ಕೋವಿಡ್ ಸಭೆ ಅಂತ್ಯ: ಕ್ರಿಸ್​ಮಸ್​, ಹೊಸ ವರ್ಷಾಚರಣೆಗೆ ಯಾವುದೇ ನಿರ್ಬಂಧವಿಲ್ಲ ಎಂದ ಸಿಎಂ

ಬೆಂಗಳೂರು, (ಡಿಸೆಂಬರ್ 21): ಕರ್ನಾಟಕದಲ್ಲಿ  ಕೋವಿಡ್  ​ ಆತಂಕ ಶುರುವಾಗಿದ್ದು, ಈ ಬಗ್ಗೆ ಇಂದು (ಡಿಸೆಂಬರ್ 21) ಗೃಹ ಕಚೇರಿ ಕಾವೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಮಹತ್ವದ ಸಭೆ ನಡೆಸಿದರು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಈಗಾಗಲೇ ಆರೋಗ್ಯ ಸಚಿವರು ಸಭೆ ಮಾಡಿದ್ದಾರೆ. Tac ಜೊತೆ ಚರ್ಚೆ ಮಾಡಿ ಅವರ ಸಲಹೆ ತೆಗೆದುಕೊಂಡಿದ್ದೇವೆ. ಯಾವುದೇ ಕಾರಣಕ್ಕೂ ಹಿಂದೆ ಮಾಡಿದ ತಪ್ಪುಗಳು ಮರುಕಳಿಸಬಾರದು ಎಂದು ಅಧಿಕಾರಿಗೆ ಸೂಚನೆ ನೀಡಿದ್ದೇನೆ. ಆಕ್ಸಿಜನ್, ಬೆಡ್ ಸಮಸ್ಯೆ ಬರಬಾರದು ಎಂದು ಹೇಳಿದ್ದೇನೆ. ಬೇರೆ ಖಾಯಿಲೆಗಳನ್ನ ಗಂಭೀರವಾಗಿ ಪರಿಗಣಿಸಿ ಚಿಕಿತ್ಸೆಗೆ ಸೂಚಿಸಿದ್ದೇನೆ ಎಂದರು. ಇನ್ನು ಇದೇ ವೇಳೆ ಕ್ರಿಸ್​ಮಸ್​, ಹೊಸ ವರ್ಷಾಚರಣೆಗೆ ಯಾವುದೇ ನಿರ್ಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

60 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಮಾಸ್ಕ್ ಹಾಕಬೇಕು. ಹಾಗೇ ಇನ್ನುಳಿದವರೂ ಸಹ ಜನಸಂದಣಿ ಇರುವ ಕಡೆ ಎಲ್ಲರೂ ಮಾಸ್ಕ್ ಹಾಕಿಕೊಳ್ಳಬೇಕು. ಎಲ್ಲರೂ ಕಡ್ಡಾಯವಾಗಿ ಮಾಸ್ಕ್​​ ಹಾಕುವ ಪರಿಸ್ಥಿತಿ ಬಂದಿಲ್ಲ. ಕಡ್ಡಾಯವಾಗಿ ಮಾಸ್ಕ್​ ಹಾಕಿ ಎಂದು ಹೇಳುತ್ತಿಲ್ಲ. ಸಲಹೆ ಅಷ್ಟೇ. ಇನ್ನು ಸೂಕ್ತ ಕೋವಿಡ್ ಚಿಕಿತ್ಸೆ ನೀಡಲು ಸೂಚಿಸಿದ್ದೇನೆ. ಔಷಧಿ, ಉಪಕರಣಗಳ ಕೊರತೆ ಆಗಬಾರದು. ವ್ಯಾಕ್ಸಿನ್ ಅಗತ್ಯ ಇದ್ರೆ ಪ್ರಾರಂಭ ಮಾಡಬೇಕು ಎಂದು ಸೂಚನೆ ನೀಡಿದ್ದೇನೆ ತಿಳಿಸಿದರು.

ಇದು ಈಗ ಬಂದಿರುವ ಉಪತಳಿ JN.1. ಇದು ಒಮಿಕ್ರಾನ್ ನ ಉಪತಳಿ. ರಾಜ್ಯದಲ್ಲಿ 92 ಜನರಿಗೆ ಪಾಸಿಟಿವ್ ಎನ್ನುವುದು ಗೊತ್ತಾಗಿದೆ. ಬೆಂಗಳೂರು ನಗರದಲ್ಲೇ 80 ಕೇಸ್ ಇವೆ. ಮೈಸೂರು 5, ಸೇರಿದಂತೆ 372 ಸೋಂಕಿತರಿಗೆ ಮನೆಯಲ್ಲೇ ಕ್ವಾರಂಟೈನ್ ಮಾಡಲಾಗಿದೆ. 20 ಸೋಂಕಿತರು ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 7 ಜನ ಐಸಿಯು ನಲ್ಲಿ‌ ಇದ್ದಾರೆ. ಆದ್ರೆ, ಕೋವಿಡ್ ನಿಂದ ಅಲ್ಲ. ಅವರಿಗೆ ಬೇರೆ ಬೇರೆ ಕಾಯಿಲೆಗಳು ಇವೆ. ಇನ್ನು ರಾಜ್ಯದಲ್ಲಿ ಕೋವಿಡ್ ಪಾಸಿಟಿವ್ ಇದ್ದ ಮೂರು ಜನ ಸಾವನ್ನಪ್ಪಿದ್ದಾರೆ. ಕೋವಿಡ್ ನಿಂದಲೇ ಸಾವನ್ನಪ್ಪಿದ್ದಾರೆ ಅಂತ ಹೇಳುವುದಕ್ಕೆ ಆಗುವುದಿಲ್ಲ. ಕಿಡ್ನಿ, ಶ್ವಾಸಕೋಶ, ಹೃದಯ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ವಿವರಿಸಿದರು.

ನಿತ್ಯ ಐದು ಸಾವಿರ ಟೆಸ್ಟ್ ಮಾಡಲು ಸೂಚನೆ ನೀಡಲಾಗಿದೆ. ಕ್ಯಾಬಿನಿಟ್ ಉಪ ಸಮಿತಿಯಲ್ಲಿ ಚರ್ಚೆ ಮಾಡುತ್ತೇವೆ. RTPCR 3,500 ಸೇರಿ ಒಟ್ಟು 5 ಸಾವಿರ ಟೆಸ್ಟ್ ನಿತ್ಯ ಆಗಲಿದ್ದು, ಗಡಿ ಭಾಗದಲ್ಲಿ ಹೆಚ್ಚು ಟೆಸ್ಟಿಂಗ್ ಗೆ ಸೂಚಿಸಲಾಗಿದೆ. ಈ ಖಾಯಿಲೆಗೆ ಯಾರೂ ಭಯ, ಆತಂಕ ಪಡುವ ಅಗತ್ಯವಿಲ್ಲ. ಆದ್ರೆ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.

ಆಕ್ಸಿಜನ್, ವೆಂಟಿಲೇಟರ್, ಬೆಡ್ ಮುಂಚೆಯೇ ತಯಾರಿ ಮಾಡಿಕೊಂಡಿರಬೇಕು. ಅಗತ್ಯ ಉಪಕರಣಗಳನ್ನ ಒದಗಿಸಿಕೊಳ್ಳಬೇಕು ಅಂತ ಆರೋಗ್ಯ ಇಲಾಖೆಗೆ ಹೇಳಿದ್ದೇನೆ. ಈ ಹಿಂದೆ ವ್ಯಾಕ್ಸಿನ್ ಕೇಂದ್ರ ಸರ್ಕಾರ ಕೊಡುತ್ತಿತ್ತು. ಅಲ್ಲಿಯವರೆಗೆ ಕಾಯಬೇಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.