ಅತ್ಯಾಚಾರ ಪ್ರತಿರೋಧಿಸಿದ ನವವಿವಾಹಿತ ಮಹಿಳೆಗೆ ಚಾಕು ಇರಿತ

ದಾವಣಗೆರೆ, ಜೂನ್​ 22: ಅತ್ಯಾಚಾರಕ್ಕೆ ಯತ್ನಿಸಿದಾಗ ಪ್ರತಿರೋಧ ಒಡ್ಡಿದ ಕಾರಣಕ್ಕೆ ನವವಿವಾಹಿತ ಮಹಿಳೆ ಕುತ್ತಿಗೆಗೆ ಚಾಕುವಿನಿಂದ ಇರಿದಿರುವ ಘಟನೆ ಜಗಳೂರು ತಾಲೂಕಿನ ಚಿಕ್ಕಮ್ಮನಹಟ್ಟಿ ಗ್ರಾಮದ ಗೊಲ್ಲರಹಟ್ಟಿಯಲ್ಲಿ ಘಟನೆ ನಡೆದಿದೆ. ಗಂಭೀರ ಗಾಯಗೊಂಡ ಮಹಿಳೆಯನ್ನು ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಟಪ್ಪ (30) ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ. ಆರೋಪಿ ಕಾಟಪ್ಪನನ್ನು ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದಾರೆ.

ಇತ್ತೀಚಿಗಷ್ಟೆ ಮಹಿಳೆಯ ಮದುವೆಯಾಗಿದೆ. ಮಹಿಳೆ ಕಳೆದ ಎರಡು ದಿನಗಳ ಹಿಂದೆಯಷ್ಟೆ ತವರು ಮನೆಗೆ ಬಂದಿದ್ದಾಳೆ. ಮಹಿಳೆಯ ಪಕ್ಕದ ಮನೆಯಲ್ಲೇ ಆರೋಪಿ ಕಾಟಪ್ಪ ವಾಸವಾಗಿದ್ದಾನೆ. ಶುಕ್ರವಾರ (ಜೂ.21) ರಾತ್ರಿ ಮಹಿಳೆಯ ಮನೆಗೆ ಏಕಾಏಕಿ ನುಗ್ಗಿದ ಆರೋಪಿ ಕಾಟಪ್ಪ ಆಕೆಯ ಮೇಲೆ ಅತ್ಯಾಚಾರವೆಸಗಲು ಯತ್ನಿಸಿದ್ದಾನೆ. ಇದಕ್ಕೆ ಮಹಿಳೆ ಪ್ರತಿರೋಧ ವ್ಯಕ್ತಪಡಿಸಿದ್ದು, ಕಿರುಚಾಡಿಳಿದ್ದಾಳೆ.

ಮಹಿಳೆಯ ಕಿರುಚಾಟ ಕೇಳಿ ಅಕ್ಕ-ಪಕ್ಕದ ಜನರು ಮಹಿಳೆ ಮನೆಯ ಕಡೆ ಬರಲು ಆರಂಭಿಸಿದ್ದಾರೆ. ಗ್ರಾಮಸ್ಥರನ್ನು ಕಂಡ ಆರೋಪಿ ಕಾಟಪ್ಪ ಚಾಕುವಿನಿಂದ ಮಹಿಳೆಯ ಕುತ್ತಿಗೆ ಸೇರಿದಂತೆ ಎರಡ್ಮೂರು ಕಡೆ ಇರಿದಿದ್ದಾನೆ. ಕೂಡಲೆ ಗ್ರಾಮಸ್ಥರನ್ನು ಆತನನ್ನು ಹಿಡಿದಿದ್ದಾರೆ. ಈ ವಿಚಾರ ಪೊಲೀಸರಿಗೆ ತಿಳಿದಿದ್ದು, ಸ್ಥಳಕ್ಕೆ ದೌಡಾಯಿಸಿದ್ದಾರೆ.

ಬಳಿಕ ಗ್ರಾಮಸ್ಥರು ಆರೋಪಿ ಕಾಟಪ್ಪನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನು ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ತಕ್ಷಣ ಜಗಳೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ, ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ಶಿಫ್ಟ್​​ ಮಾಡಲಾಗಿದೆ. ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆ ಮೇಲೆ ಕಾಟಪ್ಪ ಈ ಹಿಂದೆ ಎರಡು ಬಾರಿ ಅತ್ಯಾಚಾರಕ್ಕೆ ಯತ್ನಿಸಿದ್ದನು. ಮಹಿಳೆ ಮದುವೆ ಸಮಯದಲ್ಲೂ ಆರೋಪಿ ಕಾಟಪ್ಪ ಅತ್ಯಾಚಾರಕ್ಕೆ ಯತ್ನಿಸಿದ್ದನು ಎಂಬ ಮಾಹಿತಿ ದೊರೆತಿದೆ.