ಈಜಲು ಹೋಗಿದ್ದ ಬಾಲಕ ಮುಲ್ಲಾಮಾರಿ ಜಲಾಶಯದಲ್ಲಿ ಮುಳುಗಿ ಸಾವು

ಬೀದರ್: ಈಜಲು ಹೋಗಿದ್ದ ಬಾಲಕ ಮುಲ್ಲಾಮಾರಿ ಜಲಾಶಯದಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಖೇರ್ಡಾ ಬಿ ಗ್ರಾಮದಲ್ಲಿ ನಡೆದಿದೆ.

15 ವರ್ಷದ ಮುಜಾಬೀಲ್ ಕಾಜೋದ್ದಿನ್ ಸಾವನ್ನಪ್ಪಿದ ದುರ್ದೈವಿ ಬಾಲಕ. ಐವರು ಗೆಳೆಯರ ಜೊತೆ ಈಜಲು ಹೋದಾಗ ನೀರಿನಲ್ಲಿ ಮುಳಗಿ ಬಾಲಕ ಸಾವನ್ನಪ್ಪಿದ್ದಾನೆ. ಬಾಲಕ ಬಸವಕಲ್ಯಾಣ ತಾಲೂಕಿನ ಸಸ್ತಾಪೂರ್ ಗ್ರಾಮದ ನಿವಾಸಿಯಾಗಿದ್ದಾನೆ. ಆತನ ತಾಯಿ ತನ್ನ ಊರು ತಡೋಳ ಗ್ರಾಮಕ್ಕೆ ಹೋದ ಸಂದರ್ಭ ಬಾಲಕ ಈಜಲು ಮುಲ್ಲಾಮಾರಿ ಜಲಾಶಯಕ್ಕೆ ಹೋಗಿದ್ದಾನೆ.

ಈ ವೇಳೆ ಈಜಲು ಬಾರದೆ ಮುಲ್ಲಾಮಾರಿ ಜಲಾಶಯದ ನೀರಿನಲ್ಲಿ ಮುಳುಗಿ ಬಾಲಕ ಮೃತಪಟ್ಟಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕದಳದ ಸಿಬ್ಬಂದಿ ಜಲಾಶಯದಿಂದ ಬಾಲಕನ ಮೃತದೇಹ ಹೊರ ತೆಗೆದಿದ್ದಾರೆ. ಈ ಕುರಿತು ಮುಡಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.