ಓದಿಲ್ಲ ಎಂದು ಬೈದದ್ದಕ್ಕೆ ಮನೆ ಬಿಟ್ಟು ಹೋದ ಬಾಲಕ

ಬೆಂಗಳೂರು: ಸರಿಯಾಗಿ ಗಮನ ಕೊಟ್ಟು ಓದುತ್ತಿಲ್ಲ, ಹೋಮ್‌ ವರ್ಕ್‌ ಮಾಡುತ್ತಿಲ್ಲ ಎಂದು ತಾಯಿ ಬೈದದ್ದಕ್ಕೆ ಮಗ ಮುನಿಸಿಕೊಂಡು ಮನೆ ಬಿಟ್ಟು ಹೋದ ಪ್ರಕರಣ ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿ ನಡೆದಿದೆ.

ನಂದಿನಿ ಲೇಔಟ್‌ ಜೈಮಾರುತಿ ನಗರದಲ್ಲಿ ಘಟನೆ ನಡೆದಿದ್ದು, 8 ವರ್ಷದ ಮಿಥುನ್ ಮನೆ ಬಿಟ್ಟು ಹೋಗಿರುವ ಬಾಲಕ. ಈತ ದೇವರಾಜ್ ಹಾಗೂ ಜಯಲಕ್ಷ್ಮಿ ಎಂಬ ದಂಪತಿಯ ಮಗ. ಮಿಥುನ್‌ ಹೋಮ್ ವರ್ಕ್, ಕ್ಲಾಸ್ ವರ್ಕ್ ಕಂಪ್ಲೀಟ್ ಮಾಡಿಲ್ಲ ಎಂದು ಈತನ ಸ್ಕೂಲ್ ಡೈರಿಯಲ್ಲಿ ಮಿಸ್‌ ಬರೆದು ಕಳಿಸಿದ್ದರು.

ಮಿಥುನ್‌ ತಾಯಿ ಇದರಿಂದ ಅಸಮಾಧಾನಗೊಂಡು, ರಾತ್ರಿ ಎಲ್ಲ ಹೋಮ್‌ ವರ್ಕ್‌ ಬರೆದು ಮುಗಿಸಿ ಮಲಗಬೇಕು ಎಂದು ಕಟ್ಟುನಿಟ್ಟು ಮಾಡಿದ್ದರು. ಇದರಿಂದ ನೊಂದು ಮಿಥುನ್‌ ಮನೆ ಬಿಟ್ಟು ಹೋಗಿರುವ ಸಾಧ್ಯತೆ ಇದೆ. ನಿನ್ನೆ ಸಂಜೆ 6 ಗಂಟೆಗೆ ಈತ ಮನೆ ಬಿಟ್ಟು ತೆರಳಿದ್ದಾನೆ. ಸ್ಕೂಲ್‌ನಿಂದ ಬಂದ ಕೂಡಲೇ ಬಟ್ಟೆ ಹಾಗೂ ಮೊಬೈಲ್ ತೆಗೆದುಕೊಂಡು ಹೊರಟುಹೋಗಿದ್ದಾನೆ. ಬಾಲಕನಿಗಾಗಿ ಎಲ್ಲಾ ಕಡೆ ಹುಡುಕಿದ ಪೋಷಕರು ಬಳಿಕ ನಂದಿನಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.