ಅತ್ಯಾಚಾರದ ವಿರುದ್ಧ ಸುಪ್ರಿಂಕೋರ್ಟಿನ ತೀರ್ಪು ಸಮಾಧಾನ ತಂದಿದೆ : ಯಮುನಾ ಗಾಂವಕರ

ದಾಂಡೇಲಿ : ಅತ್ಯಾಚಾರದ ವಿರುದ್ಧ ಸುಪ್ರಿಂಕೋರ್ಟಿನ ತೀರ್ಪು ಸಮಾಧಾನ ತಂದಿದೆ ಮಾತ್ರವಲ್ಲ ಇದು ಅನ್ಯಾಯದ ವಿರುದ್ಧದ ಸಾಮೂಹಿಕ ಜವಾಬ್ದಾರಿಯನ್ನು ಎತ್ತಿ ಹಿಡಿದಿದೆ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಯಮುನಾ ಗಾಂವಕರ ಅವರು ಹೇಳಿದರು.

ಅವರು ಭಾನುವಾರ ನಗರದಲ್ಲಿ‌ ಮಾಧ್ಯಮಕ್ಕೆ ನೀಡಿದ ಹೇಳಿಕೆಯಲ್ಲಿ ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣ ವಿರುದ್ಧ ಮತ್ತು ಆನಂತರ ಘಟಿಸಿದ ಅವರ ಕುಟುಂಬದ ಸದಸ್ಯರ ಹತ್ಯೆ ವಿರುದ್ಧ ಗಟ್ಟಿಯಾಗಿ ನಿಂತು ವಾದಿಸಿದ ಮಹಿಳಾ ದಾವೆದಾರರಿಗೆ ಹಾಗೂ ದೇಶದಲ್ಲಿ ಸಮಾನತೆಯ ಹಕ್ಕುಪ್ರತಿಪಾದಕರಿಗೂ ಈ ತೀರ್ಪು ಸಮಾಧಾನ ತಂದಿದೆ.

2002 ರ ಗುಜರಾತ್ ಗಲಭೆಯಲ್ಲಿ ಬಿಲ್ಕಿಸ್ ಬಾನೋ ಅವರ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಕುಟುಂಬ ಸದಸ್ಯರ ಹತ್ಯೆಯಲ್ಲಿ ಭಾಗಿಯಾಗಿರುವ 11 ಅಪರಾಧಿಗಳ ಬಿಡುಗಡೆಯನ್ನು ಸುಪ್ರೀಂ ಕೋರ್ಟ್ ಜನವರಿ 8 ರಂದು ರದ್ದುಗೊಳಿಸಿತು. ಈ ಕಾನೂನು ಪ್ರಕ್ರಿಯೆಯಲ್ಲಿ ದೇಶದ ಹಲವಾರು ಸಂಘಟನೆಗಳು ಸೇರಿದಂತೆ ಗಣ್ಯ ಮಹಿಳೆಯರು ಬಿಲ್ಕಿಸ್ ಬಾನೋ ಅವರಿಗೆ ಬೆಂಬಲಿಸಿ, ಅವರ ಗೆಲುವಿಗೆ ಕಾರಣವಾಗಿದ್ದಾರೆ.

ಕಾನೂನು ಪ್ರಕ್ರಿಯೆಯಲ್ಲಿ ಸಿಪಿಐ(ಎಂ) ನಾಯಕಿ ಸುಭಾಷಿಣಿ ಅಲಿ, ಪತ್ರಕರ್ತೆ ರೇವತಿ ಲಾಲ್, ತೃಣಮೂಲ ಕಾಂಗ್ರೆಸ್ ನಾಯಕಿ ಮಹುವಾ ಮೊಯಿತ್ರಾ, ಮತ್ತು ಭಾರತೀಯ ಮಹಿಳೆಯರ ರಾಷ್ಟ್ರೀಯ ಒಕ್ಕೂಟ (ಎನ್‌ಎಫ್‌ಐಡಬ್ಲ್ಯು) ಸೇರಿದಂತೆ ಪ್ರಮುಖ ಮಹಿಳಾ ಮುಖಂಡರು ಮತ್ತು ಸಂಘಟನೆಗಳು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳ (ಪಿಐಎಲ್) ಮೂಲಕ ಅಪರಾಧಿಗಳ ಬಿಡುಗಡೆಯನ್ನು ಕಾನೂನುಬದ್ಧವಾಗಿ ಪ್ರಶ್ನಿಸಲಾಗಿತ್ತು.

ನ್ಯಾಯಾಲಯವು ಇದೀಗ ಎಲ್ಲಾ 11 ಅತ್ಯಾಚಾರ ಅಪರಾಧಿಗಳನ್ನು ಎರಡು ವಾರಗಳಲ್ಲಿ ಶರಣಾಗುವಂತೆ ಮತ್ತು ಜೈಲಿಗೆ ಹಿಂತಿರುಗುವಂತೆ ಆದೇಶಿಸಿದೆ. ಆ ಮೂಲಕ 2022ರ ಆಗಸ್ಟ್ 15ದಂದು ಗುಜರಾತ್ ಸರ್ಕಾರ ಅವರಿಗೆ ನೀಡಿದ್ದ ವಿವಾದಾತ್ಮಕ ಕ್ಷಮಾದಾನದ ನಿರ್ಧಾರವನ್ನು ರದ್ದುಗೊಳಿಸಿದೆ. ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ, ಗುಜರಾತ್ ರಾಜ್ಯವು ಕ್ಷಮಾದಾನದ ಆದೇಶಗಳನ್ನು ಜಾರಿಗೊಳಿಸಲು ಅಧಿಕಾರವನ್ನು ಹಎಂದು ದೃಢವಾಗಿ ಘೋಷಿಸಿದ್ದು, ಇದು ಮಹಿಳೆಯರ ನೇತೃತ್ವದ ಕಾನೂನು ಹೋರಾಟಕ್ಕೆ ಸಿಕ್ಕ ಐತಿಹಾಸಿಕ ವಿಜಯವಾಗಿದೆ.

ಸುಪ್ರೀಂಕೋರ್ಟ್‌ನ ಈ ತೀರ್ಪು ಧೈರ್ಯ ಹಾಗೂ ಕಾನೂನು ಮತ್ತು ನ್ಯಾಯದ ತೀವ್ರ ತಿಳುವಳಿಕೆಯನ್ನು ಪ್ರದರ್ಶಿಸುತ್ತದೆ, ಇದು ಕಾನೂನಿನ ನಿಯಮವನ್ನು ಎತ್ತಿಹಿಡಿಯುವಲ್ಲಿ ನಾಗರಿಕರ ಪಾತ್ರದ ಪ್ರಾಮುಖ್ಯತೆಯನ್ನು ಗಟ್ಟಿಗೊಳಿಸುತ್ತದೆ.

“ಗುಜರಾತ್ ಸರ್ಕಾರವು ಆರೋಪಿಗಳ ಜತೆ ಶಾಮೀಲಾಗಿ, ಅವರ ಕ್ರಮಗಳನ್ನು ಸುಗಮಗೊಳಿಸಿದೆ. ಇದೇ ಕಾರಣಕ್ಕೆ ಪ್ರಕರಣವು ಅಂತಿಮವಾಗಿ ಮಹಾರಾಷ್ಟ್ರಕ್ಕೆ ವರ್ಗಾವಣೆ ಆಯಿತು ಎಂದು ನ್ಯಾಯಾಲಯ ಪ್ರತಿಪಾದಿಸಿತು. ಈ ತೀರ್ಪು ರಾಧೇಶ್ಯಾಮ್ ಮಾತ್ರವಲ್ಲದೆ ಗುಜರಾತ್ ಸರ್ಕಾರವನ್ನೂ ಒಳಗೊಂಡಂತೆ ಸುಪ್ರೀಂ ಕೋರ್ಟ್‌ಗೆ ಮಾಡಿದ ವಂಚನೆಯನ್ನು ಬಹಿರಂಗಪಡಿಸಿದೆ ಎಂದು ಯಮುನಾ ಗಾಂವಕರ್ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಜನವಾದಿ ಮಹಿಳಾ‌ ಸಂಘಟನೆಯ ಜಿಲ್ಲಾ ಸಂಚಾಲಕರಾದ ರತ್ನದೀಪಾ ಎನ್.ಎಂ ಉಪಸ್ಥಿತರಿದ್ದರು.