ಭಟ್ಕಳದ ಹಾಡುವಳ್ಳಿ ಯಲ್ಲಿ ಒಂದೇ ಕುಟುಂಬದ ನಾಲ್ವರನ್ನು ಕೊಲೆ ಮಾಡಿದ ಶ್ರೀಧರ ಭಟ್ಟ ಹಾಗೂ ವಿನಯ ಭಟ್ಟ ದೋಷಿ ಎಂದು ಜಿಲ್ಲಾ ನ್ಯಾಯಾಲಯದಿಂದ ಘೋಷಣೆ

ಭಟ್ಕಳ : ೨೦೨೩ರ ಫೆ. ೨೩ರಂದು ಭಟ್ಕಳ ತಾಲೂಕಿನ ಹಾಡುವಳ್ಳಿಯಲ್ಲಿ ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿದ ಇಬ್ಬರು ಆರೋಪಿಗಳಿಗೆ ಕಾರವಾರದ ಉತ್ತರ ಕನ್ನಡ ಜಿಲ್ಲಾ ನ್ಯಾಯಾಲಯ ದೋಷಿ ಎಂದು ಘೋಷಿಸಿದೆ.

ಹಾಡುವಳ್ಳಿಯ ಹಲ್ಯಾಣಿಯ ಶ್ರೀಧರ ಭಟ್ ಮತ್ತು ಮಗ ವಿನಯ ಭಟ್ ಶಿಕ್ಷೆಗೆ ಗುರಿಯಾದ ಅಪರಾಧಿಗಳು. ಹಾಡುವಳ್ಳಿಯ ಶಂಭು ಭಟ್‌(೬೫), ಅಪರ ಪತ್ನಿ ಮಾದೇವಿ ಭಟ್‌(೬೦), ಮಗ ರಾಘವೇಂದ್ರ (ರಾಜು) ಭಟ್ (೩೪) ಮತ್ತು ಸೊಸೆ ಕುಸುಮಾ ಭಟ್(30) ಎಂಬುವವರನ್ನು ಕೊಚ್ಚಿ ಕೊಲೆ ಮಾಡಲಾಗಿತ್ತು. ಅದೃಷ್ಟವಶಾತ್ ರಾಘವೇಂದ್ರ ಭಟ್ ಹಾಗೂ ಕುಸುಮಾ ದಂಪತಿಯ ಇಬ್ಬರು ಮಕ್ಕಳು ಬಚಾವ್‌ ಆಗಿದ್ದರು.

ಈ ಪ್ರಕರಣದ ಬಗ್ಗೆ ಮೃತ ಶಂಭು ಭಟ್ ಮಗಳು ಜಯಾ ಅಡಿಗ ದೂರು ನೀಡಿದ್ದರು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಮೂವರನ್ನು ವಶಕ್ಕೆ ಪಡೆದು, ಇಬ್ಬರನ್ನು ತನಿಖೆಗೆ ಒಳಪಡಿಸಿದ್ದರು. ಆಗಿನ ಗ್ರಾಮೀಣ ಠಾಣೆ ಸಿಪಿಐ ಚಂದನ ಗೋಪಾಲ ಅವರು ಪ್ರಕರಣದ ತನಿಖಾಧಿಕಾರಿಯಾಗಿ ಪ್ರಕರಣದ ಎಲ್ಲಾ ಸಾಕ್ಷಿಗಳನ್ನು ಸಂಗ್ರಹಿಸಿದ್ದರು. ಇಬ್ಬರು ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.

ಉತ್ತರ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಮ್. ನಾರಾಯಣ ಅವರ ಮಾರ್ಗದರ್ಶನದಲ್ಲಿ ತನಿಖಾ ಸಹಾಯಕರಾಗಿ ಕೋರ್ಟ್ ಮಾನಿಟರಿಂಗ್ ದೀಪಕ ಎಸ್. ನಾಯ್ಕ ಮತ್ತು ರಾಮಚಂದ್ರ ಕಜ್ಜಿದೋಣಿ ಕಾರ್ಯನಿರ್ವಹಿಸಿದ್ದರು. ಪ್ರಕರಣದ ಕುರಿತಂತೆ ಜಿಲ್ಲಾ ನ್ಯಾಯಾಲಯದಲ್ಲಿ 72 ಸಾಕ್ಷಿಗಳನ್ನು ವಿಚಾರಣೆ ನಡೆಸಿದ ಬಳಿಕ ಇಬ್ಬರು ಆರೋಪಿಗಳಾದ ತಂದೆ ಶ್ರೀಧರ ಭಟ್ ಮತ್ತು ಮಗ ವಿನಯ ಭಟ್ ದೋಷಿ ಎಂದು ಪರಿಗಣಿಸಲಾಗಿದೆ. ಈ ಪ್ರಕರಣದಲ್ಲಿ ಈರ್ವರೂ ನಾಲ್ವರನ್ನು ಕೊಲೆ ಮಾಡಿ ಸಾಕ್ಷ್ಯನಾಶ ಮಾಡಿರುವುದು ಸಾಬೀತಾಗಿದೆ. ಪ್ರಕರಣದ ವಿಚಾರಣೆ ನಡೆಸಿದ್ದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಡಿ.ಎಸ್.ವಿಜಯ ಕುಮಾರ. ಆರೋಪಿಗಳನ್ನು ದೋಷಿ ಎಂದು ತೀರ್ಪು ನೀಡಿದ್ದಾರೆ ಈ ಪ್ರಕರಣದ ಸರಕಾರಿ ಅಭಿಯೋಜಕರಾಗಿ ತನುಜಾ ಹೊಸಪಟ್ಟಣ ಕಾರ್ಯನಿರ್ವಹಿಸಿದ್ದರು.