ರಾಡ್​ನಿಂದ ಹೊಡೆದು 17 ವರ್ಷದ ಯುವಕನ ಹತ್ಯೆ; ಕೊಲೆ ಹಿಂದೆ ಪ್ರೀತಿ, ಗಾಂಜಾ ಕರಿನೆರಳು

ಬೆಂಗಳೂರು, ಜೂನ್.25: 17 ವರ್ಷದ ಮಂಜುನಾಥ್ ಎಂಬ ಯುವಕನ ಭೀಕರ ಹತ್ಯೆ ನಡೆದಿದೆ. ಅನೇಕ ವರ್ಷಗಳ ಹಿಂದೆ ಅಪ್ಪ ಅಮ್ಮನನ್ನ ಕಳ್ಕೊಂಡು ಅಬ್ಬಿಗೆರೆಯಲ್ಲಿ ಚಿಕ್ಕಪ್ಪನ ಆಶ್ರಯದಲ್ಲಿದ್ದ ಮಂಜುನಾಥ್, ಈ ವರ್ಷವಷ್ಟೇ SSLC ಪರೀಕ್ಷೆ ಬರೆದು ಫೇಲ್ ಆಗಿದ್ದ. ಆದರೆ ಮೊನ್ನೆ ರಾತ್ರಿ ಮನೆಯಿಂದ ಹೊರ ಹೋಗಿದ್ದ ಮಂಜುನಾಥ್ ನನ್ನ ಭೀಕರವಾಗಿ ಕೊಲೆ ಮಾಡಲಾಗಿದ್ದು, ಹತ್ಯೆ ಮಾಡಿದ ಪಾಪಿಗಳು ಎಸ್ಕೇಪ್ ಆಗಿದ್ದಾರೆ.

ಎಸ್​ಎಸ್​ಎಲ್​ಸಿ ಫೇಲ್ ಆಗಿ ಮನೆಯಲ್ಲಿದ್ದ ಮಂಜುನಾಥ್ ನಿನ್ನೆ ಸಂಜೆ ಹೆಣವಾಗಿ ಪತ್ತೆಯಾಗಿದ್ದಾನೆ. ಸದ್ಯ ಮನೆಯವರು ಹೇಳೊ ಪ್ರಕಾರ ಮೊನ್ನೆ ರಾತ್ರಿ ಮಂಜುನಾಥ್ ಡ್ರಿಂಕ್ಸ್ ಮಾಡಿದ್ದಲ್ದೆ ಗಾಂಜಾ ಸೇವನೆ ಮಾಡಿ ಬೀದಿಯಲ್ಲಿ ನಿಂತಿದ್ದ. ಈ ವೇಳೆ ಪೋಷಕರು ಹೋಗಿ ಮಂಜುನಾಥ್ ನನ್ನ ಮನೆಗೆ ಕರ್ಕೊಂಡ ಬಂದಿದ್ರು. ಆದರೆ ಮಂಜುನಾಥ್ ಅರ್ಧರಾತ್ರಿಯಲ್ಲಿ ಮನೆಯಿಂದ ಹೊರಗೆ ಹೋಗಿದ್ದವನು ಮತ್ತೆ ಮನೆಗೆ ವಾಪಸ್ ಆಗ್ಲಿಲ್ಲ. ಇದರಿಂದ ಗಾಬರಿಯಾದ ಪೋಷಕರು ಮಗನನ್ನ ಹುಡುಕಲು ಶುರುಮಾಡಿದಾಗ ನಿನ್ನೆ ಸಂಜೆ YMRAC ಸರ್ಕಲ್ ಬಳಿಯ ಖಾಲಿ ಜಾಗದಲ್ಲಿ ಮಂಜುನಾಥ್ ಮೃತದೇಹ ಪತ್ತೆಯಾಗಿತ್ತು.

ಇನ್ನು ಮಂಜುನಾಥ್ ತಲೆ ಮೇಲೆ ದುಷ್ಕರ್ಮಿಗಳು ರಾಡ್ ನಿಂದ ಹೊಡೆದು ಹತ್ಯೆ ಮಾಡಿರೋದು ಗೊತ್ತಾಗಿದೆ. ಆದರೇ ಮಂಜುನಾಥ್ ಹುಡುಗಿಯೊಬ್ಬಳನ್ನ ಪ್ರೀತಿಸಿದ್ದು, ಇದೇ ವಿಚಾರಕ್ಕೆ ಕೊಲೆ ನಡೆದಿರೋ ಶಂಕೆ ವ್ಯಕ್ತವಾಗಿದೆ. ಇನ್ನೊಂದು ಕಡೆ ಗಾಂಜಾ ಮತ್ತಿನಲ್ಲಿ ಯುವಕರ ಮಧ್ಯೆ ಕಿರಿಕ್ ನಡೆದು ಮಂಜುನಾಥ್ ಕೊಲೆ ಆಗಿದೆ ಎನ್ನಲಾಗ್ತಿದೆ. ಸದ್ಯ ಕೊಲೆ ಸುತ್ತ ಈ ಅನುಮಾನಗಳು ಇದ್ದು, ಆರೋಪಿಗಳು‌ ಸಿಕ್ಕಿದ ಮೇಲೆ ಅಸಲಿ ವಿಚಾರ ಬಯಲಾಗಲಿದೆ.