ತಿರಂಗಾ ಹಿಡಿಯಬೇಕಾದ ಕೈಯ್ಯಲ್ಲಿ ಚೂರಿ ಹಿಡಿದಿದ್ದಾರೆ.! – ಮುತಾಲಿಕ್ ಕಿಡಿ

ಯಲ್ಲಾಪುರ: ರಾಜ್ಯ ಬಿಜೆಪಿ ಸರ್ಕಾರಕ್ಕೆ ಮಾನ, ಮರ್ಯಾದೆ ಇದ್ದರೆ, ರಾಜ್ಯದ ಬಗೆಗೆ ನಿಜವಾದ ಕಾಳಜಿ ಇದ್ದರೆ, ಪದೇ ಪದೇ ಹಿಂದು ಕಾರ್ಯಕರ್ತರ ಮೇಲೆ ದಾಳಿ ಮಾಡಲು ಕುಮ್ಮಕ್ಕು ನೀಡುವ ಎಸ್.ಡಿ.ಪಿ.ಐ, ಪಿ.ಎಫ್.ಐ ನಂತಹ ದೇಶದ್ರೋಹಿ ಸಂಘಟನೆಗಳನ್ನು ನಿಷೇಧಿಸಬೇಕೆಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ ಮುತಾಲಿಕ ಆಗ್ರಹಿಸಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಪದೇ ಪದೇ ಹಿಂದುಗಳ ಮೇಲೆ ಹಲ್ಲೆಯಾಗುತ್ತಿದೆ. ಇಂತಹ ಕೃತ್ಯಗಳಿಗೆ ದೇಶದ್ರೋಹಿ ಸಂಘಟನೆಗಳು ಕಾರಣ ಎಂಬುದೂ ಸಾಬೀತಾಗುತ್ತಿದೆ. ಆದರೂ ಅಂತಹ ಸಂಘಟನೆಗಳನ್ನು ನಿಷೇಧಿಸಲು ಸರ್ಕಾರ ಹಿಂದೇಟು ಹಾಕುತ್ತಿರುವುದೇಕೆ.? ಇನ್ನೆಷ್ಟು ಜನರು ಸಾವನ್ನು ಸರ್ಕಾರ ಬಯಸುತ್ತಿದೆ ಎಂದು ಪ್ರಶ್ನಿಸಿದರು.

ಶಿವಮೊಗದ್ದಲ್ಲಿ ನಡೆದ ಹಲ್ಲೆ ಪೂರ್ವನಿಯೋಜಿತ. ಎಲ್ಲೆಡೆ ಸ್ವಾತಂತ್ರ್ಯದ ಅಮೃತಮಹೋತ್ಸವ ಯಶಸ್ವಿಯಾಗಿ ಆಚರಣೆಯಾಗುತ್ತಿರುವುದನ್ನು ನೋಡಲು ಸಹಿಸಲಾಗದೇ ದೇಶದ್ರೋಹಿಗಳು ಈ ಕೃತ್ಯ ನಡೆಸಿದ್ದಾರೆ. ತಿರಂಗಾ ಹಿಡಿಯಬೇಕಾದ ಕೈಯ್ಯಲ್ಲಿ ಚೂರಿ ಹಿಡಿದಿದ್ದಾರೆ. ಅವರನ್ನು ಮಟ್ಟ ಹಾಕುವ ಕಾರ್ಯ ಸರ್ಕಾರದಿಂದ ಆಗಬೇಕೆಂದು ಒತ್ತಾಯಿಸಿದರು.