ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆಯ ಶಾಕ್​​: 100 ಗಡಿದಾಟಿದ ಟೊಮೆಟೊ, ಗೃಹಿಣಿಯರು ಆಕ್ರೋಶ

ಬೆಂಗಳೂರು, ಜೂನ್​ 17: ರಾಜ್ಯ ಸರ್ಕಾರ ತೈಲ ಮಾರಾಟದ ಮೇಲಿನ ತೆರಿಗೆ ಹೆಚ್ಚಳ ಮಾಡಿದೆ. ಲೋಕಸಭೆ ಚುನಾವಣೆಯ ಫಲಿತಾಂಶದ ಬೆನ್ನಲ್ಲೇ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದ್ದು, ಬಿಜೆಪಿಸೇರಿದಂತೆ ಸಾರ್ವಜನಿಕರ ಆಕ್ರೋಶಕ್ಕೂ ಗುರಿ ಆಗಿದೆ. ರಾಜ್ಯಾದ್ಯಂತ ಬೀದಿಗಿಳಿದು ಪ್ರತಿಭಟನೆ ಮಾಡಲಾಗುತ್ತಿದೆ. ಇದೀಗ ತೈಲ ದರ ಹೆಚ್ಚಳದೊಂದು ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆಯ ಶಾಕ್​ ಎದುರಾಗಿದೆ.

ಟೊಮೆಟೊ ಒಂದು ಕೆಜಿಗೆ ಬರೋಬ್ಬರಿ 100 ರೂ, ಈರುಳ್ಳಿ ಬೆಲೆ ಬರೋಬ್ಬರಿ 60 ರೂ ಏರಿಕೆ ಆಗಿದ್ದು, ಗ್ರಾಹಕರಿಗೆ ಮತ್ತಷ್ಟು ಹೊರೆ ಆಗಿದೆ. ಮಳೆ ಬರುತ್ತಿರುವ ಪರಿಣಾಮ ಟೊಮೆಟೊ ಸರಿಯಾಗಿ ಬೆಳೆ‌ ಬಂದಿಲ್ಲ. ಹೀಗಾಗಿ ಟೊಮೆಟೊ ಬೆಲೆ ಕೆಜಿಗೆ 100 ರೂ‌ ಏರಿಕೆ ಆಗಿದೆ. ಇದು ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಸ್ಥರು ಹೇಳುತ್ತಿದ್ದು, ಬೆಲೆ‌ ಕೇಳಿಯೇ ಗ್ರಾಹಕರು ಸುಸ್ತಾಗುತ್ತಿದ್ದಾರೆ.

ಈಗ ಮತ್ತೆ ಟೊಮಾಟೋ ಬೆಲೆ‌ ಜಾಸ್ತಿಯಾಗುತ್ತಿದೆ. ವ್ಯಾಪಾರಸ್ಥರನ್ನ ಕೇಳಿದರೆ ಮಳೆ ಬರ್ತಿದೆ ಹೀಗಾಗಿ ಟೊಮೆಟೊ ಬರ್ತಿಲ್ಲ ಎನ್ನುತ್ತಿದ್ದಾರೆ. ಬೀನ್ಸ್, ಕ್ಯಾರೆಟ್, ಬಾಟಾಣಿ ಎಲ್ಲವೂ 100 ರೂ. ಗಡಿದಾಟಿದೆ. ಹೀಗಾದ್ರೆ ಜೀವನ‌ ಮಾಡುವುದು ಹೇಗೆ ಹೇಳಿ. ಉಚಿತ ಯೋಜನೆ ತೆಗೆದು ಮೊದಲು ತರಕಾರಿ ಬೆಲೆ ಕಡಿಮೆ ಮಾಡಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ತೆರಿಗೆ ಹಂಚಿಕೆ ವಿಚಾರದಲ್ಲಿ ಈ ಹಿಂದೆ ರಾಜ್ಯ ಸರ್ಕಾರ ಕೇಂದ್ರದ ವಿರುದ್ಧ ಸಮರ ಸಾರಿತ್ತು. ಚೊಂಬಿನ ಜಾಹೀರಾತು ಕೊಟ್ಟು ಕುಟುಕಿತ್ತು. ಇದೇ ಅಸ್ತ್ರವನ್ನ ಬಿಜೆಪಿ ಕಾರ್ಯಕರ್ತರು ತಿರುಗಿಸಿ ಬಿಟ್ಟಿದ್ದಾರೆ. ಮಂಗಳೂರಿನಲ್ಲಿ ಚೊಂಬಿನಲ್ಲಿ ಹಣ ಸಂಗ್ರಹಿಸಿ, ಚಿಪ್ಪಿಗೆ ಪೆಟ್ರೋಲ್ ತುಂಬಿಸಿಕೊಂಡ್ರು. ಕಾರಿಗೆ ಹಗ್ಗ ಕಟ್ಟಿ ಎಳೆದು, ಸ್ಕೂಟ್ ತಳ್ಳಿಕೊಂಡು ಜಾಥಾ ಮಾಡಿದ್ರು.