ಬೆಂಗಳೂರು ಹವಾಮಾನದಲ್ಲಿ ಭಾರಿ ಬದಲಾವಣೆ, ಹೆಚ್ಚಾದ ವೈರಲ್ ಸೋಂಕು; ಆಸ್ಪತ್ರೆಗೆ ದಾಖಾಲಾಗುವವರ ಸಂಖ್ಯೆ ಹೆಚ್ಚಳ

ಬೆಂಗಳೂರು, ಜೂನ್ 15: ಬೆಂಗಳೂರಿನಲ್ಲಿ ಒಂದು‌ ವಾರದಿಂದ‌ ಹವಮಾನದಲ್ಲಿ ಭಾರಿ ಬದಲಾವಣೆಯಾಗುತ್ತಿದ್ದು, ಹವಮಾನ ವೈಪರಿತ್ಯದಿಂದ ಜನರಲ್ಲಿ ಹಲವು ಆರೋಗ್ಯ ಸಮಸ್ಯೆಗಳು ಕಾಡುವುದಕ್ಕೆ ಶುರುವಾಗಿದೆ‌‌. ಮಳೆಯಲ್ಲಿ ಸ್ವಲ್ಪ ನೆನೆದರೂ ಚಳಿ, ಜ್ವರ, ಕೆಮ್ಮು, ನೆಗಡಿ, ತಲೆನೋವಿನಂತಹ ಕಾಯಿಲೆಗಳು ಬಾಧಿಸುವುದಕ್ಕೆ ಶುರುವಾಗಿದ್ದು, ನಗರದ ಆಸ್ಪತ್ರೆಗಳಲ್ಲಿ ಆಸ್ಪತ್ರೆಗೆ ದಾಖಾಲಾಗುವ ಪ್ರಕರಣಗಳ ಸಂಖ್ಯೆ ಜಾಸ್ತಿಯಾಗಿದೆ.

ಬೆಂಗಳೂರಿನ ಆಸ್ಪತ್ರೆಗಳಲ್ಲಿ‌ ವಯಸ್ಕರಿಂದ ಹಿಡಿದು ಮಕ್ಕಳವರೆಗೂ ಜ್ವರ, ಕೆಮ್ಮು, ಶೀತ, ಡೆಂಗ್ಯೂ, ಚಿಕೂನ್ ಗುನ್ಯಾ, ವಾಂತಿಯಂತಹ ಪ್ರಕರಣಗಳು ಹೆಚ್ಚಳವಾಗಿದ್ದು, ಆರೋಗ್ಯದ ಮೇಲೆ ನಿಗಾ ಇರಿಸುವಮಂತೆ ವೈದ್ಯರು ಸಲಹೆ ನೀಡಿದ್ದಾರೆ.‌ ಸದ್ಯ ನಗರದಲ್ಲಿ ಬೆಳಗ್ಗೆ ಬಿಸಿಲಿನ ವಾತಾವರಣ, ಮಧ್ಯಾಹ್ನ ಚಳಿಯ ವಾತಾವರಣ, ಸಂಜೆಯ ಮೇಲೆ ಮಳೆ, ಚಳಿ ಕಂಡುಬರುತ್ತಿದ್ದು, ಈ ಬದಲಾವಣೆ ಆರೋಗ್ಯದ ಮೇಲೆ ಭಾರಿ ಪರಿಣಾಮ ಬೀರುತ್ತಿದೆ. ಜೊತೆಗೆ ಈ ಅವಧಿಯಲ್ಲಿ ಫುಡ್ ಪಾಯಿಸನ್ ಪ್ರಕರಣಗಳೂ ಹೆಚ್ಚಾಗುತ್ತಿದ್ದು, ಎಲ್ಲೆಂದರಲ್ಲಿ ನೀರು, ತಿಂಡಿ, ಊಟ ಮಾಡುವುದು ಕೂಡ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ಇಂದಿರಾ ಗಾಂಧಿ‌‌ ಮಕ್ಕಳ‌ ಆಸ್ಪತ್ರೆ ನಿರ್ದೇಶಕ ಡಾ ‌ಸಂಜಯ್ ಕೂಡ ಸಲಹೆ ನೀಡಿದ್ದಾರೆ.

ವೈದ್ಯರು ನೀಡಿರುವ ಸಲಹೆಗಳು ಏನು?

  • ಮಳೆ ಸಂಧರ್ಭದಲ್ಲಿ ಬೆಚ್ಚಗೆ ಬಟ್ಟೆ ಧರಿಸುವುದು
  • ಮಕ್ಕಳಿಗೆ ಬಿಸಿನೀರು ಹೆಚ್ಚು ಕೊಡುವುದು
  • ಮಳೆಯಲ್ಲಿ ನೆನೆಯದೇ ಇರುವುದು
  • ಉಸಿರಾಟದ ಸಮಸ್ಯೆ ಇರುವವರು ಮನೆಯಿಂದ ಹೊರ ಬರದಿರುವುದು
  • ಮನೆಯ ಸುತ್ತ- ಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು
  • ಸಾಧ್ಯವಾದಷ್ಟು‌ ಮನೆ ಊಟವನ್ನೇ ಮಾಡುವುದು

ಒಟ್ಟಿನಲ್ಲಿ ಮಂಗಾರು ಮಳೆ‌ ಈಗಷ್ಟೇ ಚುರುಕಾಗಿದ್ದು, ಮುಂದಿನ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಜನರು ಆರೋಗ್ಯದ ಬಗ್ಗೆ ನಿಗಾವಹಿಸಬೇಕಾಗಿದೆ.