ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಬೃಹತ್‌ ಮರ; ಆಸ್ಪತ್ರೆ ಪಾಲಾದ ಅಣ್ಣ-ತಂಗಿ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ವಾರಕ್ಕೊಂದು ಮರ ಬೀಳುವ ಪ್ರಕರಣಗಳು ವರದಿ ಆಗುತ್ತಲೇ ಇದೆ. ಸದ್ಯ ನಗರದ ಚಿನ್ನಸ್ವಾಮಿ ಸ್ಟೇಡಿಯಂ ಸಮೀಪ ಬೃಹತ್‌ ಗಾತ್ರದ ಮರವೊಂದು ಬುಡ ಸಮೇತ ಬಿದ್ದಿದೆ. ಚಲಿಸುತ್ತಿದ್ದ ಕಾರುಗಳ ಮೇಲೆ ಮರ ಬಿದ್ದು, ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಮೂರು ಕಾರುಗಳಿಗೆ ಹಾನಿಯಾಗಿದೆ.

ಇಬ್ಬರಿಗೆ ಗಾಯಗಳಾಗಿದ್ದು, ಸ್ಥಳೀಯರು ಕೂಡಲೇ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಬಿಬಿಎಂಪಿ, ಅರಣ್ಯ ಸಿಬ್ಬಂದಿ ಮರ ತೆರವು ಮಾಡಿದ್ದಾರೆ. ಮರ ಬಿದ್ದ ಪರಿಣಾಮ ನಕ್ಕುಲ್ ಹಾಗೂ ನತಾಶಾ ಎಂಬುವವರಿಗೆ ಗಾಯವಾಗಿದೆ. ಅಣ್ಣ ತಂಗಿ ಇಬ್ಬರು ಕಾರಿನಲ್ಲಿ ಹೋಗುತ್ತಿದ್ದಾಗ ಏಕಾಏಕಿ ಮರ ಬಿದ್ದಿದೆ. ಓರ್ವ ಗಾಯಾಳಿಗೆ ತಲೆ ಹಾಗೂ ಎದೆಯ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಎದೆಯ ಮೂಳೆ ಮುರಿದಿರುವ ಸಾಧ್ಯತೆ ಇದೆ. ಮತ್ತೊಬ್ಬ ಗಾಯಾಳುವಿನ ಕುತ್ತಿಗೆ ಭಾಗಕ್ಕೆ ಗಂಭೀರ ಗಾಯವಾಗಿದೆ. ಇಬ್ಬರಿಗೂ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.