ವಿದ್ಯಾರ್ಥಿಗೆ ಹೃದಯಾಘಾತವಾದಾಗ ಬಸ್ಸೇ ಎಮರ್ಜೆನ್ಸಿ ವಾಹನವಾಯ್ತು!

ಮಂಗಳೂರು, ಜುಲೈ 31: ಚಲಿಸುತ್ತಿದ್ದ ಬಸ್​​ನಲ್ಲೇ ವಿದ್ಯಾರ್ಥಿಗೆ ಹೃದಯಾಘಾತವಾಗಿದ್ದು, ಬಸ್ ಚಾಲಕ ಹಾಗೂ ನಿರ್ವಾಹಕ ಸಮಯ ಪ್ರಜ್ಞೆ ಮೆರೆದು ಜೀವ ರಕ್ಷಿಸಿದ ಅಪರೂಪದ ವಿದ್ಯಮಾನ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ಕೂಳೂರು ಮಾರ್ಗ 13ಎಫ್​ನಲ್ಲಿ ಎಂದಿನಂತೆ ಕೃಷ್ಣ ಪ್ರಸಾದ್ ಬಸ್ ಪ್ರಯಾಣಿಕರೊಂದಿಗೆ ತೆರಳುತ್ತಿದ್ದಾಗ ಕಾಲೇಜು ವಿದ್ಯಾರ್ಥಿಯೊಬ್ಬರಲ್ಲಿ ಹಠಾತ್ ಹೃದಯಾಘಾತದ ಲಕ್ಷಣಗಳು ಕಾಣಿಸಿವೆ.

ತಕ್ಷಣವೇ ಬಸ್ ಚಾಲಕ ಗಜೇಂದ್ರ ಕುಂದರ್ ಮತ್ತು ಕಂಡಕ್ಟರ್ ಮಹೇಶ್ ಪೂಜಾರಿ ಬಸ್ ಅನ್ನು ತುರ್ತು ವಾಹನವನ್ನಾಗಿ ಪರಿವರ್ತಿಸಿದರು. ಬಸ್​​ನಲ್ಲಿದ್ದ ಎಮರ್ಜೆನ್ಸಿ ಸೈರನ್ ಚಾಲೂ ಮಾಡಿದ ಅವರು ಕೇವಲ 6 ನಿಮಿಷಗಳಲ್ಲಿ 6 ಕಿಲೋಮೀಟರ್ ದೂರ ಕ್ರಮಿಸಿ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಗೆ ತಲುಪಿದರು.

ಸಂದರ್ಭವನ್ನು ಅರಿತುಕೊಂಡು ತಕ್ಷಣವೇ ಬಸ್ಸನ್ನು ಆಸ್ಪತ್ರೆಯತ್ತ ಚಲಾಯಿಸಿದ ಕಾರಣ ವಿದ್ಯಾರ್ಥಿಯನ್ನು ರಕ್ಷಿಸಲು ಸಾಧ್ಯವಾಯಿತು. ಪರಿಣಾಮವಾಗಿ ವಿದ್ಯಾರ್ಥಿಯ ಜೀವ ಉಳಿಯಿತು. ಚಾಲಕ ಮತ್ತು ನಿರ್ವಾಹಕನ ಸಮಯ ಪ್ರಜ್ಞೆಗೆ ಮತ್ತು ಮಾನವೀಯತೆಗೆ ಇದೀಗ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಕರಾವಳಿ ಭಾಗದ ಬಸ್ ಚಾಲಕರು ಮತ್ತು ಕಂಡಕ್ಟರ್‌ಗಳು ಮಾನವೀಯತೆ ಮತ್ತು ಸಹಾನುಭೂತಿಯ ಸಾಕಾರರು ಎಂಬುದನ್ನು ಈ ಮೂಲಕ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ ಎಂದು ಪ್ರಯಾಣಿಕರು ಹರ್ಷ ವ್ಯಕ್ತಪಡಿಸಿದ್ದಾರೆ.