ಮಧ್ಯಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ ಕಾರಣವಾದ ಐದು ಅಂಶಗಳು ಇಲ್ಲಿವೆ

ಭೋಪಾಲ್, ಡಿಸೆಂಬರ್ 3: ಮಧ್ಯಪ್ರದೇಶದಲ್ಲಿ ಬಿಜೆಪಿ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸುವುದು ಬಹುತೇಕ ದೃಢಪಟ್ಟಿದೆ. ಮಧ್ಯಪ್ರದೇಶದ ಚುನಾವಣಾ ಫಲಿತಾಂಶದ ಜೊತೆಗೆ, ಅದಕ್ಕೆ ಕಾರಣವಾದ ಅಂಶಗಳ ಬಗ್ಗೆ ವಿಶ್ಲೇಷಣೆಯೂ ರಾಜಕೀಯ ವಲಯದಲ್ಲಿ ಪ್ರಾರಂಭವಾಗಿದೆ. ಮಧ್ಯಪ್ರದೇಶದಲ್ಲಿ ಬಿಜೆಪಿ ಭರ್ಜರಿ ಗೆಲುವಿಗೆ ಐದು ಪ್ರಮುಖ ಕಾರಣಗಳನ್ನು ಗುರುತಿಸಲಾಗಿದೆ. ಅವುಗಳನ್ನು ಇಲ್ಲಿ ನೀಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಮಧ್ಯಪ್ರದೇಶ ಚುನಾವಣಾ ಉಸ್ತುವಾರಿ ಮತ್ತು ಕೇಂದ್ರ ಸಚಿವ ಭೂಪೇಂದ್ರ ಯಾದವ್, ಸಹ ಉಸ್ತುವಾರಿ ಅಶ್ವಿನಿ ವೈಷ್ಣವ್ ಅವರ ಚುನಾವಣಾ ತಂತ್ರ ಮತ್ತು ಬಿರುಸಿನ ಪ್ರಚಾರದ ನಂತರ ಮಧ್ಯಪ್ರದೇಶದಲ್ಲಿ ಬಿಜೆಪಿ ಗೆದ್ದ ರೀತಿ ರಾಜಕೀಯ ವಲಯದ ಗಮನ ಸೆಳೆದಿದೆ.

ಲಾಡ್ಲಿ ಬೆಹ್ನಾ ಯೋಜನೆ

ಬಿಜೆಪಿ ಸರ್ಕಾರವು ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ಲಾಡ್ಲಿ ಬೆಹ್ನಾ ಯೋಜನೆಯನ್ನು ಪ್ರಾರಂಭಿಸಿತು. ಇದರಡಿ 1.31 ಕೋಟಿ ಮಹಿಳೆಯರಿಗೆ ಆರಂಭದಲ್ಲಿ 1000 ರೂಪಾಯಿ ಹಾಗೂ ನಂತರ 1250 ರೂಪಾಯಿ ಆರ್ಥಿಕ ನೆರವು ನೀಡಲಾಗಿದೆ. ಅದನ್ನು 3 ಸಾವಿರ ರೂ.ಗೆ ಹೆಚ್ಚಿಸುವ ಭರವಸೆ ನೀಡಲಾಗಿತ್ತು. ಈ ಯೋಜನೆ ಬಿಜೆಪಿಯ ಚುನಾವಣಾ ಮಾಸ್ಟರ್ ಸ್ಟ್ರೋಕ್ ಎಂದೇ ಹೇಳಲಾಗುತ್ತಿದೆ. ಇದಲ್ಲದೇ ರೈತರಿಗೆ ಗೋಧಿ, ಭತ್ತದ ಬೆಂಬಲ ಬೆಲೆ ಹೆಚ್ಚಿಸಿ ಯುವಕರಿಗೆ ಉದ್ಯೋಗ ಕಲ್ಪಿಸುವುದಾಗಿ ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಇದಲ್ಲದೇ ಕೇಂದ್ರ ಸರ್ಕಾರದ ಉಚಿತ ಪಡಿತರ, ಪ್ರಧಾನಮಂತ್ರಿ ಆವಾಸ್​ ಯೋಜನೆಯಿಂದ ತೊಡಗಿ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ನೀಡುವ ಯೋಜನೆಗಳು ಬಿಜೆಪಿ ಪರ ಮತಗಳನ್ನಾಗಿ ಪರಿವರ್ತಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಆಡಳಿತ ವಿರೋಧಿ ಅಲೆ ಕೊನೆಗಾಣಿಸಲು ಹೆಣೆದ ತಂತ್ರ

ರಾಜ್ಯದಲ್ಲಿ 18 ವರ್ಷಗಳಿಂದ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದ ವಿರುದ್ಧದ ಆಡಳಿತ ವಿರೋಧಿ ಅಲೆ ಕೊನೆಗಾಣಿಸಲು ಬಿಜೆಪಿ ರಣತಂತ್ರ ಹೆಣೆದಿತ್ತು. ಇದಕ್ಕಾಗಿಯೇ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂಬುದನ್ನು ಬಿಜೆಪಿ ಬಹಿರಂಗಪಡಿಸಲೇ ಇಲ್ಲ. ಚುನಾವಣೆ ಫಲಿತಾಂಶದ ನಂತರ ಸಿಎಂ ಆಯ್ಕೆ ಎಂದು ಪಕ್ಷವು ಘೋಷಿಸಿತು. ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸು ಹಾಗೂ ಆಡಳಿತವನ್ನು ಮುಂದಿಟ್ಟುಕೊಂಡೇ ಚುನಾವಣೆ ಎದುರಿಸಲಾಯಿತು. ಕೇಂದ್ರ ಸಚಿವರು ಮತ್ತು ಸಂಸದರನ್ನು ಕಣಕ್ಕಿಳಿಸುವ ಮೂಲಕ ಆಕ್ರೋಶಗೊಂಡ ಕಾರ್ಯಕರ್ತರನ್ನು ಸಮಾಧಾನಪಡಿಸುವ ಕಾರ್ಯಕ್ಕೆ ಬಿಜೆಪಿ ಮುಂದಾಯಿತು. ಅನುಭವಿ ನಾಯಕರಿಗೆ ತಮ್ಮ ಕ್ಷೇತ್ರಗಳ ಜೊತೆಗೆ ಇತರ ಕ್ಷೇತ್ರಗಳನ್ನೂ ಗೆಲ್ಲಿಸಿಕೊಂಡು ಬರುವ ಹೊಣೆ ವಹಿಸಲಾಗಿತ್ತು.

ಎರಡು ವರ್ಷಗಳ ಹಿಂದಿನಿಂದಲೇ ಬುಡಕಟ್ಟು ಮತದಾರರನ್ನು ತಲುಪುವ ಪ್ರಯತ್ನ

ಬುಡಕಟ್ಟು ಮತದಾರರನ್ನು ಸೆಳೆಯಲು ಬಿಜೆಪಿ ಎರಡು ವರ್ಷಗಳ ಹಿಂದೆಯೇ ಕೆಲಸ ಆರಂಭಿಸಿತ್ತು. ಪೆಸಾ ಕಾಯ್ದೆ ಸೇರಿದಂತೆ ಹಲವು ಯೋಜನೆಗಳನ್ನು ಆರಂಭಿಸಿತ್ತು. ಬುಡಕಟ್ಟು ಮತದಾರರನ್ನು ಓಲೈಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ತಮ್ಮೆಲ್ಲ ಶಕ್ತಿಯನ್ನು ಬಳಸಿದರು. ಭೋಪಾಲ್‌ನಲ್ಲಿ ನಡೆದ ಬುಡಕಟ್ಟು ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಭಾಗವಹಿಸಿದ್ದರು. ಜಬಲ್ಪುರದಲ್ಲಿ ನಡೆದ ರಾಜಾ ಶಂಕರ್ ಶಾ ಮತ್ತು ವಿಜಯ್ ಶಾ ಅವರ ಹುತಾತ್ಮ ಕಾರ್ಯಕ್ರಮದಲ್ಲಿ ಅಮಿತ್ ಶಾ ಭಾಗವಹಿಸಿದ್ದರು. ಪ್ರಧಾನಮಂತ್ರಿಯವರು ಶಹದೋಲ್‌ನಲ್ಲಿ ಬುಡಕಟ್ಟು ಸಮುದಾಯದೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಪರಿಶಿಷ್ಟ ಜಾತಿ ವರ್ಗದ ಕಲ್ಯಾಣಕ್ಕಾಗಿ ಸಾಗರದಲ್ಲಿ ಸಂತ ರವಿದಾಸ್ ದೇವಾಲಯದ ಶಂಕುಸ್ಥಾಪನೆಯನ್ನೂ ಪ್ರಧಾನಮಂತ್ರಿಯವರು ನೆರವೇರಿಸಿದರು. ಬಿಜೆಪಿ ಎಲ್ಲ ವರ್ಗದವರನ್ನು ಒಲಿಸಿಕೊಳ್ಳಲು ಪ್ರಯತ್ನಿಸಿತ್ತು.

ಅಮಿತ್​ ಶಾ ತಂತ್ರಗಾರಿಕೆ

ಖುದ್ದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಚುನಾವಣಾ ತಂತ್ರಗಾರಿಕೆಯನ್ನು ಮಾಡಿದ್ದರು. ತಮ್ಮ ನಂಬಿಕಸ್ಥ ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ಅವರನ್ನು ಚುನಾವಣಾ ಉಸ್ತುವಾರಿ ಹಾಗೂ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಚುನಾವಣಾ ಸಹ ಉಸ್ತುವಾರಿಯನ್ನಾಗಿ ಮಾಡಿ ಮಧ್ಯಪ್ರದೇಶಕ್ಕೆ ಕಳುಹಿಸಿದರು. ಶಾ ಸ್ವತಃ ಅನೇಕ ಸಭೆಗಳನ್ನು ನಡೆಸಿದರು. ಈ ಮೂಲಕ ಸಿಟ್ಟಿಗೆದ್ದ ಅತೃಪ್ತ ಕಾರ್ಯಕರ್ತರನ್ನು ಒಗ್ಗೂಡಿಸಿದರು. ಇದಾದ ಬಳಿಕ ಚುನಾವಣಾ ಪ್ರಚಾರಕ್ಕೆ ಸಂಪೂರ್ಣ ಶಕ್ತಿ ತುಂಬಿದರು. ಬಿಜೆಪಿ ಪರವಾಗಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರು ಮತ್ತು ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಬಿರುಸಿನ ಪ್ರಚಾರ ನಡೆಸಿದರು.

ರಾಮಮಂದಿರ, ಸನಾತನ ವಿವಾದ ವಿಚಾರಗಳ ಸಮರ್ಥ ಬಳಕೆ

ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವ ಕುರಿತು ಇಂಡಿಯಾ ಮೈತ್ರಿಕೂಟದ ಸದಸ್ಯ, ಡಿಎಂಕೆ ನಾಯಕ ಉದಯನಿಧಿ ಹೇಳಿಕೆಯನ್ನು ಬಿಜೆಪಿ ಸಮರ್ಥವಾಗಿ ಚುನಾವಣೆಗೆ ಬಳಸಿಕೊಂಡಿತು. ಬಿಜೆಪಿಯ ದೊಡ್ಡ ನಾಯಕರು ಈ ವಿಷಯವನ್ನು ನಿರಂತರವಾಗಿ ಪ್ರಸ್ತಾಪಿಸಿದರು. ರಾಮ ಮಂದಿರದ ಹೋರ್ಡಿಂಗ್‌ಗಳನ್ನು ಹಾಕುವ ಬಗ್ಗೆ ಕಾಂಗ್ರೆಸ್‌ನ ದೂರನ್ನು ಬಿಜೆಪಿಯು ಹಿಂದೂ ವಿರೋಧಿ ಎಂದು ಬಿಂಬಿಸಿತು. ಮೃದು ಹಿಂದುತ್ವದ ಹಾದಿ ಹಿಡಿದಿದ್ದ ಕಾಂಗ್ರೆಸ್‌ಗೆ ಈ ಸಮಸ್ಯೆಗಳು ನಷ್ಟವನ್ನುಂಟುಮಾಡಿದರೆ, ಬಿಜೆಪಿ ಬಹುಪಾಲು ಮತದಾರರನ್ನು ಗೆಲ್ಲಿಸುವಲ್ಲಿ ಈ ತಂತ್ರಗಾರಿಕೆ ಯಶಸ್ವಿಯಾಯಿತು.