ಪೆಹಲ್ಗಾಮ್ ಉಗ್ರರ ದಾಳಿ: ಉತ್ತರ ಕನ್ನಡ ಪ್ರವಾಸಿ ಸ್ಥಳಗಳಲ್ಲಿ ಹೈಲರ್ಟ್​, ಸಮುದ್ರ ತೀರದಲ್ಲೂ ಕಟ್ಟೆಚ್ಚರ

ಕಾರವಾರ, (ಏಪ್ರಿಲ್ 30): ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್​ನಲ್ಲಿ ಉಗ್ರರ ದಾಳಿಯಲ್ಲಿ 26 ಪ್ರವಾಸಿಗರ ಸಾವು ಹಿನ್ನೆಲೆಯಲ್ಲಿ ಭಾರತದ ವಿವಿಧ ಪ್ರವಾಸಿ ತಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಅದರಲ್ಲೂ ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ಸ್ಥಳಗಳ ಮೇಲೆ ಪೊಲೀಸರ ಹದ್ದಿನಕಣ್ಣಿಟ್ಟಿದ್ದಾರೆ. ಹೆಚ್ಚಾಗಿ ಪ್ರವಾಸಿಗರು ಭೇಟಿ ನೀಡುವ ಗೋಕರ್ಣ ಹಾಗೂ ಮುರುಡೇಶ್ವರದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಅಲ್ಲದೇ ಹೋಮ್​ಸ್ಟೇ, ರೆಸಾರ್ಟ್​​​ಗಳಲ್ಲಿ ಪ್ರವಾಸಿಗರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಹೊರ ರಾಜ್ಯ ಹಾಗೂ ವಿದೇಶಿ ಪ್ರವಾಸಿಗರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಅಲ್ಲದೇ ಹೋಟೆಲ್, ಲಾಡ್ಜ್, ಹೋಮ್​ಸ್ಟೇಗಳಲ್ಲಿ ಸಿಸಿಟಿವಿ ಅಳವಡಿಕೆಗೆ ಜಿಲ್ಲಾ ಪೊಲೀಸ್ ಖಡಕ್ ಸೂಚನೆ ನೀಡಿದ್ದು. ಇನ್ನು ಕರಾವಳಿ ಸಮುದ್ರ ಭಾಗದಲ್ಲಿ ಕರಾವಳಿ ಕಾವಲುಪಡೆ ಹಾಗೂ ಭಾರತೀಯ ಕೋಸ್ಟ್ ಗಾರ್ಡ್​​ ಸಹ ಕಾರ್ಯಾಚರಣೆ ನಡೆಸಿದ್ದು, ಸಮುದ್ರ ಮಾರ್ಗದ ಮೂಲಕ ಶತ್ರುಗಳು ಒಳ ನುಗ್ಗದಂತೆ ತಡೆಯಲು ಬೋಟ್​​ಗಳ ದಾಖಲೆ ತಪಾಸಣೆ ಮಾಡುತ್ತಿದೆ.