Leelavathi: ನಟಿ ಲೀಲಾವತಿ ಇನ್ನಿಲ್ಲ: ಬಡ ಕಲಾವಿದರಿಗೆ ಪ್ರತಿ ತಿಂಗಳು ಹಣ ಕಳಿಸುತ್ತಿದ್ದ ಜೀವ

86 ವರ್ಷ ತುಂಬು ಜೀವನ ನಡೆಸಿದ್ದ ಹಿರಿಯ ನಟಿ ಲೀಲಾವತಿ ನಿಧನರಾಗಿದ್ದಾರೆ. ಇವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಲೀಲಾವತಿಯವರು ನಟನೆ ಮೂಲಕ ಮಾತ್ರ ಹೆಸರು ಗಳಿಸದೇ ತಮ್ಮ ದಾನದ ಮತ್ತು ಸಹಾಯ ಗುಣಗಳಿಂದ ಮನೆ ಮಾತಾಗಿದ್ದರು. ಕಷ್ಟದಲ್ಲಿರುವ ಬಡ ಕಲಾವಿದರಿಗೆ ನೆರವಾಗುವ ಮೂಲಕ ಕನ್ನಡ ಚಿತ್ರರಂಗದ ಅಮ್ಮ ಎನಿಸಿಕೊಂಡಿದ್ದಾರೆ.

ಚಂದನವನದ ಹಿರಿಯ ನಟಿ ಲೀಲಾವತಿ (Leelavathi) ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಕಳೆದ ಕೆಲ ವರ್ಷಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಕಳೆದ 15 ದಿನಗಳಿಂದ ಲೀಲಾವತಿ ಅವರ ಆರೋಗ್ಯದಲ್ಲಿ ಸಾಕಷ್ಟು ವ್ಯತ್ಯಾಸಗಳಾಗಿತ್ತು. ಹೀಗಾಗಿ ಕನ್ನಡ ಚಿತ್ರರಂಗದ ಅನೇಕ ನಟ-ನಟಿಯರು, ಜನಪ್ರತಿನಿಧಿಗಳು ಲೀಲಾವತಿ ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ಇತ್ತೀಚಿಗೆ ನಟಿ ಲೀಲಾವತಿಯವರ ಆಸೆಯಂತೆ ಪುತ್ರ ವಿನೋದ್​ ರಾಜ್ (Vinod Raj)​ ಸೋಲದೇವನಹಳ್ಳಿಯಲ್ಲಿ ಪಶು ಆಸ್ಪತ್ರೆ ನಿರ್ಮಾಣ ಮಾಡಿದ್ದರು. ಈ ಆಸ್ಪತ್ರೆಯನ್ನು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಅವರು ಉದ್ಘಾಟಿಸಿದ್ದರು.

ಇದಕ್ಕೂ ಮುನ್ನ 2022ರಲ್ಲಿ ಇದೇ ಸೋಲದೇವನಹಳ್ಳಿಯಲ್ಲಿ ಸ್ವಂತ ಖರ್ಚಿನಲ್ಲಿ ನಟಿ ಲೀಲಾವತಿಯವರು ಆಸ್ಪತ್ರೆ ನಿರ್ಮಿಸಿದ್ದರು. ಇವರ ಸಮಾಜಮುಖಿ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಇಷ್ಟು ಮಾತ್ರವಲ್ಲದೆ ನಟಿ ಲೀಲಾವತಿಯವರು ಬಡ ಕಲಾವಿದರಿಗೂ ನೆರವಾಗಿದ್ದರು. ಇತ್ತೀಚಿಗೆ ನಟಿ ಲೀಲಾವತಿ ಅವರ ಮನೆಗೆ ಹಿರಿಯ ನಟ ವೈಜನಾಥ್​ ಬಿರಾದಾರ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ಈ ವೇಳೆ ಅವರು ಲೀಲಾವತಿ ಅವರ ಕೊಡುಗೈ ದಾನದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು.

ಕಷ್ಟದಲ್ಲಿ ಇರುವ ಸಹ ಕಲಾವಿದರನ್ನು ಗುರುತಿಸಿ ಅವರಿಗೆ ಲೀಲಾವತಿಯವರು ಮಾಶಾಸನ ನೀಡುತ್ತಿದ್ದರು. ‘ನಟಿ ಲೀಲಾವತಿಯವರು ನನ್ನನ್ನು ಸೇರಿದಂತೆ ಸಾಕಷ್ಟು ಕಲಾವಿದರಿಗೆ ಪ್ರತಿ ತಿಂಗಳು ಹಣವನ್ನು ನೀಡುತ್ತಿದ್ದಾರೆ. ಇದರಿಂದ ಕಷ್ಟದಲ್ಲಿ ಇರುವ ಕಲಾವಿದರಿಗೆ ಸಹಾಯವಾಗುತ್ತಿದೆ. ಬಣ್ಣ ಹಚ್ಚಿದರೆ ಮಾತ್ರ ನಮ್ಮ ಜೀವನ ನಡೆಯುತ್ತದೆ. ಆದರೆ ಕೊರೊನಾ ನಂತರ ಅವಕಾಶ ಕಡಿಮೆಯಾಗಿದೆ. ಇದರಿಂದ ಸಾಕಷ್ಟು ಕಲಾವಿದರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರಿಗೆ ನಟಿ ಲೀಲಾವತಿಯವರ ಮಾಶಾಸನ ನೀಡುತ್ತಿದ್ದಾರೆ. ಸರ್ಕಾರ ಮಾಡುವ ಕೆಲಸ ಲೀಲಾವತಿಯವರು ಮಾಡುತ್ತಿದ್ದಾರೆ’ ಎಂದು ನಟ ವೈಜನಾಥ್​ ಬಿರಾದಾರ ಹೇಳಿದ್ದರು.