ಹಿಂದೂ ಮನೆಗಳಿಗೆ ತೆರಳಿ ಮತಾಂತರಕ್ಕೆ ಯತ್ನ; ಇಬ್ಬರು ಮಹಿಳೆಯರನ್ನ ಪೊಲೀಸರಿಗೆ ಒಪ್ಪಿಸಿದ ಜನ

ಯಾದಗಿರಿ, ಆ.20: ಹಿಂದೂ ಮನೆಗೆ ತೆರಳಿ ಬಲವಂತವಾಗಿ ಕ್ರೈಸ್ತ ಧರ್ಮದ ಕರಪತ್ರ ಹಂಚಿ ಮತಾಂತರಕ್ಕೆ ಯತ್ನಿಸಿದ ಆರೋಪ ಯಾದಗಿರಿ ನಗರದ ಲಕ್ಷ್ಮೀ ಬಡಾವಣೆಯಲ್ಲಿ ಕೇಳಿಬಂದಿದೆ. ಕೂಡಲೇ ಎಚ್ಚೆತ್ತ ಜನ, ಮತಾಂತರಕ್ಕೆ ಮುಂದಾದ ಇಬ್ಬರು ಕ್ರಿಶ್ಚಿಯನ್ ಮಹಿಳೆಯರನ್ನು ಪೋಲಿಸರಿಗೆ ಒಪ್ಪಿಸಿದ್ದಾರೆ. ಬೆಂಗಳೂರು ಮೂಲದ ಮಹಿಳೆಯರಾದ ರೇಚಲ್ ರಾಬರ್ಟ್ ಹಾಗೂ ಕರುಣಾ ಅವರು, ಮತಾಂತರಕ್ಕೆ ಮುಂದಾಗಿದ್ದರು. ಇನ್ನೀಬ್ಬರು ಮಹಿಳೆಯರು ಪರಾರಿಯಾಗಿದ್ದಾರೆ.

ಹಿಂದೂ ದೇವರ ಬಗ್ಗೆ ಕೇವಲವಾಗಿ ಮಾತನಾಡಿರೋ ಮಹಿಳೆಯರು

ಈ ಇಬ್ಬರು ಕ್ರಿಶ್ಚಿಯನ್ ಮಹಿಳೆಯರು ಹಿಂದು ಮನೆಗಳಿಗೆ ತೆರಳಿ ಹಿಂದೂ ದೇವರ ಬಗ್ಗೆ ಕೇವಲವಾಗಿ ಮಾತನಾಡಿದ್ದಾರಂತೆ. ‘ ಭೂಮಿ ಮೇಲೆ ದೇವರು ಅಂತ ಇದ್ದರೆ ಯೇಸುಕ್ರಿಸ್ತ ಒಬ್ಬನೆ. ನಿಮ್ಮ ದೇವರುಗಳು ನಿಮಗೆ ರಕ್ಷಣೆ ನೀಡುವುದಿಲ್ಲ. ನಿಮ್ಮ ಹಿಂದೂ ಧರ್ಮ ತ್ಯಜಿಸಿ, ಕ್ರೈಸ್ತ ಧರ್ಮಕ್ಕೆ ಬನ್ನಿ. ನಿಜವಾದ ದೇವರು ಯೇಸುಕ್ರಿಸ್ತನನ್ನು ಅನುಸರಿಸಲು ಹಿಂದು ಧರ್ಮ ತ್ಯಜಿಸಿ ಮತಾಂತರಗೊಳ್ಳಿ. ಹೀಗೆ ನಮ್ಮ ಮನೆಗೆ ಬಂದು ನಮ್ಮನ್ನು ಬಲವಂತವಾಗಿ ಮತಾಂತರ ಮಾಡುವುದಕ್ಕೆ ಪ್ರಚೋದನೆ ಮಾಡಿದ್ದಾರೆ. ಇಂತಹ ಕೃತ್ಯ ಎಸಗಿದ ಇಬ್ಬರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ ಎಂದು ಯಾದಗಿರಿ ನಗರ ಠಾಣೆಗೆ ಜನರು ದೂರು ನೀಡಿದ್ದಾರೆ.

ಕಳೆದ ಜುಲೈ 22 ರಂದು ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಬಳಿ ಮಂತ್ರಾಲಯಕ್ಕೆ ಪಾದಯಾತ್ರೆ ತೆರಳುತ್ತಿದ್ದ ಭಕ್ತರನ್ನು ಮತಾಂತರಕ್ಕೆ ಯತ್ನಿಸಿದ ಘಟನೆ ಬೆಳಕಿಗೆ ಬಂದಿತ್ತು. ಈ ಕುರಿತು ತೆಕ್ಕಲಕೋಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಓರ್ವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರು. ಇದೀಗ ಯಾದಗಿರಿಯಲ್ಲಿ ಇಂತಹುದೇ ಘಟನೆ ಬೆಳಕಿಗೆ ಬಂದಿದ್ದು, ಇಬ್ಬರು ಮಹಿಳೆಯರನ್ನು ವಶಕ್ಕೆ ಪಡೆಯಲಾಗಿದೆ.