ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ದಾಂಡೇಲಿಯಲ್ಲಿ ಸಹಿ ಸಂಗ್ರಹ ಚಳುವಳಿ

ದಾಂಡೇಲಿ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ಸಂಘಟನೆಯ ವತಿಯಿಂದ ನಗರದ ಬಸ್ ನಿಲ್ದಾಣದ ಮುಂಭಾಗದಲ್ಲಿ ಸಹಿ ಸಂಗ್ರಹ ಅಭಿಯಾನವನ್ನು ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.

ಸಿಐಟಿಯು ಸಂಚಾಲಕರಾದ ಸಲೀಂ ಸೈಯದ್ ಅವರ ನೇತೃತ್ವದಲ್ಲಿ ನಡೆದ ಅಭಿಯಾನದಲ್ಲಿ ಸ್ವಾಮಿ ವಿವೇಕಾನಂದ ಜಯಂತಿಯ ಈ ದಿನದಿಂದ ಗಾಂಧೀಜಿಯವರ ಹುತಾತ್ಮ ದಿನಾಚರಣೆಯೊಳಗಡೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಮನವಿಯನ್ನು ನೀಡುವ ಬೇಡಿಕೆ ಪತ್ರಕ್ಕೆ ಸಹಿ ಸಂಗ್ರಹಣೆಗೆ ಚಾಲನೆ ನೀಡಲಾಯ್ತು.

ಈ ಸಂದರ್ಭದಲ್ಲಿ ಮಾತನಾಡಿದ ಸಿಐಟಿಯು ಸಂಚಾಲಕರಾದ ಸಲೀಂ ಸೈಯದ್ ಅವರು ಕಟ್ಟಡ ಕಾರ್ಮಿಕರ 1996 ರ ಕಾಯ್ದೆ & ಸೆಸ್ ಕಾಯ್ದೆಯನ್ನು ಪುನರ್ ಸ್ಥಾಪಿಸಬೇಕು, ಕಟ್ಟಡ ನಿರ್ಮಾಣ ಸಾಮಗ್ರಿಗಳ ಮೇಲಿನ ಜಿಎಸ್ಟಿ ಕಡಿತ ಮಾಡಬೇಕು, ಕೇಂದ್ರ ಸರ್ಕಾರ ಜಾರಿ ಮಾಡಿರುವ ಕಾರ್ಮಿಕ ಸಂಹಿತೆ ರದ್ದುಗೊಳಿಸಬೇಕು, ಎಲ್ಲ 29 ಕಾರ್ಮಿಕ ಕಾನೂನುಗಳನ್ನು ಪುನ‌ರ್ ಸ್ಥಾಪಿಸಬೇಕು, ರಾಜ್ಯದಲ್ಲಿ ನೀಡಲಾಗುತ್ತಿದ್ದ ಶೈಕ್ಷಣಿಕ ಸಹಾಯಧನ ಕಡಿತ ವಾಪಸ್ ಪಡೆಯಬೇಕು, ಹಿಂದಿನಂತೆ ಶೈಕ್ಷಣಿಕ ಸಹಾಯಧನ ನೀಡಬೇಕು, ಪೆಟ್ರೋಲ್-ಡೀಸೆಲ್, ಎಲ್ ಪಿಜಿ ಗ್ಯಾಸ್, ಅಕ್ಕಿ, ಅಡುಗೆ ಎಣ್ಣೆ, ಬೇಳೆಕಾಳು ಇತ್ಯಾದಿ ಅಗತ್ಯ ವಸ್ತುಗಳ ಬೆಲೆ ಇಳಿಸಬೇಕು, ನಿರುದ್ಯೋಗ ತಡೆಗಟ್ಟಿ, ಉದ್ಯೋಗ ಅವಕಾಶ ಸೃಷ್ಟಿಸಬೇಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಡಿವೈಎಫ್ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ ಸ್ಯಾಮಸನ್ ಅವರು ಮಾತನಾಡಿ ಕಾರ್ಮಿಕರ, ರೈತರ, ಬಡವರ ಬದುಕಿನ ಅಗತ್ಯತೆಗಾಗಿ ಅವಶ್ಯ ಬೇಕಾದ ವಿವಿಧ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ತ್ವರಿತ ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಪ್ರಮುಖರುಗಳಾದ ಜಗದೀಶ ನಾಯ್ಕ, ಭವರ್ ಸಿಂಗ್, ಕೃಷ್ಣ ಭಟ್, ದಿನೇಶ್ ನಾಯ್ಕ, ವಿಠ್ಠಲ್ ರೇಣುಕೆ, ರಾಮಾಂಜನೇಯ, ರತ್ನಾದೀಪಾ.ಎನ್.ಎಂ, ಯಾಕೋಬ್ ಜಾಕೋಬ್ ದರ್ಶಿ ಹಾಗೂ ಸಂಘಟನೆಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.