ಕಂಬಳ ನೋಡಲು ಮಂಗಳೂರಿನಿಂದ ಬೆಂಗಳೂರಿಗೆ ಬಂದಿದ್ದ ಇಬ್ಬರು ದುರಂತ ಅಂತ್ಯ!

ತುಮಕೂರು, (ನವೆಂಬರ್ 26): ಬೋರ್​ವೆಲ್ ಲಾರಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಚಿಗಣಿಪಾಳ್ಯ ಬಳಿ ನಡೆದಿದೆ, ದಕ್ಷಿಣ ಕನ್ನಡ ಜಿಲ್ಲೆಯ ಪರೆರಾರ ಬಜಪ್ಪೆ ಗ್ರಾಮದ ನಿವಾಸಿ ಕಿಶಾನ್ ಶೆಟ್ಟಿ(20) ಹಾಗೂ ಭಟ್ಟರ ತೋಟದ ಫಿಲಿಪ್ಸ್​​ ನೇರಿ(32) ಮೃತ ದುರ್ದೈವಿಗಳು. ಬೆಂಗಳೂರಿನಲ್ಲಿ ಕಂಬಳ ನೋಡಿ ವಾಪಸ್ ಆಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ಇನ್ನು ಘಟನೆಯಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಕುಣಿಗಲ್ ‌ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದ್ದು, ಪೊಲೀಸರು ಲಾರಿ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕರಾವಳಿ ಭಾಗದಲ್ಲಿ ಕಂಬಳ ಫೇಮಸ್, ಅಲ್ಲಿನ ಜನರಿಗೆ ಕಂಬಳ ಅಂದ್ರೆ ಅಚ್ಚುಮೆಚ್ಚು, ಅದಕ್ಕಾಗಿಯೇ ಮಂಗಳೂರಿನ ಬೆಂಗಳೂರಿಗೆ ಕಂಬಳ ನೋಡಲು ಬಂದಿದ್ದರು. ಆದ್ರೆ, ಕಂಬಳ ಕಣ್ತುಂಬಿಕೊಂಡು ವಾಪಸ್ ಮನೆಗೆ ಹೋಗಬೇಕಿದ್ದರೆ ಈ ದುರಂತ ಸಂಭವಿಸಿದೆ.

ಇನ್ನು ಲಾರಿ ಗುದ್ದಿದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣವಾಗಿ ಅಪ್ಪಚ್ಚಿಯಾಗಿದ್ದು, ಪೊಲೀಸರು ಹಾಗೂ ಸ್ಥಳೀಯರು ಹರಸಾಹಸಪಟ್ಟು ಮೃತದೇಹಗಳನ್ನು ಹೊರತೆಗೆದಿದ್ದಾರೆ.