ವಿದ್ಯಾರ್ಥಿಗಳಿಗೆ ಕನ್ನಡ ವ್ಯಾಕರಣ ಪಾಠ ಮಾಡಿ, ಮೊರಾರ್ಜಿ ವಸತಿ ಶಾಲೆಯಲ್ಲಿ ಊಟ ಸವಿದ ಸಿಎಂ

ಹಲವು ರಾಜಕೀಯ ಆರೋಪಗಳ ಮಧ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿದ್ಯಾರ್ಥಿಗಳೊಂದಿಗೆ ಕಾಲ ಕಳೆದಿದ್ದಾರೆ. ಹೌದು.. ಇಂದು (ಜುಲೈ 05) ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ್ದಾರೆ.

ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ, ವಿದ್ಯಾರ್ಥಿಗಳಿಗೆ ಕನ್ನಡ ವ್ಯಾಕರಣ ಪಾಠ ಮಾಡಿದರು. ಸಂಧಿಗಳ ಬಗ್ಗೆ ವಿದ್ಯಾರ್ಥಿಗಳನ್ನು ಪ್ರಶ್ನಿಸಿ ಬಳಿಕ ತಾವೇ ಉತ್ತರಿಸಿದರು.

ಸಂಧಿ ಎಂದರೇನು, ಸಂಧಿಗಳಲ್ಲಿ ಎಷ್ಟು ವಿಧಗಳಿವೆ? ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ ಎಂದು ಸಿದ್ದರಾಮಯ್ಯ ಅವರು ವಿದ್ಯಾರ್ಥಿಗಳನ್ನು ಪ್ರಶ್ನಿಸಿದರು.

ಪ್ರವರ್ಗ, ಅಲ್ಪ ಪ್ರಾಣ-ಮಹಾ ಪ್ರಾಣದ ಬಗ್ಗೆ ಮಕ್ಕಳಿಗೆ ಪಾಠ ಮಾಡಿದರು. ಅಲ್ಲದೇ ಸ್ವರ-ದೀರ್ಘ ಸ್ವರದ ಬಗ್ಗೆಯೂ ಮಕ್ಕಳಿಗೆ ಸಿಎಂ ಪಾಠ ಮಾಡಿದ್ದು, ವ್ಯಂಜನಾಕ್ಷರ ಅಂದರೇನು, ವರ್ಗೀಯ-ಅವರ್ಗೀಯ ವ್ಯಂಜಗಳಿವೆ ಎಂದರು.

ಅಲ್ಪ ಪ್ರಾಣಕ್ಕೆ ಉದಾಹರಣೆ ಹೇಳಿ ಎಂದ ಸಿಎಂ ಕೇಳಿದ ಪ್ರಶ್ನಿಗೆ ಮಕ್ಕಳು ಸಹ ಉತ್ತರಿಸಿದರು. ಆದ್ರೆ, ಉತ್ತರ ಅಸ್ಪಷ್ಟವಾಗಿದ್ದರಿಂದ ಕೊನೆಗೆ ಸಿಎಂ, ವಿದ್ಯಾರ್ಥಿಗಳ ಹೇಳಿದ ಉತ್ತರವನ್ನು ತಿದ್ದಿದರು.

ಇದೇ ವೇಳೆ ಕರ್ನಾಟಕದಲ್ಲಿ ಮೊರಾರ್ಜಿ ದೇಸಾಯಿ ಶಾಲೆ ಆರಂಭಿಸಿದ್ದು ಯಾರು ಎಂದು ಪ್ರಶ್ನಿಸಿದರು. ಇದಕ್ಕೆ ವಿದ್ಯಾರ್ಥಿಗಳು ನೀವೇ ಎಂದು ಉತ್ತರಿಸಿದರು. ಬಳಿಕ ಸಿಎಂ 1994-95ರಲ್ಲಿ ಮೊರಾರ್ಜಿ ದೇಸಾಯಿ ಆರಂಭಿಸಿದ್ದಾಗಿ ವಿದ್ಯಾರ್ಥಿಗಳಿಗೆ ವಿವರಿಸಿದರು. ಇದಕ್ಕೆ ಮಕ್ಕಳು ಚಪ್ಪಾಳೆ ತಟ್ಟಿ ಖುಷಿಪಟ್ಟರು.

ಅಲ್ಲದೇ ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಕ್ಕಳಿಗೆ ಬಸವಣ್ಣನವರ ಮಹತ್ವ ತಿಳಿಸಿದ್ದು, ಮನುಷ್ಯರ ನಡುವಿನ ತಾರತಮ್ಯ, ಜಾತಿ ವ್ಯವಸ್ಥೆ ವಿರೋಧಿಸಿದ್ದರು. ಬಸವಣ್ಣ 12ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿ ನಡೆಸಿದ್ದರು ಎಂದು ಪಾಠ ಮಾಡಿದರು.

ನಂತರ ಕೊನೆದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊರಾರ್ಜಿ ದೇಸಾಯಿ ಶಾಲೆ ವಿದ್ಯಾರ್ಥಿಗಳ ಜೊತೆ ಗ್ರೂಪ್ ಫೋಟೋ ತೆಗೆಸಿಕೊಂಡರು. ಬಳಿಕ ಮಕ್ಕಳೊಂದಿಗೆ ಕೂತು ವಸತಿ ಶಾಲೆಯ ಊಟ ಸವಿದರು.

ಮಕ್ಕಳೊಂದಿಗೆ ಸಿಎಂ ಸಿದ್ದರಾಮಯ್ಯ ರಾಗಿ ಮುದ್ದೆ, ಅನ್ನ ಸಾಂಬರ್, ಹಪ್ಪಳ ಊಟ ಮೈಸೂರು ಪಾಕ್ ಸವಿದರು. ಅಲ್ಲದೇ ಊಟ ಎಲ್ಲಾ ಚೆನ್ನಾಗಿ ಕೊಡುತ್ತಾರಾ ಎಂದು ವಿದ್ಯಾರ್ಥಿಗಳ ಬಳಿ ವಿಚಾರಿಸಿದರು.