ವಕ್ಫ್ ಆಸ್ತಿ, ಮುಸ್ಲಿಂ ಸ್ಮಶಾನಗಳ ರಕ್ಷಣೆಗೆ 150 ಕೋಟಿ ರೂ: ಸಿದ್ದರಾಮಯ್ಯ ಘೋಷಣೆ

ಕರ್ನಾಟಕ ಬಜೆಟ್ 2025: ವಕ್ಫ್ ಆಸ್ತಿ ಸಂಬಂಧ ರಾಜ್ಯದಾದ್ಯಂತ ಇತ್ತೀಚೆಗೆ ಬಹಳಷ್ಟು ಚರ್ಚೆಗಳಾಗಿದ್ದವು. ರೈತರ ಜಮೀನು ತನ್ನದೆಂದು ವಕ್ಫ್ ನೋಟಿಸ್ ಕಳುಹಿಸಿದ್ದ ವಿಚಾರ ವವಾದಕ್ಕೀಡಾಗಿತ್ತು. ಇಂಥ ಸಂದರ್ಭದಲ್ಲೇ ವಕ್ಫ್ ಆಸ್ತಿಯ ರಕ್ಷಣೆ ಮತ್ತು ಮುಸ್ಲಿಂ ಸ್ಮಶಾನಗಳ ರಕ್ಷಣೆಗಾಗಿ ಸಿಎಂ ಸಿದ್ದರಾಮಯ್ಯ ಬಜೆಟ್​​ನಲ್ಲಿ ಭರ್ಜರಿ ಅನುದಾನ ಘೋಷಣೆ ಮಾಡಿದ್ದಾರೆ.

ಬೆಂಗಳೂರು, ಮಾರ್ಚ್​ 7: ವಕ್ಫ್ ಆಸ್ತಿಗಳ ದುರಸ್ತಿ ಮತ್ತು ನವೀಕರಣ, ಮುಸ್ಲಿಂ ಸ್ಮಶಾನಗಳ ರಕ್ಷಣೆಗಾಗಿ ಮೂಲಸೌಕರ್ಯ ಒದಗಿಸಲು 150 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಬಜೆಟ್​​ನಲ್ಲಿ ಘೋಷಣೆ ಮಾಡಿದರು. ದೇಶದಾದ್ಯಂತ ವಕ್ಫ್ ಆಸ್ತಿ ವಿಚಾರ ಚರ್ಚೆಯಲ್ಲಿರುವ ಮತ್ತು ರಾಜ್ಯದಲ್ಲಿ ಅನೇಕ ರೈತರ ಜಮೀನಿಗೆ ಸಂಬಂಧಿಸಿ ವಕ್ಫ್ ಆಸ್ತಿ ಎಂಬ ನೋಟಿಸ್ ಬಂದಿರುವ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿರುವ ಸಂದರ್ಭದಲ್ಲೇ ಸಿದ್ದರಾಮಯ್ಯ ಬಜೆಟ್​​ನಲ್ಲಿ ಮಹತ್ವದ ಘೋಷಣೆ ಮಾಡಿದ್ದಾರೆ.