ಕ್ಷುಲ್ಲಕ ಕಾರಣಕ್ಕೆ ವಾಟರ್‌ಮ್ಯಾನ್‌ಗೆ ಚಾಕು ಇರಿದು ಹತ್ಯೆಗೈದ ರೌಡಿಶೀಟರ್‌

ಹಾಸನ: ಪಾನಮತ್ತನಾಗಿ ಬಂದ ರೌಡಿಶೀಟರ್‌ ವಾಟರ್‌ಮ್ಯಾನ್‌ಗೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದ ಘಟನೆ ಚೀಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗಣೇಶ್ (27) ಕೊಲೆಯಾದ ವ್ಯಕ್ತಿ ಎಂದು ತಿಳಿದು ಬಂದಿದೆ. ಚೀಕನಹಳ್ಳಿ ಗ್ರಾಮದಲ್ಲಿ ವಾಟರ್‌ಮ್ಯಾನ್ ಆಗಿದ್ದ ಗಣೇಶ್ ಶುಕ್ರವಾರ ರಾತ್ರಿ ಗ್ರಾಮದ ಆಟೋ ನಿಲ್ದಾಣದ ಬಳಿ ನಿಂತಿದ್ದ. ಈ ವೇಳೆ ಕಂಠ ಪೂರ್ತಿ ಕುಡಿದು ಸ್ಥಳಕ್ಕೆ ಬಂದಿದ್ದ ರೌಡಿಶೀಟರ್ ಮಧು ಕ್ಷುಲ್ಲಕ ಕಾರಣಕ್ಕೆ ಗಣೇಶ್ ಜೊತೆ ಜಗಳ ತೆಗೆದಿದ್ದಾನೆ. ಬಳಿಕ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದೆ. ಬಳಿಕ ಆರೋಪಿ ಚಾಕು ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ಗಣೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಬೆಂಗಳೂರಿನಲ್ಲಿ ವಾಸವಾಗಿದ್ದ ರೌಡಿಶೀಟರ್ ಮಧು ಗೌರಿ-ಗಣೇಶ ಹಬ್ಬಕ್ಕೆ ಗ್ರಾಮಕ್ಕೆ ಬಂದಿದ್ದ. ಹತ್ಯೆ ಬಳಿಕ ಆರೋಪಿ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೃತದೇಹವನ್ನು ಜಿಲ್ಲಾಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ. ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.