ಏಕಾಏಕಿ ಧರೆಗುರುಳಿದ ಮರ; ಚಾಲುಕ್ಯ ವೃತ್ತದಿಂದ ಮೈಸೂರ್ ಬ್ಯಾಂಕ್ ರಸ್ತೆ ಬಂದ್

ಬೆಂಗಳೂರು: ಚಾಲುಕ್ಯ ವೃತ್ತದಲ್ಲಿ ಮರವೊಂದು ಧರೆಗುರುಳಿದೆ. ಮರ ಬಿದ್ದ ಹಿನ್ನೆಲೆಯಲ್ಲಿ ಚಾಲುಕ್ಯ ವೃತ್ತದಿಂದ ಮೈಸೂರ್ ಬ್ಯಾಂಕ್ ಕಡೆಯ ರಸ್ತೆ ಬಂದ್ ಆಗಿದೆ. ಜನರು ಓಡಾಟ ವಿಲ್ಲದ ಕಾರಣ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ದಿನನಿತ್ಯ ಹೆಚ್ಚಿನ ವಾಹನ ಸಂಚಾರ ಕಂಡುಬರುವ ರಸ್ತೆ ಇದಾಗಿದೆ.

ಶನಿವಾರ ಬೆಳಗ್ಗೆ 8:40ರ ಸುಮಾರಿಗೆ ಬೃಹತ್ ಮರ ನೆಲಕ್ಕೆ ಉರುಳಿದೆ. ಮಸೀದಿ ಮುಂಭಾಗವೇ ಮರ ಬಿದ್ದಿದ್ದು, ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಧಾವಿಸಿದ್ದರು. ಬಿಬಿಎಂಪಿ ಸಿಬ್ಬಂದಿ ಸ್ಥಳಕ್ಕೆ ಬಾರದ ಹಿನ್ನೆಲೆಯಲ್ಲಿ ಟ್ರಾಫಿಕ್ ಪೊಲೀಸರೇ ಮರ ತೆರವು ಕಾರ್ಯಾಚರಣೆ ನಡೆಸಿದರು.