ಕೇರಳ: ಎರಡು ಕೆಎಸ್​ಆರ್​ಟಿಸಿ ಬಸ್​ಗಳ​ ನಡುವೆ ಅಪಘಾತ, 30ಮಂದಿಗೆ ಗಾಯ

ಕೇರಳದಲ್ಲಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಎರಡು ಆರ್‌ಟಿಸಿ ಬಸ್‌ಗಳು ಪರಸ್ಪ ಹೊಡೆದ ಪರಿಣಾಮ ಎರಡು ಬಸ್‌ಗಳಲ್ಲಿದ್ದ 30 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೇರಳದ ತಿರುವನಂತಪುರಂ-ಕನ್ಯಾಕುಮಾರಿ ರಾಷ್ಟ್ರೀಯ ಹೆದ್ದಾರಿಯ ನೆಯ್ಯಟ್ಟಿಂಕರ ಬಳಿ ಶನಿವಾರ ರಾತ್ರಿ ಅಪಘಾತ ಸಂಭವಿಸಿದೆ.

ಕೇರಳ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಎರಡು ಬಸ್‌ಗಳು ಸರಿಯಾದ ಬೆಳಕಿನ ಕೊರತೆಯಿಂದ ಪರಸ್ಪರ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿವೆ. ಅಪಘಾತದ ಬಗ್ಗೆ ಮಾಹಿತಿ ಪಡೆದ ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಸ್ಥಳೀಯರೊಂದಿಗೆ ಸೇರಿ ಗಾಯಾಳುಗಳನ್ನು ಬಸ್‌ನಿಂದ ಹೊರಕ್ಕೆ ಕರೆತಂದಿದ್ದಾರೆ.

ಚಿಕಿತ್ಸೆಗಾಗಿ ಅವರನ್ನು ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆ, ನೆಯ್ಯಾಟ್ಕರ್ ಜಿಲ್ಲಾ ಜನರಲ್ ಆಸ್ಪತ್ರೆ ಮತ್ತು ನಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯಲ್ಲಿ ಯಾವುದೇ ಸಾವು ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದು, ಅಪಘಾತಕ್ಕೆ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.

ಗಾಯಗೊಂಡ ಜನರನ್ನು ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆ, ನೆಯ್ಯಾಟ್ಕರ್ ಜಿಲ್ಲಾ ಜನರಲ್ ಆಸ್ಪತ್ರೆ ಮತ್ತು ನಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಎನ್‌ಐ ವರದಿ ಮಾಡಿದೆ. ಸುದ್ದಿ ಸಂಸ್ಥೆ ANI ಹಂಚಿಕೊಂಡ ವೀಡಿಯೊದಲ್ಲಿ, ಡಿಕ್ಕಿಯ ನಂತರ ಎರಡೂ ಬಸ್‌ಗಳ ಮುಂಭಾಗದ ಭಾಗಗಳು ತೀವ್ರವಾಗಿ ಹಾನಿಗೊಳಗಾಗಿರುವುದನ್ನು ಕಾಣಬಹುದು.