ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳು

ಮೈಸೂರು: ಕೊಟ್ಟ ಸಾಲ ಮರಳಿ ಕೇಳಿದ್ದಕ್ಕೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಹುಣಸೂರು ತಾಲ್ಲೂಕಿನ ಬನ್ನಿಕುಪ್ಪೆಯಲ್ಲಿ ನಡೆದಿದೆ.

ಮೂಡಲಕೊಪ್ಪಲು ನಿವಾಸಿ ನಾಗೇಶ್ ಹಲ್ಲೆಗೊಳಗಾದವರು. ಜಯಣ್ಣ, ಸುದೀಪ್ ಹಾಗೂ ಲೋಕೇಶ್ ಎಂಬವರು ಹಲ್ಲೆ ಮಾಡಿದ್ದಾರೆ. ಆರೋಪಿಗಳು ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ನಾಗೇಶ್‍ರಿಂದ ಕಾಡನಕೊಪ್ಪಲಿನ ಜಯಣ್ಣ ಎಂಬಾತ 25,000 ರೂ. ಹಣ ಸಾಲ ಪಡೆದಿದ್ದ. ಬಳಿಕ 15 ಸಾವಿರ ಹಣ ವಾಪಸ್ ಕೊಟ್ಟು 10,000 ರೂ. ಬಾಕಿ ಉಳಿಸಿಕೊಂಡಿದ್ದ. ಗ್ರಾಮದ ಬಾರ್‌ ಬಳಿ ಜಯಣ್ಣ ಸಿಕ್ಕಾಗ ಬಾಕಿ ಹಣವನ್ನು ನಾಗೇಶ್ ಕೇಳಿದ್ದಾರೆ. ಈ ವೇಳೆ ಜಯಣ್ಣ ಹಾಗೂ ಆತನ ಸ್ನೇಹಿತರು ಸೇರಿಕೊಂಡು ಹಲ್ಲೆ ನಡೆಸಿದ್ದಾರೆ.

ಈ ಸಂಬಂಧ ಗಾಯಾಳು ನಾಗೇಶ್ ಪುತ್ರ ಅಭಿಷೇಕ್ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಹಲ್ಲೆ ನಡೆಸಿದವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.