ದೇಶದಲ್ಲಿ JN1 ಹೊಸ ವೈರಸ್ ಆತಂಕದ ನಡುವೆ ಕೋವಿಡ್​ಗೆ ಬೆಂಗಳೂರಿನಲ್ಲಿ ಮೊದಲ ಬಲಿ

ಬೆಂಗಳೂರು, (ಡಿಸೆಂಬರ್ 20): ದೇಶದಲ್ಲಿ ಕೋವಿಡ್ ರೂಪಾಂತರಿ JN 1 ಹೊಸ ವೈರಸ್ ಪತ್ತೆ ಬಳಿಕ ಬೆಂಗಳೂರಿನಲ್ಲಿ ಮೊದಲ ಸಾವು ಸಂಭವಿಸಿದೆ. ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಬೆಂಗಳೂರಿನ ಚಾಮರಾಜಪೇಟೆಯ 64 ವರ್ಷದ ವೃದ್ಧ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಕಳೆದ ಒಂದು ವಾರದ ಹಿಂದೆಯೇ ಶಿವಾನಂದ್ ಸರ್ಕಲ್ ಬಳಿಯ ಮಲ್ಲಿಗೆ ಆಸ್ಪತ್ರೆಗೆ ದಾಖಲಾಗಿದ್ದು, 15-12-2023ರಂದು ಮೃತ ಪಟ್ಟಿದ್ದಾರೆ. ಕೊವಿಡ್ ಟೆಸ್ಟ್ ನಲ್ಲಿ ಪಾಸಿಟಿವ್ ಕಂಡು ಬಂದಿದೆ. ಆದ್ರೆ, ಮೃತ ವ್ಯಕ್ತಿಗೆ ಯಾವುದೇ ಟ್ರಾವಲ್ ಹಿಸ್ಟರಿ ಇಲ್ಲ. ಇನ್ನು ಮೃತನ ಸಂಪರ್ಕದಲ್ಲಿ ಕಟುಂಬದವರಿಗೆ ಕೊವಿಡ್ ಟೆಸ್ಟ್ ಮಾಡಲಾಗಿದೆ.

ಇನ್ನು ಕೊವಿಡ್ ನಿಂದ ಮೃತಪಟ್ಟ 64 ವರ್ಷದ ವ್ಯಕ್ತಿಯ ಸ್ಯಾಂಪಲ್ಸ್ ಪಡೆದು ಜೀನೋಮ ಸೀಕ್ವೆನ್ಸಿಂಗ್ ಕಳಿಸಲಾಗಿದ್ದು,. ಈ ವಾರದಲ್ಲಿ ರೀಪೋರ್ಟ್ ಬರಲಿದೆ. ಸದ್ಯ ಮೃತ ಪಟ್ಟ 64 ವರ್ಷದ ವ್ಯಕ್ತಿಗೆ ಶ್ವಾಸಕೋಶದ ಸಮಸ್ಯೆ, ಕ್ಷಯ ರೋಗ, ಶ್ವಾಸನಾಳದ ಆಸ್ತಮಾ, ಶ್ವಾಸಕೋಶದ ಕಾಯಿಲೆ , ಹೃದಯ ಸಂಬಂಧಿ ಸಮಸ್ಯೆ ಹಾಗೂ ಅಧಿಕ ರಕ್ತದೊತ್ತಡದ ಸಮಸ್ಯೆ ಇತ್ತು ಎಂದು ತಿಳಿದುಬಂದಿದೆ.

ಮೃತ ವ್ಯಕ್ತಿ ಒಟ್ಟು 10 ಜನರ ಜೊತೆ ಸಂಪರ್ಕಿತನಾಗಿದ್ದು, 4 ಮಂದಿ ಪ್ರೈಮರಿ ಕಾಂಟಾಕ್ಟ್ , ಹಾಗೂ 6 ಮಂದಿ ಸೆಕೆಂಡರಿ ಕಾಂಟಾಕ್ಟ್​ನಲ್ಲಿದ್ದ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಆರೋಗ್ಯಾಧಿಕಾರಿಗಳು ಎಲ್ಲರನ್ನೂ 7 ದಿನದ ವರೆಗೂ ಹೋಂ ಐಸೋಲೇಷನ್ ಮಾಡಿದ್ದಾರೆ. ಅಲ್ಲದೇ ಅಕ್ಕಪಕ್ಕದ ನಿವಾಸಿಗಳನ್ನು ಕೂಡಾ ಪರೀಕ್ಷೆ ನಡೆಸಿದ್ದಾರೆ.

ಕೊರೊನಾ ವೈರಸ್​ನ ಜೆಎನ್​ 1 ಉಪ ತಳಿಯ ಒಟ್ಟು 20 ಸೋಂಕು ಪ್ರಕರಣಗಳು ದೇಶದಲ್ಲಿ ಪತ್ತೆಯಾಗಿವೆ. ಕರ್ನಾಟಕದಲ್ಲಿ ಕೋವಿಡ್​ ಸೋಂಕಿನಿಂದಾಗಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಮಾಹಿತಿ ನೀಡಿದ್ದಾರೆ.