ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಅಪ್ಪ-ಮಗನಿಂದ ರೌಡಿಸಂ, ವ್ಯಕ್ತಿಯೋರ್ವನ ಮೇಲೆ ಹಲ್ಲೆ; ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ

ಬೆಂಗಳೂರು, ಡಿ.22: ಕ್ಷುಲ್ಲಕ ಕಾರಣಕ್ಕೆ ಅಪ್ಪ- ಮಗನಿಂದ ವ್ಯಕ್ತಿಯೋರ್ವನ ಮೇಲೆ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ಆರ್​ಆರ್​ ನಗರದ ಜವರೇಗೌಡನಗರದಲ್ಲಿ ಡಿ.20 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜವರೇಗೌಡ ನಗರದ ರಾಮದಾಸ್ 7 ನೇ ಕ್ರಾಸ್​ನಲ್ಲಿ ಮೋಹನ್ ಗೌಡ ಹಾಗೂ ಪಕ್ಕದಲ್ಲಿ ಕೃಷ್ಣಪ್ಪ ಎನ್ನುವವರ ಮನೆ ಇದೆ. ಕೃಷ್ಣಪ್ಪ ಟಾಟಾ ಏಸ್ ಗಾಡಿ ತಂದು ಅವರ ಮನೆ ಮುಂದೆ ನಿಲ್ಲಿಸಿದ್ದರು. ಈ ವೇಳೆ ಮೋಹನ್ ಗೌಡ ಅವರ ಮನೆಯ ಸೀಟ್​ಗೆ ಗಾಡಿ ಟಚ್ ಆಗಿತ್ತು. ಈ ಹಿನ್ನಲೆ ಪಕ್ಕದ ಮನೆಯ ಮೋಹನ್ ಗೌಡ್ ಹಾಗೂ ಆತನ ಮಗ ತೇಜಸ್ ಗೌಡ ಎಂಬುವವರು ಕಿರಿಕ್ ಮಾಡಿದ್ದರು.

ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಟಾಟ್ ಏಸ್ ನಮ್ಮ ಮನೆ ಸೀಟ್​ಗೆ ಟಚ್ ಆಗಿದೆ ಎಂದು ಕೃಷ್ಣಪ್ಪ ಜೊತೆ ಗಲಾಟೆ ಶುರು ಮಾಡಿದ ಅಪ್ಪ ಮತ್ತು ಮಗ. ಈ ವೇಳೆ ಏಕಾಏಕಿ ಕೃಷ್ಣಪ್ಪ ಮೇಲೆ ಅಪ್ಪ ಮೋಹನ್ ಗೌಡ, ಮಗ ತೇಜಸ್ ಗೌಡ ಮನಸೋ ಇಚ್ಚೆ ಹಲ್ಲೆ ನಡೆಸಿದ್ದಾರೆ. ಈ ಹಿಂದೆ ಕೂಡ ಗಾಡಿ ನಿಲ್ಲಿಸುವ ವಿಚಾರಕ್ಕೆ ಪದೇ ಪದೇ ಗಲಾಟೆ ನಡೆಯುತ್ತಿದ್ದಂತೆ. ಇದೀಗ ಕೃಷ್ಣಪ್ಪನನ್ನು ಥಳಿಸಿದ್ದು, ಹಲ್ಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಮಧ್ಯಾಹ್ನವೇ ಒಂಟಿ ಮಹಿಳೆಯ ಮನೆಗೆ ನುಗ್ಗಿ ದರೋಡೆ

ನೆಲಮಂಗಲ: ಸಿನಿಮೀಯಾ ರೀತಿಯಲ್ಲಿ ಮಧ್ಯಾಹ್ನವೇ ಒಂಟಿ ಮಹಿಳೆಯ ಮನೆಗೆ ನುಗ್ಗಿ ಮಾರಕಾಸ್ತ್ರ ತೋರಿಸಿ ದರೋಡೆ ಮಾಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ತೋಟದ ಗುಡ್ಡದಹಳ್ಳಿಯಲ್ಲಿ ನಡೆದಿದೆ. ರಾಜಸ್ಥಾನದ ಮಾಣಿಕ್ ರಾಮ್ ಮತ್ತು ಮಧು ದಂಪತಿಗಳ ಮನೆಯಲ್ಲಿ ಈ ಕೃತ್ಯ ಎಸಗಲಾಗಿದ್ದು, ಸಿಸಿಟಿವಿಯಲ್ಲಿ 4 ಆರೋಪಿಗಳು ಓಡುತ್ತಿರುವ ದೃಶ್ಯ ಸೆರೆಯಾಗಿದೆ. ಮಾಣಿಕ್ ರಾಮ್ ಜ್ಯೂಲರಿ ಶಾಫ್​ ಇಟ್ಟುಕೊಂಡಿದ್ದರು. ಈ ಹಿನ್ನಲೆ ಸೇಠು ಮನೆಯಲ್ಲಿ ಅಪಾರ ಪ್ರಮಾಣದ ಹಣ, ಚಿನ್ನ ಇರುತ್ತದೆ ಎಂದು ದರೋಡೆ ನಡೆಸಿದ್ದರು. ಆದರೆ, ಮನೆಯಲ್ಲ ತಡಕಾಡಿದ ಖದೀಮರಿಗೆ ಕೇವಲ 5 ಸಾವಿರ ಹಣ ಮಾತ್ರ ಸಿಕ್ಕಿದೆ. ಜ್ಯೂಲರಿ ಶಾಪ್ ಅಂಗಡಿಯಿಂದ ಕೆಲಸದ ಹುಡುಗ ಮನೆ ಬಳಿ ಬರುತ್ತಲೇ, ಆತನನ್ನು ನೂಕಿ ದರೋಡೆ ಕೋರರು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.