ಈ ಕಾಲದಲ್ಲಿ ಇಂತವರು ಇದ್ದಾರೆ: ಕಳಪೆ ಕಾಮಗಾರಿಗೆ ಬೇಸತ್ತು ಪಂಚಾಯ್ತಿ ಸದಸ್ಯತ್ವಕ್ಕೆ ರಾಜೀನಾಮೆ

ಬೀದರ್​, ಆ.29: ಕಳಪೆ ಕಾಮಗಾರಿ ವಿರುದ್ಧ ಸಿಡಿದೆದ್ದು ಗ್ರಾ.ಪಂಚಾಯತಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ ಅಪರೂಪದ ಘಟನೆಯೊಂದು ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನ ಮುಧೋಳ ಪಂಚಾಯತಿಯಲ್ಲಿ ನಡೆದಿದೆ. ಮುಧೋಳ ‌ಗ್ರಾಮದ ವಾರ್ಡ್ ನಂ.1ರ ಸದಸ್ಯ ಸೋಮನಾಥ ಸ್ವಾಮಿ ಎಂಬುವವರು ಮುಧೋಳ ಗ್ರಾಮದಲ್ಲಿ ನಡೆಯುತ್ತಿರುವ ಕಳಪೆ ಗುಣಮಟ್ಟದ ಜೆಜೆಎಂ ಕಾಮಗಾರಿ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಸ್ಪಂದಿಸದ ಹಿನ್ನೆಲೆ ಮನನೊಂದು ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

3 ಕೋಟಿ 21 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಜೆಜೆಎಂ ಕಾಮಗಾರಿ ನಡೆಯುತ್ತಿದ್ದು, ಕಳಪೆ ಕಾಮಗಾರಿ ‌ಮಾಡುತ್ತಿರುವುದರಿಂದ ಕೆಲವು ‌ವಾರ್ಡ್​ಗಳಿಗೆ‌ ನೀರು ಬರುತ್ತಿಲ್ಲ. ಈ ಬಗ್ಗೆ ಎಲ್ಲಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸದಸ್ಯನ ಮನವಿಗೆ ಸ್ಪಂದನೆ ಸಿಗದ ಹಿನ್ನಲೆ ಗ್ರಾಮ ಪಂಚಾಯತಿ ‌ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಡುವುದರ ಮೂಲಕ ವ್ಯವಸ್ಥೆಯ ವಿರುದ್ಧ ಅಸಮಾಧಾನ ‌ವ್ಯಕ್ತಪಡಿಸಿದ್ದಾರೆ.

ಇನ್ನು ಈಗಿನ ದಿನಮಾನದಲ್ಲಿ ಅಧಿಕಾರಕ್ಕೊಸ್ಕರ ಕಿತ್ತಾಟ ನಡೆಯುತ್ತಲೇ ಇರುತ್ತದೆ. ಇಂತಹವರ ಮಧ್ಯೆ ಸದಸ್ಯ ಸೋಮನಾಥ ಸ್ವಾಮಿ ಅವರು ಕಳಪೆ ಕಾಮಗಾರಿ ಬಗ್ಗೆ ಅಧಿಕಾರಿಗಳು ಸ್ಪಂಧಿಸದೆ ಇರುವುದಕ್ಕೆ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಇದಷ್ಟೇ ಅಲ್ಲ, ಈ ಹಿಂದೆ ರಾಜ್ಯದ ಶಾಸಕರಿಗೆ, ಸಚಿವರಿಗೆ ಸಂಬಳ ಹೆಚ್ಚಳ ವಿಚಾರಕ್ಕೆ ಸಂಬಂಧಿಸಿ ವಿಜಯಪುರದಲ್ಲಿ MLC ಸುನೀಲ್ ಗೌಡ ಅವರು ಹೆಚ್ಚುವರಿ ಸಂಬಳ ನಿರಾಕರಿಸಿದ್ದರು.