ್ಮೋಡ ಹಿನ್ನಲೆ ಇತ್ತ ರಜೆ ಮೇಲೆ ಬಂದಿದ್ದ ಕರ್ನಾಟಕದ ಯೋಧರನ್ನು  ಸೇನೆ ವಾಪಸ್ ಕರೆಸಿಕೊಳ್ಳುತ್ತಿದೆ. ಕಲಬುರಗಿಯ ಇಬ್ಬರು ಮತ್ತು ಬೀದರ್​ನ ಓರ್ವ ಯೋಧ ವಾಪಸ್​ ದೇಶ ಸೇವೆಗೆ ಮರಳಿದ್ದಾರೆ.

ಗಂಡು ಮಗು ಜನಿಸಿದ ಒಂದು ವಾರದಲ್ಲೇ ಕರ್ತವ್ಯಕ್ಕೆ ತೆರಳಿದ ಯೋಧ

ಪತ್ನಿಗೆ ಹೆರಿಗೆ ಹಿನ್ನೆಲೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಧುತ್ತರಗಾವ್ ಗ್ರಾಮದ ಯೋಧ ಹಣಮಂತರಾಯ್ ಔಸೆ ಸ್ವಗ್ರಾಮಕ್ಕೆ ಬಂದಿದ್ದರು. 20 ವರ್ಷದಿಂದ ಸಿಆರ್​​ಪಿಫ್​​ನಲ್ಲಿ ಸೇವೆ ಸಲ್ಲಿಸುತ್ತಿರುವ ಹಣಮಂತರಾಯ್, ಪ್ರಸಕ್ತ ಶ್ರೀನಗರದಲ್ಲಿ ಸೇವೆಯಲ್ಲಿದ್ದಾರೆ. 1 ತಿಂಗಳು ರಜೆ ಪಡೆದು ಏ.25ರಂದು ಸ್ವಗ್ರಾಮಕ್ಕೆ ಬಂದಿದ್ದರು. ಆದರೆ ಗಂಡು ಮಗು ಜನಿಸಿದ ಒಂದು ವಾರದಲ್ಲೇ ಕರ್ತವ್ಯಕ್ಕೆ ತೆರಳಿದ್ದು, ಕಲಬುರಗಿ ನಿಲ್ದಾಣದಲ್ಲಿ ಹಣಮಂತರಾಯ್​ಗೆ ಕುಟುಂಬಸ್ಥರು‌ ಬಿಳ್ಕೋಟ್ಟಿದೆ.

ಅದೇ ರೀತಿಯಾಗಿ ವಿಜಯಪುರ ಬಿಲ್ಲೆಯ ಬಬಲೇಶ್ವರ ತಾಲೂಕಿನ ಬಿಎಸ್​ಎಫ್ ಯೋಧ ಸಿದ್ದಪ್ಪ ಕರ್ತವ್ಯಕ್ಕೆ ವಾಪಸ್​ ಆಗಿದ್ದಾರೆ. ಸೇನೆಯ ತುರ್ತು ಕರೆಯ ಮೇರೆಗೆ ಕಲಬುರಗಿ ರೈಲು ನಿಲ್ದಾಣದದಿಂದ ಹೈದ್ರಾಬಾದ್​ಗೆ ತೆರಳಿದ್ದು, ಅಲ್ಲಿಂದ ಪಶ್ಚಿಮ ಬಂಗಾಳಕ್ಕೆ ತೆರಳಲಿದ್ದಾರೆ.

ತಂಗಿ ಮದುವೆಗೆಂದು ರಜೆ ಮೇಲೆ ಬಂದಿದ್ದ ಯೋಧ ಸೇವೆಗೆ ವಾಪಸ್

ಇನ್ನು ತಂಗಿ ಮದುವೆಗೆಂದು ರಜೆ ಮೇಲೆ ಬಂದಿದ್ದ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಚಂದಾಪುರ ಗ್ರಾಮದ ಬಸವಕಿರಣ ಸೇವೆಗೆ ವಾಪಸ್ ಆಗಿದ್ದಾರೆ. ಪಂಜಾಬ್‌ನ ಅಮೃತಸರದಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧ ಬಸವಕಿರಣ, ಏಪ್ರಿಲ್ 27ರಂದು ರಜೆ ಮೇಲೆ ಊರಿಗೆ ಬಂದಿದ್ದರು. ಇದೀಗ ಸೇನೆಯ ತುರ್ತು ಕರೆಯ ಮೇರೆಗೆ ಕರ್ತವ್ಯಕ್ಕೆ ಮರಳಿದ್ದಾರೆ. ಸಹೋದರ ಬಸವಕಿರಣಗೆ ಅಕ್ಕ ವಚನಶ್ರೀ ಶುಭ ಹಾರೈಸಿದ್ದಾರೆ.

ಮಾಜಿ ಸೈನಿಕ ಮನೋಹರ್ ಸಿಂಗ್ ಹೇಳಿದ್ದಿಷ್ಟು 

ಭಾರತ ಮತ್ತು ಪಾಕ್ ನಡುವೆ ಯುದ್ಧದ ವಿಚಾರವಾಗಿ ರಾಯಚೂರಿನಲ್ಲಿ ಮಾಜಿ ಸೈನಿಕ ಮನೋಹರ್ ಸಿಂಗ್ ಮಾತನಾಡಿದ್ದು, ಪೂರ್ಣ ಪ್ರಮಾಣದ ಯುದ್ಧ ನಡೆದರೇ ಸಿದ್ಧರಾಗುವಂತೆ ಮಾಜಿ ಸೈನಿಕರಿಗೆ ಸೂಚನೆ ನೀಡಿದ್ದಾರೆ. ಯಾವಾಗ ಯುದ್ಧವಾದರೆ ಮಾಜಿ ಸೈನಿಕರು ತಯಾರಾಗಬೇಕು ಅಂತ ಹೇಳಿದ್ದಾರೆ. ಅಲ್ಲದೇ ಟೆರಿಟೋರಿ ಆರ್ಮಿ ರೆಡಿ ಇರಬೇಕು ಅಂತ ಹೇಳಿದ್ದಾರೆ. ಎಕ್ಸ್ ಸರ್ವಿಸ್ ಮ್ಯಾನ್​ಗಳಿಗೆ ಅನುಭವ ಹೆಚ್ಚಿರುತ್ತೆ. ಹೀಗಾಗಿ ಮೊದಲು ನಮಗೆ ಆದ್ಯತೆ ನೀಡಲಾಗುತ್ತೆ ಎಂದು ಹೇಳಿದ್ದಾರೆ.