ರೇವ್ ಪಾರ್ಟಿ ಪ್ರಕರಣ: ಆಂಧ್ರ ಸಚಿವ, ಎಂಎಲ್​ಎ ಆಪ್ತರು ವಶಕ್ಕೆ

ಬೆಂಗಳೂರು: ಜಿ.ಆರ್.ಫಾರ್ಮ್ ಹೌಸ್ ರೇವ್ ಪಾರ್ಟಿ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ತಿದೆ. ಪಾರ್ಟಿಯೊಳಗಿನ ಮೋಜು ಮಸ್ತಿಯ ವಿಡಿಯೋಗಳು ವೈರಲ್ ಆದ್ರೆ, ಸಿಸಿಬಿ ಅಧಿಕಾರಿಗಳ ಜೊತೆಗೆ ನಟಿ ಹೇಮಾ ಮಾಡಿದ ಡ್ರಾಮಾ ಕೂಡ ಗೊತ್ತಾಗಿದೆ. ಇದೆಲ್ಲದರ ನಡುವೆ ಹೆಬ್ಬಗೋಡಿ ಪೊಲೀಸ್ ಠಾಣೆಯ ಮೂವರು ಸಿಬ್ಬಂದಿಗಳ ತಲೆದಂಡ ಕೂಡ ಆಗಿದೆ. ಅಷ್ಟೇ ಅಲ್ಲದೆ ಇದೀಗ ಆಂಧ್ರ ಸಚಿವ ಕಾಕನಿ ಗೋವರ್ಧನ ರೆಡ್ಡಿ ಹಾಗೂ  ಎಂಎಲ್ಎ ಶ್ರೀಕಾಂತ್ ರೆಡ್ಡಿ ಆಪ್ತರನ್ನು ಸಿಸಿಬಿ ವಶಕ್ಕೆ ಪಡೆದಿದೆ.

ಮೇ 19 ರಂದು ಎಲೆಕ್ಟ್ರಾನಿಕ್ ಸಿಟಿ ಹೊರವಲಯದ ಜಿ.ಆರ್.ಫಾರ್ಮ್ ಹೌಸ್ ನಲ್ಲಿ ರೇವ್ ಪಾರ್ಟಿ ಆಯೋಜನೆಯಾಗಿತ್ತು. ಈ ಪಾರ್ಟಿಗೆ ಸಿಸಿಬಿ ತಂಡ ದಾಳಿ ನಡೆಸಿದ್ದು ತೆಲಗು ನಟಿ ಹೇಮಾ, ಆಶಿ‌ ರಾಯ್ ಸೇರಿದಂತೆ ಹಲವು ಸ್ಟಾರ್​ಗಳನ್ನು ವಶಕ್ಕೆ ಪಡೆಯಲಾಗಿತ್ತು. ಆ ವೇಳೆ ಕಾರೊಂದರಲ್ಲಿ ಎಂಎಲ್​ಎ ಪಾಸ್ ಪತ್ತೆಯಾಗಿತ್ತು. ಸದ್ಯ ಈಗ ಸಚಿವರಾಗಿರುವ ಆಂಧ್ರದ ಕಾಕಾನಿ ಗೋವರ್ಧನ್ ರೆಡ್ಡಿ ಎಂಬ ಎಂಎಲ್​ಎ ಪಾಸ್ ಪತ್ತೆಯಾದ ಹಿನ್ನೆಲೆ ಜಾಡು ಬೆನ್ನತ್ತಿದ ಸಿಸಿಬಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಪಾಸ್ ವಿಚಾರವಾಗಿ ಹುಡುಕಾಟ ನಡೆಸಿದ್ದ ಸಿಸಿಬಿ ಅಧಿಕಾರಿಗಳು ಹೈದರಾಬಾದ್ ಮೂಲದ ಪೂರ್ಣ ರೆಡ್ಡಿ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಈತ ಸಿಸಿಬಿ ದಾಳಿ ವೇಳೆ ಎಸ್ಕೇಪ್ ಆಗಿದ್ದ. ರೇವ್ ಪಾರ್ಟಿ ಆಯೋಜನೆಯಲ್ಲಿ ಈತ ಪ್ರಮುಖ ಪಾತ್ರವಹಿಸಿದ್ದ. ಜೊತೆಗೆ ಕಾಕಾನಿ ಗೋವರ್ಧನ ರೆಡ್ಡಿಗೆ ಆಪ್ತ ಎಂಬ ಮಾಹಿತಿ ತಿಳಿದುಬಂದಿದೆ. ಸದ್ಯ ಪೂರ್ಣ ರೆಡ್ಡಿಯ ವಿಚಾರಣೆ ನಡೆಸಲಾಗುತ್ತಿದೆ.

ಇನ್ನು ಈ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಮತ್ತೋರ್ವ ಆರೋಪಿಗೆ ರಾಜಕೀಯ ನಂಟಿದೆ. ಅರುಣ್ ಕುಮಾರ್ ‌ಅಲಿಯಾಸ್ ಅರುಣ್ ಚೌದರಿಗೆ ರಾಜಕೀಯ ನಂಟು ಇದೆ ಎಂಬುವುದು ಪತ್ತೆಯಾಗಿದೆ. ವೈಎಸ್​ಆರ್ ಪಕ್ಷದ ಎಂಎಲ್ಎ ಶ್ರೀಕಾಂತ್ ರೆಡ್ಡಿಗೆ ಅರೂಣ್ ಆಪ್ತನಾಗಿದ್ದ. ಅಲ್ಲದೆ ಈ ರೇವ್ ಪಾರ್ಟಿ ಆಯೋಜನೆಯಲ್ಲಿ ಅರುಣ್ ಪಾತ್ರವೂ ಇದೆ. ಹೀಗಾಗಿ ಸಿಸಿಬಿ ಅಧಿಕಾರಿಗಳು ಅರುಣ್​ನನ್ನು ಅರೆಸ್ಟ್ ಮಾಡಿ ಮೊಬೈಲ್ ಜಪ್ತಿ ಮಾಡಿದ್ದಾರೆ. ಆಂಧ್ರ ಪ್ರದೇಶದ ಸಿಎಂ ಜಗನ್ ಮೋಹನ್ ರೆಡ್ಡಿ ಮತ್ತು ಶ್ರೀಕಾಂತ್ ರೆಡ್ಡಿ ಜೊತೆಗೆ ಇರುವ ಅರುಣ್ ಫೋಟೋಗಳು ಪತ್ತೆಯಾಗಿವೆ.