ಹರ್ಯಾಣ: ವೇದಿಕೆ ಮೇಲೆಯೇ ಹೃದಯಾಘಾತದಿಂದ ಪ್ರಾಣಬಿಟ್ಟ ಹನುಮಂತನ ಪಾತ್ರಧಾರಿ

ಹರ್ಯಾಣದ ಭಿವಾನಿಯಲ್ಲಿ ರಾಮಲೀಲಾ ನಾಟಕ ನಡೆಯುತ್ತಿದ್ದ ಸಮಯದಲ್ಲಿ ಹನುಮಂತನ ಪಾತ್ರಧಾರಿ ಹೃದಯಾಘಾತ ದಿಂದ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಹರೀಶ್ ಮೆಹ್ತಾ ಎಂಬುವವರು ಪ್ರದರ್ಶನದ ಸಮಯದಲ್ಲಿ ಹೃದಯಾಘಾತದಿಂದ ವೇದಿಕೆ ಮೇಲೆಯೇ ಪ್ರಾಣ ಕಳೆದುಕೊಂಡಿದ್ದಾರೆ. ಭಿವಾನಿಯ ಜವಾಹರ್ ಚೌಕ್ ಪ್ರದೇಶದಲ್ಲಿ ಭಗವಾನ್ ರಾಮನ ಗೌರವಾರ್ಥ ರಾಜ್ ತಿಲಕ್ ಎಂಬ ಕಾರ್ಯಕ್ರಮದಲ್ಲಿ ಈ ಘಟನೆ ಸಂಭವಿಸಿದೆ.

ಕಾರ್ಯಕ್ರಮವು ಹಾಡಿನ ಮೂಲಕ ಶ್ರೀರಾಮನ ಪಟ್ಟಾಭಿಷೇಕದ ಸಿದ್ಧತೆಗಳನ್ನು ಒಳಗೊಂಡಿತ್ತು. ಹಾಡಿನ ಮುಕ್ತಾಯದ ನಂತರ, ಹರೀಶ್ ಮೆಹ್ತಾ, ಹನುಮಾನ್ ಪಾತ್ರದಲ್ಲಿ, ಭಗವಾನ್ ರಾಮನ ಪಾದಗಳಲ್ಲಿ ಪ್ರಾರ್ಥನೆ ಸಲ್ಲಿಸಬೇಕಿತ್ತು. ಹರೀಶ್ ರಾಮನ ಪಾದಗಳಿಗೆ ನಮಸ್ಕರಿಸುತ್ತಿದ್ದಂತೆ, ಇದ್ದಕ್ಕಿದ್ದಂತೆ ಕುಸಿದುಬಿದ್ದರು, ತಕ್ಷಣ ಅಲ್ಲಿದ್ದ ಪ್ರೇಕ್ಷಕರು ಆಘಾತಗೊಂಡರು. ಸ್ವಲ್ಪ ಸಮಯದವರೆಗೆ, ಪ್ರೇಕ್ಷಕರು ಇದು ನಾಟಕದ ಭಾಗವೆಂದು ತಿಳಿದಿದ್ದರು. ಆದರೆ ವೇದಿಕೆಯಿಂದ ಅವರನ್ನು ಎತ್ತಲು ಪ್ರಯತ್ನಿಸಿದಾಗ ಅವರು ಪ್ರತಿಕ್ರಿಯಿಸಲಿಲ್ಲ.

ಹನುಮಂತನ ವೇಷಭೂಷಣದಲ್ಲಿದ್ದ ಹರೀಶ್ ಮೆಹ್ತಾ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ವೈದ್ಯರು ಅವರನ್ನು ಮೃತಪಟ್ಟಿದ್ದಾರೆಂದು ಘೋಷಿಸಿದರು. ಹರೀಶ್ ವಿದ್ಯುತ್ ಇಲಾಖೆಯಲ್ಲಿ ಜೂನಿಯರ್ ಇಂಜಿನಿಯರ್ ಹುದ್ದೆಯಿಂದ ನಿವೃತ್ತರಾಗಿದ್ದರು. ಕಳೆದ 25 ವರ್ಷಗಳಿಂದ ಹನುಮಂತನ ಪಾತ್ರವನ್ನು ನಿರ್ವಹಿಸುತ್ತಿದ್ದರು.

ಹಿಂದಿನ ದಿನ, ರಾಮ್ ಲಲ್ಲಾನ ವಿಗ್ರಹದ ಬಹು ನಿರೀಕ್ಷಿತ ಪ್ರಾಣ ಪ್ರತಿಷ್ಠಾ ಸಮಾರಂಭವನ್ನು ವೀಕ್ಷಿಸಲು ಅಯೋಧ್ಯೆಗೆ ಹೋಗಿದ್ದ 65 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತಕ್ಕೆ ಒಳಗಾಗಿದ್ದರು. ಸ್ಥಳದಲ್ಲೇ ಚಿಕಿತ್ಸೆ ನೀಡಲಾಯಿತು, ಅವರ ಸ್ಥಿತಿ ಸ್ಥಿರವಾದ ನಂತರ, ಶ್ರೀವಾಸ್ತವ ಅವರನ್ನು ಹೆಚ್ಚಿನ ಆರೈಕೆಗಾಗಿ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಜನವರಿ 22ರಂದು ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ರಾಮಮಂದಿರದಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆದಿದೆ. ಇಂದಿನಿಂದ ಸಾರ್ವಜನಿಕರು ರಾಮಲಲ್ಲಾನ ದರ್ಶನ ಪಡೆಯಲಿದ್ದಾರೆ. ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ನೂಕುನುಗ್ಗಲು ಆರಂಭವಾಗಿದೆ. ಬೆಳಗಿನ ಜಾವ 3 ಗಂಟೆಯಿಂದಲೇ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದರು.

ಕೊರೆಯುವ ಚಳಿಯಲ್ಲೂ ತನ್ನ ದೇವರನ್ನು ನೋಡಬೇಕೆಂಬ ತವಕ ಅವರನ್ನು ಅಲ್ಲಿಗೆ ತಂದು ನಿಲ್ಲಿಸಿತ್ತು, ರಾತ್ರಿ ವೇಳೆಯೂ ದೇಗುಲದ ದ್ವಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿರುವುದನ್ನು ಕಾಣಬಹುದು. ಜನರು ನಿರಂತರವಾಗಿ ಜೈ ಶ್ರೀ ರಾಮ್ ಮತ್ತು ಸಿಯಾವರ ರಾಮ್ ಚಂದ್ರ ಕೀ ಜೈ ಎಂದು ಘೋಷಣೆಗಳನ್ನು ಕೇಳಿದರು.

ಭಕ್ತರ ಉತ್ಸಾಹ ಮುಗಿಲು ಮುಟ್ಟಿತ್ತು. ರಾಮಮಂದಿರ ಉದ್ಘಾಟನೆಯ ನಂತರ ಜನರ ಮನದಲ್ಲಿ ಭಕ್ತಿಯ ಮಹಾಪೂರವೇ ಹರಿದಿದೆ. ರಾಮ ಮಂದಿರದ ಮುಖ್ಯ ದ್ವಾರ ತೆರೆಯುತ್ತಿದ್ದಂತೆಯೇ ಭಕ್ತರ ದಂಡು ಜೈ ಶ್ರೀ ರಾಮ್ ಎಂದು ಘೋಷಣೆ ಕೂಗುತ್ತಿದ್ದು, ರಾಮಲಲ್ಲಾ ದರ್ಶನ ಹಾಗೂ ದೇಗುಲದಲ್ಲಿ ಪೂಜೆ ಸಲ್ಲಿಸಲು ಉತ್ಸುಕರಾಗಿದ್ದರು.