ಆನೇಕಲ್: ಬಾರ್​ನಲ್ಲಿ ಶುರುವಾದ ಹಣದ ಗಲಾಟೆ ಕೊಲೆಯಲ್ಲಿ ಅಂತ್ಯ;1,500 ರೂಪಾಯಿ ವಿಚಾರಕ್ಕೆ ಹಾರಿಹೋಯ್ತು ಪ್ರಾಣ

ಬೆಂಗಳೂರು ಗ್ರಾಮಾಂತರ, ಡಿ.06: ಕೇವಲ 1,500 ರೂಪಾಯಿ ವಿಚಾರಕ್ಕೆ ಕೊಲೆ ನಡೆದಿರುವ ಘಟನೆ ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯ ಸಿಂಗಸಂದ್ರದಲ್ಲಿ ನಡೆದಿದೆ. ಬಾರ್ ನಲ್ಲಿ ಶುರುವಾದ ಹಣದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಸ್ನೇಹಿತನಿಗೆ ಹಣ ಕೊಡಿಸಿದ್ದಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಬಾರ್​ವೊಂದರಲ್ಲಿ ಗೋಪಾಲ್​, ಶಶಿ ಹಾಗೂ ಕರಿಗೌಡ ಎಂಬುವವರು ಮದ್ಯ ಸೇವಿಸುತ್ತಿದ್ದರು. ಇದೇ ವೇಳೆ ಅದೇ ಬಾರ್​ಗೆ ಪ್ರದೀಪ್ ಎಂಬುವವರ​ ಜೊತೆ ಆರೋಪಿ ಗಿರೀಶ್ ಬಂದಿದ್ದಾರೆ. ಕರಿಗೌಡಗೆ 1,500 ರೂಪಾಯಿಯನ್ನು ಆರೋಪಿ ಗಿರೀಶ್​ಗೆ ಕೊಡಬೇಕಿತ್ತು. ಅದರಂತೆ ಆತ ತನ್ನ ಹಣ ಕೇಳಿದಾಗ, ಗಿರೀಶ್ ಅವಾಜ್​ ಹಾಕಿದ್ದ. ಬಳಿಕ ಮಧ್ಯಪ್ರವೇಶಿಸಿದ ಗೋಪಾಲ್ ಎಂಬಾತ, ಗಿರೀಶ್​ಗೆ ಹೊಡೆದು ಹಣ ಕೊಡಿಸಿದ್ದ​.

ಸ್ನೇಹಿತನ ಹಣ ಕೊಡಿಸಿ ಕಿರಿಕ್ ಮಾಡಿಕೊಂಡು ಹೆಣವಾದ ಗೋಪಾಲ್

ಇದಾದ ಬಳಿಕ ಗಿರೀಶ್, ಶಶಿಗೆ ಪೋನ್ ಮಾಡಿ ಅವಾಚ್ಯ ಶಬ್ಧಗಳಲ್ಲಿ ನಿಂದಿಸಿದ್ದ. ಆಮೇಲೆ ಗೋಪಾಲ್, ಕರೆಗೌಡ ಹಾಗೂ ಶಶಿಧರ್, ಗಿರೀಶ್ ಮನೆಗೆ ಹೋಗಿದ್ದರು. ಗಿರೀಶ್​ಗೆ ಸರಿಯಾಗಿ ಮಾತನಾಡುವಂತೆ ಆತನ ಪತ್ನಿ ಬಳಿಯಲ್ಲಿ ಮೂವರು ಹೇಳಿದ್ದರು. ಈ ವೇಳೆ ಅಡುಗೆ ಮನೆಯಿಂದ ಚಾಕು ತಂದು ಬೆನ್ನ ಹಿಂದೆ ಇಟ್ಟುಕೊಂಡಿದ್ದ ಗಿರೀಶ್, ಗೋಪಾಲ್ ಎದೆಗೆ ಚಾಕುವಿನಿಂದ ಚುಚ್ಚಿ ಮನೆಯಿಂದ ಎಸ್ಕೇಪ್ ಆಗಿದ್ದ.

ಕೊಲೆ ಮಾಡಿ ಎಸ್ಕೇಪ್​ ಆದ ಆರೋಪಿಗಾಗಿ ಹುಡುಕಾಟ

ಇನ್ನು ಆತ ಚಾಕು ಇರಿಯುತ್ತಿದ್ದಂತೆ ಆತನ ಸ್ನೇಹಿತರು, ಗೋಪಾಲ್​​ನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಎರಡು ದಿನಗಳ ಬಳಿಕ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾನೆ. ಆರೋಪಿ ಗಿರೀಶ್​ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಈ ಕುರಿತು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ದಾಖಲಾಗಿದ್ದು, ಬಾರ್​ನಲ್ಲಿ ನೂಕಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.