ಕರ್ತವ್ಯದಲ್ಲಿದ್ದಾಗ ಭಾರೀ ಹಿಮಪಾತ – ಬೀದರ್ ಯೋಧ ಹುತಾತ್ಮ

ಬೀದರ್: ಭಾರೀ ಹಿಮಪಾತ ಸಂಭವಿಸಿ ಆರೋಗ್ಯದಲ್ಲಿ ಏರುಪೇರಾಗಿ ಹೃದಯಾಘಾತದಿಂದ ಬೀದರ್‌ನ ಯೋಧರೊಬ್ಬರು ಸಿಕ್ಕಿಂನಲ್ಲಿ ಹುತಾತ್ಮರಾಗಿದ್ದಾರೆ.

20 ವರ್ಷಗಳಿಂದ ಸೈನಿಕರಾಗಿ ಸೇವೆ ಸಲ್ಲಿಸುತ್ತಿದ್ದ ಬೀದರ್ ಜಿಲ್ಲೆಯ ಕಮಲಾನಗರ ತಾಲೂಕಿನ ಕೊರಿಯಾಳ ಗ್ರಾಮದ ಯೋಧ ಅನಿಲ್ ಕುಮಾರ್ ಉಮಾಕಾಂತರಾವ್ ನವಾಡೆ (40) ಕರ್ತವ್ಯದಲ್ಲಿರುವಾಗಲೇ ಮೃತಪಟ್ಟಿದ್ದಾರೆ. 

2004 ರಲ್ಲಿ ಭಾರತೀಯ ಸೇನೆ ಸೇರಿದ್ದ ಅನಿಲ್‌ ಕುಮಾರ್ ಜಮ್ಮು ಕಾಶ್ಮೀರ, ರಾಜಸ್ಥಾನ, ನಾಗಲಾಂಡ್, ಶಿಮ್ಲಾ, ಮಣಿಪುರ ಹಾಗೂ ಸಿಕ್ಕಿಂ ಸೇರಿದಂತೆ ಹಲವು ರಾಜ್ಯದ ಗಡಿಯಲ್ಲಿ ಕರ್ತವ್ಯ ಸಲ್ಲಿಸಿದ್ದಾರೆ. ಸಿಕ್ಕಿಂ ರಾಜ್ಯದಲ್ಲಿ ಹವಾಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅನಿಲ್ ಕುಮಾರ್ ಪಾರ್ಥಿವ ಶರೀರ ಭಾನುವಾರ ಸಂಜೆ ಸ್ವಗ್ರಾಮಕ್ಕೆ ಬರುವ ಸಾಧ್ಯತೆಯಿದೆ.