ನೀರಿನಲ್ಲಿ ಕೊಚ್ಚಿ ಹೋದ ಬೈಕ್‌ ಸವಾರ ಶವವಾಗಿ ಪತ್ತೆ

ಗದಗ: ಬೈಕ್ ಸವಾರ ಹಳ್ಳದ ಸೇತುವೆ ರಸ್ತೆ ದಾಟುವ ವೇಳೆ ನೀರಿನಲ್ಲಿ ಕೊಚ್ಚಿಹೋದವನು ಶವವಾಗಿ ಪತ್ತೆವಾಗಿ ಪತ್ತೆಯಾಗಿದ್ದಾನೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ನಾಗರಹಳ್ಳಿ ಮತ್ತು ಬೆಣ್ಣೆಹಳ್ಳಿ ಮಾರ್ಗಮಧ್ಯೆ ಘಟನೆ ನಡೆದಿದೆ. ರವಿಕುಮಾರ ಸುತಾರಿ (32) ಮೃತ ದುರ್ದೈವಿ. ವಿಜಯನಗರ ಜಿಲ್ಲೆ ಏಣಗಿ‌ ಬಸಾಪುರ ಗ್ರಾಮದ ನಿವಾಸಿ ರವಿಕುಮಾರ ಜತೆಗೆ ಮತ್ತೊಬ್ಬ ಸ್ನೇಹಿತ ಬೈಕ್‌ ಮೂಲಕ ಸೇತುವೆ ದಾಟುತ್ತಿದ್ದರು.

ಈ ವೇಳೆ ಕಾಲು ‌ಜಾರಿದ್ದು ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿದ್ದ ರವಿಕುಮಾರನನ್ನು ನೀರಿನಿಂದ‌ ಮೇಲೆತ್ತಲು ಮತ್ತೋರ್ವ ಸವಾರನಿಂದ ಪ್ರಯತ್ನ ಮಾಡಿದ್ದಾನೆ. ನೀರಿನ ರಭಸಕ್ಕೆ‌ ಮೇಲೆ ಬರಲಾಗದೇ ರವಿಕುಮಾರ ಕೊಚ್ಚಿ ಹೋಗಿದ್ದಾನೆ. ತಡರಾತ್ರಿ ಸ್ಥಳಕ್ಕೆ ಪೊಲೀಸರು‌ ಹಾಗೂ ಅಗ್ನಿಶಾಮಕ‌ ಸಿಬ್ಬಂದಿ ದೌಡಾಯಿಸಿದ್ದು, ಮೃತದೇಹವನ್ನು ಪತ್ತೆ ಮಾಡಿದ್ದಾರೆ.

ಸೇತುವೆ ಕಿರಿದಾದದ ಹಿನ್ನೆಲೆ ಹಲವು ವರ್ಷಗಳಿಂದ ಇಂತಹ ಅವಘಡ ಸಂಭವಿಸುತ್ತಿದೆ ಎಂದು ಗ್ರಾಮಸ್ಥರು ಕಿಡಿಕಾಡಿದ್ದಾರೆ. ನಾಗರಹಳ್ಳಿ‌ ಹಾಗೂ ಬೆಣ್ಣಿಹಳ್ಳಿ‌ ಗ್ರಾಮಕ್ಕೆ‌ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದ್ದು, ಹಳ್ಳಕ್ಕಿಂತ ಸೇತುವೆ ಕೆಳಮಟ್ಟದಲ್ಲಿರುವ ಕಾರಣ ಸಾವು-ನೋವು ಸಂಭವಿಸುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಅರಭಾವಿ ಚಳ್ಳಕೇರೆ‌ ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸಿದರು. ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ‌ ಘಟನೆ ನಡೆದಿದೆ.