
ಬೆಂಗಳೂರು: ಭಾರತೀಯ ಸೇನೆಯು ಬುಧವಾರ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ 9 ಉಗ್ರರ ಅಡಗುತಾಣಗಳ ಮೇಲೆ ದಾಳಿ ಮಾಡಿ ಯಶಸ್ವಿಯಾಗಿದೆ. ಆಪರೇಷನ್ ಸಿಂಧೂರ ಯಶಸ್ವಿ ದಾಳಿ ಹಿನ್ನೆಲೆ ಬೆಂಗಳೂರಿನ ದೇವಾಲಯಗಳಲ್ಲಿ ಸೇನೆಗೆ ಒಳಿತಾಗಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ.
ಆಪರೇಷನ್ ಸಿಂಧೂರ ಯಶಸ್ವಿಯಾದ ಹಿನ್ನೆಲೆ ಮುಜರಾಯಿ ಇಲಾಖೆಯಡಿಯಲ್ಲಿ ಬರುವ ಎಲ್ಲಾ ದೇವಾಲಯಗಳಲ್ಲಿ ಯೋಧರ ಒಳಿತಿಗಾಗಿ ವಿಶೇಷ ಪೂಜೆ ಸಲ್ಲಿಕೆಗೆ ಆದೇಶ ನೀಡಲಾಗಿತ್ತು. ನಗರದ ಇತಿಹಾಸ ಪ್ರಸಿದ್ಧ ಗವಿಗಂಗಾಧರ ದೇವಾಲಯದಲ್ಲಿ ಸೈನ್ಯದ ಬಲವರ್ಧನೆಗೆ ಸೋಮಸುಂದರ್ ದೀಕ್ಷಿತ್ರ ನೇತೃತ್ವದಲ್ಲಿ ವಿಶೇಷ ದುರ್ಗಾ ಹೋಮ ಮಾಡಲಾಯಿತು.
ನಾಡಿಗೆ, ನಮ್ಮನ್ನ ರಕ್ಷಿಸುವ ಸೈನ್ಯಕ್ಕೆ ಬಲ ನೀಡು ತಾಯಿ ಎಂದು ದುರ್ಗಾ ಹೋಮ ಮಾಡಲಾಗಿದ್ದು, ದುರ್ಗಾ ಹೋಮದ ಜೊತೆಗೆ ವಿಶೇಷ ಪೂಜೆಗೆ ಸಿದ್ಧತೆ ನಡೆಸಲಾಗಿದೆ. ಈ ವೇಳೆ ಶತ್ರುಗಳ ಸಂಹಾರದ ಜೊತೆಗೆ ಸೈನಿಕರ ಶಕ್ತಿಗಾಗಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಲಾಗಿದೆ.
ಸೇನೆಯ ಒಳಿತಿಗಾಗಿ ಮಾಡಲಾದ ಪೂಜೆ, ಹೋಮ ಹವನಗಳ ಕುರಿತು ಗವಿಗಂಗಾಧರ ದೇವಾಲಯದ ಪ್ರಧಾನ ಅರ್ಚಕ ಶ್ರೀ ಸೋಮಸುಂದರ್ ದೀಕ್ಷಿತ್ ಮಾತನಾಡಿದರು, ಶತ್ರು ಸಂಹಾರಕ್ಕಾಗಿ ದುರ್ಗಾ ಹೋಮ ಮಾಡಲಾಗುತ್ತಿದೆ. ಸೈನ್ಯಕ್ಕೆ ಬಲ ಸಿಗಲಿ. ಉಗ್ರರ ಸಂಹಾರ ಆಗಲಿ ಎಂದು ಹೋಮ ಮಾಡಲಾಗುತ್ತಿದೆ. ನಾವು ಹಣೆಗೆ ತಿಲಕ ಸಿಂಧೂರ ಹಚ್ಚುತ್ತೇವೆ. ನಮ್ಮ ಹೆಣ್ಣುಮಕ್ಕಳ ಸಿಂಧೂರ ತೆಗೆಯಲು ಬಂದವರನ್ನು, ನಾಶ ಮಾಡಲು ಬಂದವರನ್ನು ನಾವು ಸುಮ್ಮನೆ ಬಿಡುವುದಿಲ್ಲ. ಅವರು ಮಹಾಸಂಹಾರಕ್ಕೆ ದಾರಿ ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು.
ಯುದ್ಧ ಕಾಲದಿಂದಲೂ ದುರ್ಗಾ ಹೋಮ ಮಾಡುತ್ತಾ ಬಂದಿದ್ದೇವೆ. ಇಂದು ಸಹ ಹೋಮ ಮಾಡಿ ಶತ್ರು ಸಂಹಾರವಾಗಲಿ ಎಂದು ಪ್ರಾರ್ಥನೆ ಮಾಡಲಾಗಿದೆ. ಅವರು 26 ಜನರ ಸಾಯಿಸಿದ್ದಾರೆ. ಪ್ರಧಾನಿ ಮೋದಿಯವರು ಅದಕ್ಕೆ ತಕ್ಕಂತೆ ಸಿಂಧೂರದ ಹೆಸರಿಂದ ದಾಳಿ ಮಾಡಿದ್ದಾರೆ. ದಸರಾ ನವರಾತ್ರಿಯಲ್ಲಿ ಉಪವಾಸ ಪೂಜೆ ಮಾಡ್ತಾರೆ. ದುರ್ಗಾ ದೇವಿ ಕೃಪೆಯಿಂದ ಶತ್ರುಗಳ ನಾಶ ಮಾಡಲು ಈ ಹೋಮ ಮಾಡಲಾಗುತ್ತಿದೆ ಎಂದರು.
ಅಲ್ಲದೇ ಮಲ್ಲೇಶ್ವರಂನ ಕಾಡು ಮಲ್ಲೇಶ್ವರ ದೇವಾಲಯದಲ್ಲಿ ದೇವರಿಗೆ ಅಭಿಷೇಕ ವಿಶೇಷ ಪೂಜೆ ಸಲ್ಲಿಸಲಾಗಿದ್ದು, ಶಾಂತಿ ನೆಲೆಸಲಿ ಎಂದು ರುದ್ರಪಾರಾಯಣ ಪೂಜೆ ಸಹ ಮಾಡಲಾಗಿದೆ. ಆಪರೇಷನ್ ಸಿಂಧೂರವು ಯಶಸ್ವಿಯಾದ ಬೆನ್ನಲ್ಲೇ ಭಾರತಕ್ಕೆ ಮತ್ತಷ್ಟು ಯಶಸ್ಸು ಸಿಗಲಿ ಎಂದು ವಿಶೇಷ ಹೋಮ ಮಾಡಲಾಗಿದ್ದು, ಇಂದು ಮಧ್ಯಾಹ್ನದವರೆಗೂ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಲಿದೆ.
ಬೆಂಗಳೂರಿನ ಬಸವನಗುಡಿಯಲ್ಲಿರುವ ಕಾರಂಜಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಯೋಧರ ಹಾಗೂ ದೇಶದ ಒಳಿತಿಗಾಗಿ ಪೂಜೆ ಸಲ್ಲಿಸಲಾಗಿದೆ. ಹಾಗೆಯೇ ಇಂದು ಬೆಳಗ್ಗೆ ಬನಶಂಕರಿ ದೇವಸ್ಥಾನದಲ್ಲಿ ದೇಶ ಕಾಯೋ ಸೈನಿಕರ ಆರೋಗ್ಯಕ್ಕಾಗಿ ವಿಶೇಷ ಪೂಜೆ ಮಾಡಲಾಯಿತು.
