ಭಾಷೆಯ ಆಧಾರದ ಮೇಲೆ ಸಮಾಜ ವಿಭಜಿಸುವ ಪ್ರಯತ್ನಗಳಿಂದ ದೂರವಿರಿ; ಪ್ರಧಾನಿ ಮೋದಿ

ನವದೆಹಲಿ: ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಆಹ್ವಾನದ ಮೇರೆಗೆ ಇಂದು ದೆಹಲಿಯ ವಿಜ್ಞಾನ ಭವನದಲ್ಲಿ 98ನೇ ಅಖಿಲ ಭಾರತೀಯ ಮರಾಠಿ ಸಾಹಿತ್ಯ ಸಮ್ಮೇಳನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಪಿಎಂ ಮೋದಿ, ಭಾರತೀಯ ಭಾಷೆಗಳ ನಡುವೆ ಎಂದಿಗೂ ದ್ವೇಷವಿರಲಿಲ್ಲ. ಭಾಷಾಶಾಸ್ತ್ರದ ಆಧಾರದ ಮೇಲೆ ತಾರತಮ್ಯ ಮಾಡುವ ಪ್ರಯತ್ನಗಳಿಗೆ ಸೂಕ್ತ ಉತ್ತರವನ್ನು ನೀಡುವ ಮೂಲಕ ಭಾಷೆಗಳೇ ಪರಸ್ಪರ ಭಾಷೆಗಳನ್ನು ಶ್ರೀಮಂತಗೊಳಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

“ಮರಾಠಿ ಶೌರ್ಯ, ಧೈರ್ಯ, ಸೌಂದರ್ಯ, ಸೂಕ್ಷ್ಮತೆ ಮತ್ತು ಸಮಾನತೆಯ ಅಂಶಗಳನ್ನು ಪ್ರತಿಬಿಂಬಿಸುವ ಸಂಪೂರ್ಣ ಭಾಷೆಯಾಗಿದೆ. ಭಾರತೀಯ ಭಾಷೆಗಳಲ್ಲಿ ಎಂದಿಗೂ ದ್ವೇಷವಿರಲಿಲ್ಲ. ಭಾಷೆಗಳು ಯಾವಾಗಲೂ ಪರಸ್ಪರ ಪ್ರಭಾವ ಬೀರಿವೆ. ಭಾಷೆಗಳ ಆಧಾರದ ಮೇಲೆ ವಿಭಜನೆಗಳನ್ನು ಸೃಷ್ಟಿಸಲು ಪ್ರಯತ್ನಗಳು ನಡೆದಾಗ ಭಾರತದ ಹಂಚಿಕೆಯ ಭಾಷಾ ಪರಂಪರೆ ಸೂಕ್ತ ಉತ್ತರವನ್ನು ನೀಡಿತು” ಎಂದು ಮೋದಿ ಹೇಳಿದ್ದಾರೆ.

“ಭಾಷೆಗಳ ಆಧಾರದಲ್ಲಿ ವಿಭಜನೆ ಮಾಡುವುದು ತಪ್ಪು. ಎಲ್ಲಾ ಭಾಷೆಗಳನ್ನು ಅಳವಡಿಸಿಕೊಳ್ಳುವುದು ಮತ್ತು ಶ್ರೀಮಂತಗೊಳಿಸುವುದು ನಮ್ಮ ಸಾಮಾಜಿಕ ಜವಾಬ್ದಾರಿ” ಎಂದಿರುವ ಮೋದಿ “ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅನುಷ್ಠಾನವು ದೇಶಾದ್ಯಂತ ತ್ರಿಭಾಷಾ ಸೂತ್ರವನ್ನು ಹೇರುವ ಪ್ರಯತ್ನವಾಗಿದೆ” ಎಂಬ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರ ಹೇಳಿಕೆಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.

“ಭಾರತವು ನಿರಂತರವಾಗಿ ವಿಕಸನಗೊಂಡು ಹೊಸ ಆಲೋಚನೆಗಳನ್ನು ಅಳವಡಿಸಿಕೊಂಡಿದೆ ಮತ್ತು ಹೊಸ ಬದಲಾವಣೆಗಳನ್ನು ಸ್ವಾಗತಿಸುತ್ತಿರುವುದರಿಂದ ವಿಶ್ವದ ಅತ್ಯಂತ ಹಳೆಯ ನಾಗರಿಕತೆಗಳಲ್ಲಿ ಒಂದಾಗಿದೆ. ಭಾರತವು ವಿಶ್ವದ ಅತಿದೊಡ್ಡ ಭಾಷಾ ವೈವಿಧ್ಯತೆಯನ್ನು ಹೊಂದಿದೆ ಎಂಬುದು ಇದಕ್ಕೆ ಪುರಾವೆಯಾಗಿದೆ. ಈ ಭಾಷಾ ವೈವಿಧ್ಯತೆಯು ನಮ್ಮ ಏಕತೆಯ ಅತ್ಯಂತ ಮೂಲಭೂತ ಆಧಾರವಾಗಿದೆ” ಎಂದು ಮೋದಿ ಹೇಳಿದ್ದಾರೆ.

“ಮರಾಠಿ ಇತರ ಭಾಷೆಗಳಿಂದ ಸಾಹಿತ್ಯವನ್ನು ತೆಗೆದುಕೊಂಡು ಆ ಭಾಷೆಗಳನ್ನು ಸಹ ಶ್ರೀಮಂತಗೊಳಿಸಿದೆ. ಮಾಮಾ ವಾರೆರ್ಕರ್ ಆನಂದ್ ಮಠವನ್ನು ಅನುವಾದಿಸಿದರು. ವಿಂದಾ ಕರಂಡಿಕರ್ ಅವರ ಸಾಹಿತ್ಯವು ಅನೇಕ ಭಾಷೆಗಳಿಗೆ ಅನುವಾದವಾಗಿದೆ. ಭಾರತೀಯ ಭಾಷೆಗಳ ನಡುವೆ ಎಂದಿಗೂ ದ್ವೇಷವಿರಲಿಲ್ಲ. ಭಾಷೆಗಳು ಯಾವಾಗಲೂ ಪರಸ್ಪರ ಹತ್ತಿರವಾಗುವಂತೆ ಮಾಡಿವೆ. ಅವು ಪರಸ್ಪರ ಶ್ರೀಮಂತಗೊಳಿಸಿವೆ. ಆದರೆ ಆಗಾಗ ಭಾಷೆಯ ಹೆಸರಿನಲ್ಲಿ ತಾರತಮ್ಯ ಮಾಡಲಾಗುತ್ತದೆ. ಆಗ ನಮ್ಮ ಭಾಷೆಯೇ ಉತ್ತರವಾಗಬೇಕು. ನಾವು ಈ ತಾರತಮ್ಯದಿಂದ ದೂರವಿರಬೇಕು. ನಾವು ಭಾಷೆಗಳನ್ನು ಸಂರಕ್ಷಿಸಬೇಕು. ಇದು ನಮ್ಮ ಕರ್ತವ್ಯ. ನಾವು ಎಲ್ಲಾ ಭಾಷೆಗಳಲ್ಲಿ ಶಿಕ್ಷಣವನ್ನು ಪ್ರೋತ್ಸಾಹಿಸುತ್ತಿದ್ದೇವೆ” ಎಂದು ಪ್ರಧಾನಿ ಮೋದಿ ಹೇಳಿದರು..

ಮರಾಠಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡಿದ ಒಂದು ವರ್ಷದ ನಂತರ ಮತ್ತು 71 ವರ್ಷಗಳ ಅಂತರದ ನಂತರ ಮೂರು ದಿನಗಳ ಅಖಿಲ ಭಾರತೀಯ ಮರಾಠಿ ಸಾಹಿತ್ಯ ಸಮ್ಮೇಳನವನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಸಲಾಗುತ್ತಿದೆ.