
ಬೆಂಗಳೂರು, ಫೆಬ್ರವರಿ 6: ಕರ್ನಾಟಕದಾದ್ಯಂತ ಬಾಣಂತಿಯರ ಸರಣಿ ಸಾವು ಸಂಭವಿಸಲು ಕಾರಣ ಏನು ಎಂದು ತಿಳಿಯಲು ಸರ್ಕಾರ ಮುಂದಾಗಿತ್ತು. ಅದಕ್ಕಾಗಿ ಡಾ. ಸವಿತಾ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ, ಸಾವಿಗೆ ಕಾರಣ ಏನು ಎಂದು ತಿಳಿಯಿರಿ ಎಂದು ಬಳ್ಳಾರಿಗೆ ಕಳುಹಿಸಲಾಗಿತ್ತು. ಬಳಿಕ ಗ್ಲೂಕೋಸ್ನಲ್ಲಿ ಸಮಸ್ಯೆ ಇರುವುದು ಗೊತ್ತಾಗಿತ್ತು. ಕಳಪೆ ಐವಿ ಫ್ಲೂಯಿಡ್ ಕಾರಣ ಎಂದು ಸಮಿತಿಯು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಆದರೆ, ಇದೀಗ ಮತ್ತೆರಡು ಐವಿ ಫ್ಲೂಯಿಡ್ ಕೂಡಾ ಬಳಕೆಗೆ ಯೋಗ್ಯವಲ್ಲ ಎಂಬ ಅಂಶ ಪತ್ತೆಯಾಗಿದ್ದು, ಆತಂಕ ಸೃಷ್ಟಿಸಿದೆ.
ಬಳ್ಳಾರಿಯಲ್ಲಿ ಬಳಸಿದ್ದ ಐವಿ ಫ್ಲೂಯಿಡ್ನ 3 ಬ್ಯಾಚ್ಗಳನ್ನು ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿತ್ತು. ಅವುಗಳಲ್ಲಿ ಎರಡು ಬ್ಯಾಚ್ ಐವಿ ಫ್ಲೂಯಿಡ್ ಬಳಕೆಗೆ ಯೋಗ್ಯವಲ್ಲ ಎಂಬುದು ತಿಳಿದುಬಂದಿತ್ತು. ಅದರ ಬೆನ್ನಲ್ಲೇ ಇದೀಗ ಮತ್ತೆರಡು ಐವಿ ಫ್ಲೂಯಿಡ್ ಕೂಡಾ ಬಳಕೆಗೆ ಯೋಗ್ಯವಲ್ಲ ಎಂಬುದು ಬಹಿರಂಗವಾಗಿದೆ. ಪಶ್ಚಿಮ ಬಂಗಾಳ ಕಂಪನಿಯ ಉತ್ಪನ್ನಗಳು ಉತ್ತಮವಾಗಿಲ್ಲ ಎನ್ನುವಂತಾಗಿದೆ.
ಡೆಸ್ಟ್ರೋಸ್ ಹಾಗೂ ಇಂಜೆಕ್ಷನ್ ಕೂಡ ಅಸುರಕ್ಷಿತ
ಐವಿ ಫ್ಲೂಯಿಡ್ ಬಳಕೆಯಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ಜೀವಕ್ಕೆ ಕುತ್ತು ತರುತ್ತದೆ. ಡೆಸ್ಟ್ರೋಸ್ ಹಾಗೂ ಇಂಜೆಕ್ಷನ್ ಕೂಡ ಅಸುರಕ್ಷಿತ ಎಂಬ ಅಂಶ ಬಯಲಾಗಿದೆ. ಹೀಗಾಗಿ ಆಸ್ಪತ್ರೆಗಳಲ್ಲಿ ಯಾವ ಐವಿ ಫ್ಲೂಯಿಡ್ ಬಳಸಬೇಕು ಎಂಬ ಬಗ್ಗೆ ಆರೋಗ್ಯ ಇಲಾಖೆಗೆ ಆತಂಕ ಶುರುವಾಗಿದೆ. ಐವಿ ಫ್ಲೂಯಿಡ್ ಅಸುರಕ್ಷಿತ ಎಂಬುದು ಸೆಂಟ್ರಲ್ ಡ್ರಗ್ಸ್ ಲ್ಯಾಬೋರೇಟರಿಯ ಪ್ರಯೋಗದಲ್ಲಿ ದೃಢಪಟ್ಟಿದೆ.
ಒಟ್ಟಿನಲ್ಲಿ ಐವಿ ಫ್ಲೂಯಿಡ್ ಈ ಹಿಂದೆಯೂ ಬಳಕೆಗೆ ಯೋಗ್ಯವಲ್ಲ ಎಂದು ವರದಿ ಬಂದಿತ್ತು. ಬಳಿಕ ಕೇಂದ್ರದ ಲ್ಯಾಬ್ನಲ್ಲಿ ಪಾಸಿಟಿವ್ ಬಂದಿತ್ತು. ಇದೀಗ ಮತ್ತೆ ಫ್ಲೂಯಿಡ್ಗಳ ಮರು ಪರೀಕ್ಷೆ ಮಾಡಲಾಗ್ತಿದ್ದು, ಇನ್ನು ಯಾವೆಲ್ಲ ಔಷಧ ಸುರಕ್ಷಿತವಲ್ಲ ಎಂಬುದು ಗೊತ್ತಾಗಬೇಕಿದೆ.