ಜನರಿಗೆ ಬೇಡವಾದವರು ತನಗೆ ಬೇಕಾದವರಿಗೆ ಟಿಕೆಟ್: ಶೋಭಾಗೆ ಟಿಕೆಟ್ ಕೊಡ್ಸಿದ್ದಕ್ಕೆ ಬಿಎಸ್​​ವೈ ವಿರುದ್ಧ ಈಶ್ವರಪ್ಪ ಕಿಡಿ

ಪುತ್ರನಿಗೆ ಹಾವೇರಿ ಲೋಕಸಭಾ ಟಿಕೆಟ್ ಕೈತಪ್ಪಿದ್ದಕ್ಕೆ ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಸಿಡಿದೆದ್ದಿದ್ದು, ಇಂದು ಟಿಕೆಟ್ ವಂಚಿತ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ. ಅಲ್ಲದೇ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾಮೋಹನ ದಾಸ್ ಅವರನ್ನು ಭೇಟಿ ಮಾಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ ಮತ್ತೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಅವರ ಮಕ್ಕಳ ವಿರುದ್ಧ ವಾಗ್ದಾಳಿ ನಡೆಸಿದ್ದು, ಬಂಡಾಯವಾಗಿ ಸ್ಪರ್ಧೆ ಮಾಡುವ ಸುಳಿವನ್ನು ಸಹ ನೀಡಿದ್ದಾರೆ.

ಬೆಂಗಳೂರು, ಮಾರ್ಚ್ 14 : ಪುತ್ರ ಕಾಂತೇಶ್​ಗೆ ಹಾವೇರಿ ಲೋಕಸಭಾ ಟಿಕೆಟ್ ಕೈತಪ್ಪಿದ್ದಕ್ಕೆ ಕೆಎಸ್ ಈಶ್ವರಪ್ಪ(KS Eshwarappa) ಆಕ್ರೋಶಗೊಂಡಿದ್ದು, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ(BS Yediyurappa) ಮತ್ತು ಅವರ ಮಕ್ಕಳ ವಿರುದ್ಧ ಬಹಿರಂಗವಾಗಿಯೇ ಗುಡುಗಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಇಡೀ ರಾಜ್ಯದಲ್ಲಿ ಚಿಕ್ಕಮಗಳೂರಲ್ಲಿ ಶೋಭಾ ಕರಂದ್ಲಾಜೆ ವಿರುದ್ಧ ಆದಷ್ಟು ಗೋ ಬ್ಯಾಕ್ ಬೇರೆ ಎಲ್ಲಿಯೂ ಆಗಿಲ್ಲ.ಅಂತಹ ಶೋಭಾಗೆ ಚಿಕ್ಕಮಗಳೂರಿನಿಂದ ಕರೆದುಕೊಂಡು ಬಂದು ಸದಾನಂದ ಗೌಡಗೆ ಟಿಕೆಟ್ ತಪ್ಪಿಸಿದ್ದಾರೆ. ಶೋಭಾನ ಯಾಕೆ ಕರೆದುಕೊಂಡು ಬಂದು ಹಾಕಿದ್ರು? ಎಂದು ಪ್ರಶ್ನಿಸಿದರು.

ಜನರಿಗೆ ಬೇಡವಾದವರು, ತನಗೆ ಬೇಕಾದವರನ್ನು ಹಾಕಿಕೊಳ್ಳೋಕೆ ಶಕ್ತಿ ಇದೆ. ನಾನು 40 ವರ್ಷಗಳ ಕಾಲ ಸಂಘಟನೆಯಲ್ಲಿ ಕೆಲಸ ಮಾಡಿದ್ದೇನೆ. ನಾನು ಎಂದೆಂದಿಗೂ ಸಂಘಟನೆ ವಿರುದ್ಧ ಕೆಲಸ ಮಾಡಿಲ್ಲ. ರಾಯಣ್ಣ ಬ್ರಿಗೇಡ್ ಮಾಡಿ ಲಕ್ಷಾಂತರ ಜನರ ಸಂಘಟನೆ ಮಾಡುವ ಕೆಲಸ ಆಗಿತ್ತು. ಅದಕ್ಕೆ ಇವರಿಗೆ ಯಾಕೆ ಕಣ್ಣು ಉರಿ ಆಯ್ತೋ ಗೊತ್ತಿಲ್ಲ.ಯಡಿಯೂರಪ್ಪನವರು ಅಮಿತ್ ಶಾ ಬಳಿ ಹೋಗಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನಿಲ್ಲಿಸೋಕೆ ಹೇಳಿ ಎಂದು ಒತ್ತಾಯ ಮಾಡಿದ್ದರು. ಆ ನಂತರ ನಾನು ದೊಡ್ಡವರ ಮಾತು ಕೇಳಿ ಸುಮ್ಮನೆ ಆದೆ ಎಂದು ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.

ಅದು ಇವತ್ತು ಮುಂದುವರಿದಿದ್ರೆ ಹಿಂದುಳಿದ ವರ್ಗಗಳದ್ದು ದೊಡ್ಡ ಸಂಘಟನೆ ಆಗುತ್ತಿತ್ತು. ಈಗ ಟಿಕೆಟ್ ಕೊಡುತ್ತೇನೆ ಎಂದು ನಂಬಿಸಿ ಮೋಸ ಮಾಡಿದ್ದಾರೆ. ನಾನು ಎಂಎಲ್ಎ ಆಗಬೇಕೋ ಎಂಎಲ್ಸಿ ಆಗಬೇಕೋ ಎಂಪಿ ಆಗಬೇಕೋ ಎಂದು ಚುನಾವಣೆಗೆ ಸ್ಪರ್ಧೆ ಮಾಡೋದಿಲ್ಲ. ಇಷ್ಟು ದೊಡ್ಡ ಸಂಘಟನೆಯನ್ನು ಅಪ್ಪ ಮಕ್ಕಳು ಇಟ್ಟು ಕೊಂಡಿದ್ದಾರಲ್ಲ ಇದರ ವಿರುದ್ಧ ಪ್ರತಿಭಟಿಸಲು, ನೊಂದವರ ಧ್ವನಿಯಾಗಿ ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಹೇಳಿದರು.

ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ
ನಿಮ್ಮ ಮಗನಿಗೆ ಟಿಕೆಟ್ ಕೊಡಿಸುತ್ತೇನೆ ಅಂದಿದ್ದರು. ನಿಮ್ಮ ಮಗನಿಗೆ ಟಿಕೆಟ್ ಕೊಡಿಸಿ ನಾನೇ ಹಾವೇರಿಯಲ್ಲಿ ಓಡಾಡಿ ಗೆಲ್ಲಿಸೋದಾಗಿ ಹೇಳಿದ್ದರು. ಈಗ ಯಡಿಯೂರಪ್ಪ ಮತ್ತು ಅವರ ಮಕ್ಕಳು ಅನ್ಯಾಯ ಮಾಡಿದ್ದಾರೆ. ಸಿ.ಟಿ.ರವಿ, ಕಟೀಲು, ಪ್ರತಾಪ್ ಸಿಂಹ, ಸದಾನಂದಗೌಡಗೆ ಅನ್ಯಾಯವಾಗಿದೆ. ಹೀಗಾಗಿ ನೊಂದ ಬಿಜೆಪಿ ಕಾರ್ಯಕರ್ತರ ಧ್ವನಿಯಾಗಿ ಕೆಲಸ ಮಾಡಬೇಕೆಂದು ಎಲ್ಲರೂ ಒತ್ತಾಯಿಸಿದ್ದಾರೆ. ಶುಕ್ರವಾರ ಸಂಜೆ 5 ಗಂಟೆಗೆ ಶಿವಮೊಗ್ಗದಲ್ಲಿ ಸಭೆ ನಡೆಸುತ್ತಿದ್ದೇವೆ. ಬಂಜಾರ ಭವನದಲ್ಲಿ ಎಲ್ಲಾ ಸಮುದಾಯದವರೂ ಸೇರುತ್ತಿದ್ದಾರೆ. ಸಭೆಯಲ್ಲಿ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ಪ್ರಕಟಿಸುವೆ ಎಂದು ಸ್ಪಷ್ಟಪಡಿಸಿದರು.

ಎಂಎಲ್ಸಿ ಮೂಗಿಗೆ ತುಪ್ಪ ಸವರಿಸುವ ತಂತ್ರ
ಎಂಎಲ್ಸಿ ಮೂಗಿಗೆ ತುಪ್ಪ ಸವರಿಸುವ ತಂತ್ರ ಅಷ್ಟೇ ಶೋಭಾಗೆ ಟಿಕೆಟ್ ಕೇಳಿದಷ್ಟು ನನ್ನ ಮಗನಿಗೆ ಯಾಕೆ ಯಡಿಯೂರಪ್ಪ ಕೇಳಿಲ್ಲ? ಯಡಿಯೂರಪ್ಪ ಇದುವರೆಗೂ ನನ್ನ ಜೊತೆಗೆ ಮಾತಾಡಿಲ್ಲ. ಎಂಎಲ್ಸಿ ಪ್ರಸ್ತಾಪವನ್ನೂ ಮಾಡಿಲ್ಲ. ಯಡಿಯೂರಪ್ಪ ಮಾತು ಕೇಳಿ ನನ್ನ ಮಗ ಮೋಸ ಹೋದ ಟಿಕೆಟ್‌ ಕೊಡದೇ ಮೋಸ ಮಾಡಿದವರು ಯಡಿಯೂರಪ್ಪ ಎಂದು ಕಿಡಿಕಾರಿದರು.

ಯಡಿಯೂರಪ್ಪ ಮತ್ತು ಮಕ್ಕಳಿಂದ ಮೋಸ
ಯಡಿಯೂರಪ್ಪ ಮತ್ತು ಮಕ್ಕಳು ನಮಗೆ ಅನ್ಯಾಯ ಮಾಡಿದ್ದಾರೆ. ಪುತ್ರ ಕೆ.ಇ.ಕಾಂತೇಶ್​ಗೆ ಟಿಕೆಟ್ ಕೊಡಿಸುತ್ತೇನೆ ಅಂದಿದ್ದರು. ಹೀಗಾಗಿ ಯಡಿಯೂರಪ್ಪನ ಮಾತು ನಂಬಿ ಕಾಂತೇಶ್ ವರ್ಷಾನುಗಟ್ಟಲೇ ಓಡಾಡಿದ್ದ. ಟಿಕೆಟ್ ಕೊಟ್ಟರೆ ಗೆಲ್ಲುತ್ತಾನೆ ಎಂದು ಬಿಎಸ್​ವೈ ಮೋಸಮಾಡಿದರು. ಈಗ ಎಂಎಲ್​ಸಿ ಮಾಡುತ್ತೇವೆ ಅಂತಿದ್ದಾರೆ, ಹೇಗೆ ನಂಬುವುದು? ಬಿಜೆಪಿ ಕಾರ್ಯಕರ್ತ, ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಕೇಸ್​ನಲ್ಲಿ ಕ್ಲೀನ್​ಚಿಟ್ ಸಿಕ್ಕ 2 ದಿನದಲ್ಲಿ ಮಂತ್ರಿ ಮಾಡುತ್ತೇನೆ ಎಂದು ಹೇಳಿದ್ರು. ಕ್ಲೀನ್​ಚಿಟ್ ಸಿಕ್ಕ ನಂತರವೂ ಯಾಕೆ ನನ್ನನ್ನು ಮಂತ್ರಿ ಮಾಡಲಿಲ್ಲ ಎಂದು ಕಿಡಿಕಾರಿದರು.