ಹುಬ್ಬಳ್ಳಿ ಬಳಿಕ ಮಂಗಳೂರಿನಲ್ಲಿ ಪ್ರೇಮ ವೈಫಲ್ಯಕ್ಕೆ ವಿದ್ಯಾರ್ಥಿನಿಗೆ ಕತ್ತರಿಯಿಂದ ಇರಿದ ಪಾಗಲ್‌ ಪ್ರೇಮಿ

ಮಂಗಳೂರು: ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣ ಮರೆಯಾಗುವ ಮುನ್ನವೇ ಮಂಗಳೂರಿನಲ್ಲಿ ಮತ್ತೊಬ್ಬ ಯುವಕ ಪ್ರೇಮ ವೈಫಲ್ಯಕ್ಕೆ ವಿದ್ಯಾರ್ಥಿನಿಗೆ ಕತ್ತರಿಯಿಂದ ಇರಿದಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆಯಲ್ಲಿ ಘಟನೆ ನಡೆದಿದೆ.

ನಿನ್ನೆ ಸೋಮವಾರ ಮುಂಜಾನೆ ಮೂಡಬಿದರೆಯ ಆಳ್ವಾಸ್ ಕಾಲೇಜಿನಲ್ಲಿ ಘಟನೆ ನಡೆದಿದೆ. ತುಮಕೂರು ಮೂಲದ ಮಂಜುನಾಥ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ತುಮಕೂರು ಮೂಲದ ಯುವತಿ ಆಳ್ವಾಸ್‌ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದಳು.

ಈ ಮಂಜುನಾಥ್ ಹಾಗು ಹಲ್ಲೆಗೊಳಗಾದ ಯುವತಿ ಪಿಯುಸಿ ತನಕ ಜತೆಯಲ್ಲೇ ವಿದ್ಯಾಭ್ಯಾಸ ಮಾಡಿದ್ದರು. ಬಳಿಕ ಮಂಜುನಾಥ್‌ ಕಾಲೇಜು ತೊರೆದು ಮನೆಗೆ ತೆರಳಿದ್ದ. ಯುವತಿ ಮೆಸೇಜ್‌ಗೆ ಉತ್ತರಿಸುತ್ತಿಲ್ಲ ಎಂದು ಕೋಪಗೊಂಡ ಮಂಜುನಾಥ್‌ ತುಮಕೂರಿನಿಂದ ಮೂಡಬಿದರೆಗೆ ಬಂದಿದ್ದ.

ಆದರೆ ಯುವತಿ ಮಂಜುನಾಥ್‌ನನ್ನು ಭೇಟಿ ಮಾಡಲು ನಿರಾಕರಿಸಿದ್ದಳು. ಇದರಿಂದ ಮತ್ತಷ್ಟು ಕೆರಳಿದ ಮಂಜುನಾಥ್‌ ಕಾಲೇಜಿಗೆ ನುಗ್ಗಿ ತರಗತಿಯಲ್ಲಿದ್ದ ಯುವತಿಗೆ ಕತ್ತರಿಯಿಂದ ಇರಿದಿದ್ದಾನೆ. ಘಟನೆಯಲ್ಲಿ ಯುವತಿಯ ಮುಖಕ್ಕೆ ಗಾಯವಾಗಿದೆ.

ಕೂಡಲೇ ಇತರೆ ವಿದ್ಯಾರ್ಥಿಗಳು ಮಂಜುನಾಥ್‌ನನ್ನು ಹಿಡಿದುಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಗಂಭೀರವಾಗಿ ಗಾಯಗೊಂಡಿದ್ದ ಯುವತಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಂಜುನಾಥ್‌ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.